Belagavi News:
ಜಮ್ಮು ಮತ್ತು ಕಾಶ್ಮೀರ್: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದ ಭಾರತ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಪಾಕಿಸ್ತಾನದಲ್ಲಿ ಇದೀಗ ಪ್ರವಾಹದ ಆತಂಕ ಎದುರಾಗಿದೆ. ತನ್ನ ಪಾಲಿನ ನೀರನ್ನು ಭಾರತ ತಡೆಹಿಡಿದಿದೆ ಎಂದು ಆರೋಪಿಸಿದ್ದ ಪಾಕಿಸ್ತಾನ್, ಇತ್ತೀಚಿನವರೆಗೂ ನೀರಿನ ಕೊರತೆ ಕುರಿತು ಕಳವಳ ವ್ಯಕ್ತಪಡಿಸುತ್ತಿತ್ತು.
ಆದರೆ, ಜಮ್ಮು ಮತ್ತು ಕಾಶ್ಮೀರದ ಡೋಡಾ ಮತ್ತು ಕಿಶ್ತ್ವಾರ್ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚೆನಾಬ್ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಹೆಚ್ಚುವರಿ ನೀರಿನ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿರುವ ಬಾಗ್ಲಿಹಾರ್ ಅಣೆಕಟ್ಟಿನ ಮೂರು ಗೇಟ್ ಗಳನ್ನು ಭಾರತ ಸೋಮವಾರ ತೆರೆಯಿತು.
ಚೆನಾಬ್ ನದಿಯ ಹರಿವಿನ ಮೇಲ್ವಿಚಾರಣೆ ಮತ್ತು ಅಣೆಕಟ್ಟಿನ ಸುರಕ್ಷತಾ ನಿರ್ವಹಣೆಯ ಭಾಗವಾಗಿ ನೀರು ಬಿಡುಗಡೆ ಮಾಡಲಾಗಿದ್ದು, ಕೆಳಹರಿವಿನ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಗ್ಲಿಹಾರ್ ಆಣೆಕಟ್ಟಿನ ನೀರು ನಿರ್ವಹಣೆ ಸಂಬಂಧಿತ ಬೆಳವಣಿಗೆಗಳು ಭಾರತ - ಪಾಕಿಸ್ತಾನ ನಡುವಿನ ಸಿಂಧೂ ನದಿ ನೀರು ಹಂಚಿಕೆ ವಿಚಾರದ ಚರ್ಚೆಗೆ ಮತ್ತೊಮ್ಮೆ ಕೇಂದ್ರಬಿಂದುವಾಗಿವೆ.
ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಾಗ್ಲಿಹಾರ್ ಅಣೆಕಟ್ಟಿನ ಗೇಟ್ ಗಳನ್ನು ತೆರೆಯುವುದರಿಂದ ನದಿಯ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಪಾಕಿಸ್ತಾನದ ಕೆಳಹರಿವಿನ ಪ್ರದೇಶಗಳಲ್ಲಿರುವ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಉಂಟಾಗಿದೆ.
ಸಿಂಧೂ ಜಲ ಒಪ್ಪಂದದ ವಿಚಾರದಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಾಕಿಸ್ತಾನದಿಂದ ಸಮರ್ಪಕ ಕ್ರಮ ಕೈಗೊಳ್ಳುವವರೆಗೆ ಯಾವುದೇ ಮೃದು ಧೋರಣೆ ತಾಳುವುದಿಲ್ಲ ಎಂದು ತಿಳಿಸಿದೆ. ಈ ಬೆಳವಣಿಗೆಗಳ ನಡುವೆಯೇ ಚೆನಾಬ್ ನದಿಯ ಹೆಚ್ಚುವರಿ ನೀರಿನ ಹರಿವನ್ನು ನಿರ್ವಹಿಸುವ ಸಲುವಾಗಿ ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲಾಗಿದೆ.
1960 ರ ಸಿಂಧೂ ನದಿ ನೀರು ಒಪ್ಪಂದದ ಪ್ರಕಾರ, ಚೆನಾಬ್ ನದಿಯನ್ನು ಪಾಕಿಸ್ತಾನದ ಪಾಲಿನ ಪಶ್ಚಿಮ ನದಿಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಒಪ್ಪಂದದಡಿ ಚೆನಾಬ್ ನದಿಯ ನೀರಿನ ಬಳಕೆಗೆ ಸಂಬಂಧಿಸಿದ ನಿರ್ದಿಷ್ಟ ನಿಯಮಗಳಿದ್ದರೂ, ಭಾರತಕ್ಕೆ ನದಿಯ ಮೇಲೆ ಜಲ ವಿದ್ಯುತ್ ಯೋಜನೆಗಳನ್ನು ನಿರ್ಮಿಸುವ ಹಕ್ಕು ನೀಡಲಾಗಿದೆ.
ಬಾಗ್ಲಿಹಾರ್ ಆಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಚೆನಾಬ್ ನದಿಯ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಪಾಕಿಸ್ತಾನದ ಕಡೆಗೆ ಹರಿಯುವ ನೀರಿನ ಪ್ರಮಾಣವು ಹೆಚ್ಚಾಗಲಿದೆ. ನದಿ ನೀರಿನ ನಿರ್ವಹಣೆ, ಅಣೆಕಟ್ಟು ಸುರಕ್ಷತೆ ಮತ್ತು ಪ್ರವಾಹ ನಿಯಂತ್ರಣದ ಭಾಗವಾಗಿ ಈ ನೀರು ಬಿಡುಗಡೆ ಮಾಡಲಾಗಿದೆ.