Belagavi News:
ಬೆಂಗಳೂರು: ಆನ್ ಲೈನ್ ರಮ್ಮಿ ಗೇಮಿಂಗ್ ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ED) ಮಹತ್ವದ ಕ್ರಮ ಕೈಗೊಂಡಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಆಟಗಾರರಿಗೆ ವಂಚನೆ ನಡೆಸಿದ ಆರೋಪದ ಸಂಬಂಧ ಬೆಂಗಳೂರು ವಲಯದ ಇ.ಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯದಲ್ಲಿ ಅಭಿಯೋಜನಾ (ಪ್ರಾಸಿಕ್ಯೂಷನ್) ದೂರು ದಾಖಲಿಸಿದ್ದಾರೆ.
ಪ್ರಕರಣದಲ್ಲಿ Gameskraft techanologies Rummytime technologies private limited ಸೇರಿದಂತೆ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿಕಾಸ್ ತನೇಜಾ, ಪೃಥ್ವಿರಾಜ್ ಸಿಂಗ್, ದೀಪಕ್ ಸಿಂಗ್ ಅಹ್ಲಾವತ್ ಹಾಗೂ ಇತರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ತೆಲಂಗಾಣದಲ್ಲಿ ದಾಖಲಾಗಿದ್ದ ಹಲವು ಎಫ್ಐಆರ್ ಗಳ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇ.ಡಿ ತನಿಖೆ ಆರಂಭಿಸಿತ್ತು.
ರಮ್ಮಿ ವೇದಿಕೆಗಳ ಮೂಲಕ ವಂಚನೆ ಆರೋಪ
ಇ.ಡಿ ತನಿಖೆಯ ಪ್ರಕಾರ, Rummy culture, Rummy prime, Playship Rummy ಮತ್ತು Rummytime ಸೇರಿದಂತೆ ಹಲವು ಆನ್ ಲೈನ್ ರಮ್ಮಿ ವೇದಿಕೆಗಳ ಮೂಲಕ ದೊಡ್ಡ ಪ್ರಮಾಣದ ಅಕ್ರಮ ವೈವಾಹಾರ ನಡೆಸಲಾಗಿದೆ ಎನ್ನಲಾಗಿದೆ.
ಆರೋಪದಂತೆ, ಪ್ರತಿ ಪಂದ್ಯದಲ್ಲೂ ಆಟಗಾರರಿಂದ 10 ರಿಂದ 15 ಶೇಕಡಾ ಕಮಿಷನ್ ಅಥವಾ ಪ್ಲಾಟ್ ಫಾರ್ಮ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ನ್ಯಾಯಸಮ್ಮತ ಆಟದ ವಾತಾವರಣ ಕಲ್ಪಿಸುವ ಬದಲು, ಕಂಪ್ಯೂಟರ್ ಆಧಾರಿತ 'ಬೋಟ್' ಪ್ರೋಗ್ರಾಂಗಳನ್ನು ಬಳಸಿಕೊಂಡು ಆಟಗಾರರು ಸೋಲುವಂತೆ ಮಾಡಲಾಗುತ್ತಿತ್ತು ಎಂದು ಇ.ಡಿ ಆರೋಪಿಸಿದೆ.
ಉಚಿತ ಬೋನಸ್, ರೆಫೆರಲ್ ಆಫರ್ ಮೂಲಕ ಆಮಿಷ
ಆಟಗಾರರನ್ನು ನಿರಂತರವಾಗಿ ಸೆಳೆಯಲು ಉಚಿತ ಬೋನಸ್, ರೆಫರಲ್ ಯೋಜನೆಗಳು ಹಾಗೂ ಪುಶ್ ನೋಟಿಫಿಕೇಶನ್ ಗಳ ಮೂಲಕ ಅಮಿಷ ಒಡ್ಡಲಾಗುತ್ತಿತ್ತು. ಗೆದ್ದ ಹಣ ಅಥವಾ ಡೆಪಾಸಿಟ್ ಮೊತ್ತವನ್ನು ವಾಪಸ್ ಪಡೆಯಲು 5ರಿಂದ 10 ಶೇಕಡಾ ವಿತ್ ಡ್ರಾ ಶುಲ್ಕ ವಿಧಿಸಿ, ಮತ್ತೆ ಆಟದಲ್ಲೇ ಹಣ ಹೊಡಲು ಒತ್ತಡ ಹೇರುವ ತಂತ್ರ ಅನುಸರಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಪ್ರಕರಣಗಳ ಉಲ್ಲೇಖ
ಹಣ ಕಳೆದುಕೊಂಡ ಪರಿಣಾಮ ಅನೇಕ ಆಟಗಾರರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟಣೆಗಳೂ ವರದಿಯಾಗಿವೆ ಎಂದು ಇ.ಡಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
₹ 19,984 ಕೋಟಿ ಅಕ್ರಮ ಆದಾಯದ ಆರೋಪ
ಇ.ಡಿ ಅಂದಾಜಿನ ಪ್ರಕಾರ, 2017-18 ರಿಂದ 2025-26 ರ ಅವಧಿಯಲ್ಲಿ ಈ ಕಂಪನಿಗಳು ಕಮಿಷನ್ ರೂಪದಲ್ಲಿ ಸುಮಾರು ₹19,984 ಕೋಟಿ ಅಕ್ರಮ ಆದಾಯ ಗಳಿಸಿವೆ. ಈ ಹಣವನ್ನು ಷೇರುದಾರರಿಗೆ ಡಿವಿಡೆಂಡ್ ಹಾಗೂ ಶೇರ್ ಬೈಬ್ಯಾಕ್ ಮೂಲಕ ಹಂಚಿ, ಮ್ಯೂಚುವಲ್ ಫಂಡ್, ಬಾಂಡ್ ಗಳು ಮತ್ತು ಐಷಾರಾಮಿ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿ ಕಾನೂನುವಾದ ಆದಾಯದಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
₹2, 401 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಪ್ರಕರಣದ ತನಿಖೆ ಮುಂದುವರಿಸಿರುವ ಇ.ಡಿ ಆರೋಪಿಗಳು ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿದ್ದ ಸುಮಾರು ₹2, 401 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮಗಳ ಸಾಧ್ಯತೆ ಇದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.