BELAGAVI NEWS :
ಬೆಂಗಳೂರು: ಆರ್ ಎಸ್ ಎಸ್ ಕುರಿತು ಸಚಿವ ಪ್ರಿಯಾಂಕರಿಗೆ ನೀಡಿರುವ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸಿ.ಟಿ. ರವಿ, " ಆರ್ ಎಸ್ ಎಸ್ ಬಗ್ಗೆ ಪ್ರಿಯಾಂಕ ಖರ್ಗೆ ಅವರ ತಂದೆಯಿಂದಲೂ ಏನು ಮಾಡಲು ಸಾಧ್ಯವಾಗಿಲ್ಲ. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ, ಆ ಬೆಂಕಿ ನಿಮ್ಮನ್ನು ಸುಡುತ್ತದೆ" ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಐ ವಿಲ್ ಕ್ರಶ್ ಆರ್ ಎಸ್ ಎಸ್ ಎಂದು ನೆಹರೂ ಹೇಳಿದ್ದರು. ಆದರೆ ಆರ್ ಎಸ್ ಎಸ್ ಅನ್ನು ಯಾರಿಂದಲೂ ನಿಲ್ಲಿಸಲು ಆಗಿಲ್ಲ. ಇದು ರಾಜಕೀಯ ಪ್ರೇರಿತ ಸಂಘಟನೆಯ ಅಲ್ಲ. ನೊಂದಣಿ ಮಾಡಿಸಿಕೊಳ್ಳಬೇಕಾದ ವ್ಯಾವಹಾರಿಕ ಸಂಸ್ಥೆಯು ಅಲ್ಲ" ಎಂದು ಹೇಳಿದರು.
ರಾಜ್ಯದಲ್ಲಿನ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳು, ಮಾದಕ ವಸ್ತುಗಳ ಜಾಲ, ಮಹಿಳೆಯರ ನಾಪತ್ತೆ ಪ್ರಕರಣಗಳು ಮತ್ತು ಬಾಂಬ್ ತಯಾರಿಕಾ ಚಟುವಟಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದ ಅವರು, " ಆರ್ ಎಸ್ ಎಸ್ ದೇಶದ್ರೋಹಿ ಸಂಘಟನೆ ಅಲ್ಲ. ಗೃಹ ಸಚಿವರು ಗುಂಡಾಗಳಂತೆ ಅಲ್ಲ. ತಮ್ಮ ಹುದ್ದೆಗೆ ತಕ್ಕಂತೆ ವರ್ತಿಸಬೇಕು" ಎಂದು ಟೀಕಿಸಿದರು.
ಮುಂದುವರಿದು, "ಈಗ ದಬ್ಬಾಳಿಕೆ ಮಾಡಿದರೆ ಪಶ್ಚಿಮಬಂಗಾಳದಂತಹ ಪರಿಸ್ಥಿತಿ ಎದುರಾಗಬಹುದು. ಬೆಂಕಿ ಹಚ್ಚುವ ರಾಜಕಾರಣ ಬೇಡ, ಅದು ಕೊನೆಗೆ ನಿಮ್ಮನ್ನು ಸುಡುತ್ತದೆ" ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನವರು ಈ ಬಗ್ಗೆ ಪಾಠ ಮಾಡಬೇಕಿಲ್ಲ:
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಸಂಬಂಧದ ಬಗ್ಗೆ ಕಾಂಗ್ರೆಸ್ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ. ರವಿ, "ದೇವೇಗೌಡರಿಗೆ ಸಿಕ್ಕಿರುವ ಗೌರವ ಅಧಿಕಾರದಿಂದ ಬಂದದ್ದಲ್ಲ, ಅದು ಅವರಿಗೆ ಸಹಜವಾಗಿ ದೊರೆತಿರುವುದು. ಮೋದಿಯವರು ಅವರ ಮೇಲೆ ಸಹಜ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಾಠ ಹೇಳಬೇಕಿಲ್ಲ"ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಅಂತ್ಯ ಸಂಸ್ಕಾರದ ವಿಚಾರ ಹಾಗೂ ಮನಮೋಹನ್ ಸಿಂಗ್ ಅವರಿಗೆ ನೀಡಿದ ವರ್ತನೆಗಳನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ನಾಯಕತ್ವದ ವಿರುದ್ಧ ಟೀಕಿಸಿದರು.
"ಅಂಬೇಡ್ಕರ್ ಅವರಿಗೆ ಸಮಾಧಿಗೆ ಸ್ಥಳ ನೀಡಿದವರು ಈಗ ಗೌರವದ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಮತ್ತು ದೇವೇಗೌಡರ ನಡುವಿನ ಸಂಬಂಧ ರಾಜಕೀಯ ಅಥವಾ ವ್ಯಾವಹಾರಿಕವಲ್ಲ. ಅದು ಅಣ್ಣ - ತಮ್ಮ ಅಥವಾ ಅಪ್ಪ - ಮಗನಂತಿರುವ ಆತ್ಮೀಯ ಸಂಬಂಧ" ಎಂದು ಹೇಳಿದರು.
ಜನರೇ ನಟ್ಟು ಬೋಲ್ಟು ಟೈಟ್ ಮಾಡುತ್ತಾರೆ:
ರಾಜ್ಯ ಸರ್ಕಾರದ ಒಳಗಿನ ಖಾತೆ ಹಂಚಿಕೆ ವಿಚಾರವನ್ನು ಶೀಘ್ರ ಬಗೆಹರಿಸಬೇಕು ಎಂದು ಸಲಹೆ ನೀಡಿರುವ ಮಾಜಿ ಸಚಿವ ಸಿ.ಟಿ ರವಿ, "ಒಳ್ಳೆಯ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಶುಭ ಹಾರೈಸುತ್ತೇನೆ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಜವಾಬ್ದಾರಿ. ಇದು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುವುದರಿಂದ ಬೇಗ ಪರಿಹರಿಸಬೇಕು" ಎಂದು ಹೇಳಿದರು.
ಮುಂದುವರಿದು, "ಹಿಂದಿನ ಅವಧಿಯಂತೆ ಭ್ರಷ್ಟಾಚಾರ ನಡೆಯದಂತೆ ತಡೆಯಿರಿ.40% ಕಮಿಷನ್, ಪಿಸಿಎಂ ಎಂದು ಆರೋಪ ಮಾಡಿದ್ದೀರಿ. ಈಗ ಗುತ್ತಿಗೆದಾರರು ನಿಮ್ಮ ಮೇಲೆಯೇ 60 % ಕಮಿಷನ್ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕಡಿಮೆ ಮಾಡಿ, ನಟ್ಟು- ಬೋಲ್ಟು ಟೈಟ್ ಮಾಡಿಕೊಳ್ಳಿ. ಇಲ್ಲವಾದರೆ ಮುಂದೆ ಜನರೇ ನಿಮ್ಮ ನಟ್ಟು ಬೋಲ್ಟು ಟೈಟ್ ಮಾಡುತ್ತಾರೆ" ಎಂದು ಸರ್ಕಾರದ ವಿರುದ್ಧ ಟೀಕಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಎನ್ಡಿಎ 3ನೇ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ ಗೂ ಸ್ಪಷ್ಟ ಬಹುಮತ ಇಲ್ಲ. ಬಿಜೆಪಿ ಹೆಚ್ಚುವರಿ ಮತಗಳನ್ನು ಜೆಡಿಎಸ್ ಗೆ ನೀಡುತ್ತೇವೆ. ಜೆಡಿಎಸ್ ಸೂಕ್ತ ತಂತ್ರಗಾರಿಕೆ ರೂಪಿಸಿ ಯಶಸ್ವಿಯಾದರೆ ಗೆಲವು ಸಾಧಿಸಬಹುದು" ಎಂದು ಹೇಳಿದರು.
Also Read:
ಓಟಿಟಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 'ಧುರಂಧರ್: ದಿ ರಿವೆಂಜ್' ಐದು ಕೋಟಿ ವೀಕ್ಷಣೆ ದಾಖಲು