belagavi news :
ಮೈಸೂರು: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಂದ ಮಾಹಿತಿ ಸಂಗ್ರಹಣೆ ಕಾರ್ಯ ಭರದಿಂದ ನಡೆಯುತ್ತಿದ್ದು, ಇದನ್ನು ಯೋಜನೆಯ ಪರಿಷ್ಕರಣೆ ಅಥವಾ ನಿಯಮಗಳಲ್ಲಿ ಬದಲಾವಣೆ ಎಂದು ಭಾವಿಸ ಬೇಕಿಲ್ಲ ಎಂದು ಚೆಸ್ಕಾಂ (CESC) ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ ಸಷ್ಟಪಡಿಸಿದ್ದಾರೆ.
ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಡೆಯುತ್ತಿರುವ ಮಾಹಿತಿ ಸಂಗ್ರಹಣಾ ಕಾರ್ಯದ ಎರಡನೇ ದಿನದ ಪ್ರಗತಿಯನ್ನು ಶುಕ್ರವಾರ ಪರಿಶೀಲಿಸಿದ ಅವರು, ಈ ಪ್ರಕ್ರಿಯೆ ಸಂಪೂರ್ಣವಾಗಿ ಫಲಾನುಭವಿಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಮಾತ್ರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ದೊರೆಯುತ್ತಿರುವ ಸೌಲಭ್ಯಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ, ಭವಿಷ್ಯದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಫಲಾನುಭವಿಗಳ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಮಾಹಿತಿ ಸಂಗ್ರಹಣೆಯಲ್ಲಿ ಮನೆಯ ವಿವರಗಳು, ವಿದ್ಯುತ್ ಬಳಕೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಮಾತ್ರ ದಾಖಲಿಸಲಾಗುತ್ತಿದ್ದು, ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅರ್ಚನಾ ಮನವಿ ಮಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಮಾಹಿತಿ ಸಂಗ್ರಹಣೆ ಹಂತ ಹಂತವಾಗಿ ನಡೆಯಲಿದ್ದು, ಸಂಬಂಧಿತ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಚೆಸ್ಕಾಂ ಸಿಬ್ಬಂದಿ ರಾಜ್ಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಂದ ಒಟ್ಟು 11 ಪ್ರಮುಖ ಅಂಶಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಈ ಪ್ರಕ್ರಿಯೆಯ ಉದ್ದೇಶ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವುದು ಹಾಗೂ ಭವಿಷ್ಯದ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ನಿಖರ ದತ್ತಾಂಶವನ್ನು ಸಿದ್ಧಪಡಿಸುವುದಾಗಿದೆ.
ಮಾಹಿತಿ ಸಂಗ್ರಹಣೆ ವೇಳೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಡಿತರ ಚೀಟಿ ( ರೇಷನ್ ಕಾರ್ಡ್) ವಿವರಗಳು, ಮನೆಯ ಮಾಲೀಕತ್ವ ( ಸ್ವಂತ ಮನೆ ಅಥವಾ ಬಾಡಿಗೆ ಮನೆ) ಸೇರಿದಂತೆ ಹಲವು ಮೂಲಭೂತ ಮಾಹಿತಿಗಳನ್ನು ಸಿಬ್ಬಂದಿ ದಾಖಲಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ, ಜಾತಿ ಹಾಗೂ ಪ್ಯಾನ್ ಕಾರ್ಡ್ ವಿವರಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಮತದಾರರ ಗುರುತಿನ ಚೀಟಿ ( ವೋಟರ್ ಐಡಿ) ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದ್ದಾರೆ.
ಮಾಹಿತಿ ಸಂಗ್ರಹಣೆ ಪ್ರಕ್ರಿಯೆ ಕುರಿತು ಸಾರ್ವಜನಿಕರು ಯಾವುದೇ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದು ಗೃಹಜ್ಯೋತಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ ಮಾಡುವ ಪ್ರಕ್ರಿಯೆಯಲ್ಲ; ಕೇವಲ ಅಧಿಕೃತ ಮಾಹಿತಿ ಸಂಗ್ರಹಣೆಯ ಭಾಗವಾಗಿದೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.