belagavi news :
ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್: ಅಕ್ಕಿ ಬದಲು 'ಇಂದಿರಾ' ಆಹಾರ ಕಿಟ್ ಕುರಿತು ಸಚಿವ ಮುನಿಯಪ್ಪ ಮಾಹಿತಿ
ಬೆಂಗಳೂರು: ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. 10 ಕೆ.ಜಿ ಅಕ್ಕಿ ಬದಲಿಗೆ 'ಇಂದಿರಾ' ಆಹಾರ ಕಿಟ್ ನೀಡುವ ಕುರಿತು ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಈ ಬಗ್ಗೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು ಎಂದು ಹೇಳಿದರು. ಆದರೆ ಅಕ್ಕಿ ಲಭ್ಯತೆಯ ಆಧಾರದ ಮೇಲೆ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರದಿಂದ ಅಕ್ಕಿ ಪೂರೈಕೆ ಆದ ಸಂದರ್ಭದಲ್ಲಿ ಅಕ್ಕಿಯನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
10 ಕೆಜಿಯಲ್ಲಿ ಅಕ್ಕಿ ಮತ್ತು ರಾಗಿ ವಿತರಣೆ
ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿಯ ಜೊತೆಗೆ ರಾಗಿ ನೀಡುವ ಯೋಜನೆ ಕುರಿತು ಮಾಹಿತಿ ನೀಡಿದ ಸಚಿವರು, ಈಗಾಗಲೇ 4 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಗಿದೆ ಎಂದು ಹೇಳಿದರು.
" 10 ಕೆಜಿಯಲ್ಲಿ 7 ಕೆಜಿ ಅಕ್ಕಿ ಹಾಗೂ 3 ಕೆಜಿ ರಾಗಿ ನೀಡಲಾಗುತ್ತಿದೆ," ಎಂದು ಕೆ. ಎಚ್. ಮುನಿಯಪ್ಪ ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಈ ಕ್ರಮದಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಣೆಯಲ್ಲಿ ಬದಲಾವಣೆ ಆಗಲಿದ್ದು, ಇಂದಿರಾ ಆಹಾರ ಕಿಟ್ ಯೋಜನೆಯ ಕುರಿತು ಫಲಾನುಭವಿಗಳಲ್ಲಿ ಕುತೂಹಲ ಮೂಡಿದೆ.