Belagavi News:
ರಾಯಚೂರು: ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರನ್ನು 'ಕುಡುಕ' ಎಂದು ಬಿಂಬಿಸುವ ರೀತಿಯಲ್ಲಿ ಕೆಪಿಸಿಸಿ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವುದಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರುನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
" ಒಂದು ರಾಜಕೀಯ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು 'ಕುಡುಕ' ಎಂದು ಪೋಸ್ಟ್ ಮಾಡುತ್ತಾರೆ ಅಂದರೆ, ಆ ಪಕ್ಷದ ಮಟ್ಟ ಚರಂಡಿ ನೀರಿಗಿಂತ ಕೆಳಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಅದೇ ಸಾಕ್ಷಿ" ಎಂದು ಹೇಳಿದರು.
ತಮ್ಮ ವೈಯಕ್ತಿಕ ಜೀವನ ಶೈಲಿಯ ಬಗ್ಗೆ ಮಾತನಾಡಿದ ಅವರು, " ನಾನು ಹೇಗಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ಕಾಫಿ, ಟೀ ಕುಡಿಯುವುದಕ್ಕೂ ನಾನು ಹಿಂದೆ ಮುಂದೆ ನೋಡುತ್ತೇನೆ. ಆದರೆ ನನ್ನನ್ನು ಕುಡುಕ ಎಂದು ತೋರಿಸುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು"ಎಂದು ಕಿಡಿಕಾರಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ ಸಿಟಿ ರವಿ, " ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡುವುದನ್ನು ಯಾರಾದರೂ ನೋಡಿದ್ದೀರಾ? ಅಂತಹ ಒಂದು ಘಟನೆಯನ್ನು ತೋರಿಸಲಿ" ಎಂದು ಸವಾಲ್ ಹಾಕಿದರು.
ರಾಜಕೀಯವಾಗಿ ಎದುರಿಸಲು ಸಾಧ್ಯವಾಗದಾಗ ವೈಯಕ್ತಿಕ ಮಟ್ಟದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು," ಒಬ್ಬ ವ್ಯಕ್ತಿಯನ್ನು ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದಿದ್ದಾಗ ಅಪಪ್ರಚಾರ ಮತ್ತು ಅಪನಂಬಿಕೆ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್ನ ಇಂದಿನ ಸ್ಥಿತಿಯೇ ಅದಕ್ಕೆ ಸಾಕ್ಷಿ" ಎಂದು ವಾಗ್ದಾಳಿ ನಡೆಸಿದರು.