Belagavi news:
ಕೇದಾರನಾಥ ಯಾತ್ರಾ ಮಾರ್ಗದಲ್ಲಿ ದುರಂತ: ಬೆಟ್ಟದಿಂದ ಬಂಡೆಗಳು ಉರುಳಿ ಯುವಕ ಸಾವು, ಮತ್ತೊಬ್ಬ ಗಂಭೀರ
ರುದ್ರಪ್ರಯಾಗ (ಉತ್ತರಾಖಂಡ): ಕೇದಾರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸ್ಥಳೀಯ ಯುವಕ ಸಾವನ್ನಪ್ಪಿದ್ದು, ನೇಪಾಳದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸೋನ್ ಪ್ರಯಾಗದ ಹನುಮಾನ್ ದೇವಾಲಯದ ಬಳಿಯ ಬೆಟ್ಟದಿಂದ ಇದ್ದಕ್ಕಿದ್ದಂತೆ ದೊಡ್ಡ ಬಂಡೆಗಳು ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ಬಂಡೆಗಳು ಹಲವು ಅಂಗಡಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅಪ್ಪಳಿಸಿದ ಪರಿಣಾಮ ಜನರಲ್ಲಿ ಆತಂಕ ಉಂಟಾಯಿತು.
ಘಟನೆಯ ನಂತರ ಸ್ಥಳೀಯರು, ಪೊಲೀಸರು ಹಾಗೂ ಆಡಳಿತ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಅಪಾಯಕಾರಿ ಪ್ರದೇಶಗಳಲ್ಲಿ ಇರುವ ಅಂಗಡಿಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, "ಬೆಟ್ಟದಿಂದ ದೊಡ್ಡ ಬಂಡೆಗಳು ಏಕಾಏಕಿ ಉರುಳಿ ಬಿದ್ದು ಜನರು ಭೀತಿಯಿಂದ ಓಡಿ ಹೋಗಬೇಕಾಯಿತು" ಎಂದು ತಿಳಿಸಿದ್ದಾರೆ.
ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭದ್ರತಾ ಕ್ರಮಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.
"ಸೋನ್ ಪ್ರಯಾಗ್ ಬೆಟ್ಟದಿಂದ ಬಂಡೆ ಉರುಳಿದಾಗ ತಕ್ಷಣವೇ ಸ್ಪಂದಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸ್ಥಳೀಯ ವ್ಯಕ್ತಿಯೊಬ್ಬರು ದಾರಿಯಲ್ಲಿ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ" ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ ಸಿಂಗ್ ರಾಜ್ವರ್ ಹೇಳಿದರು.
ನಿರಂತರವಾಗಿ ಬದಲಾಗುತ್ತಿರುವ ಹವಾಮಾನ, ಬೆಟ್ಟಗಳಲ್ಲಿ ಬಿರುಕು ಬೀಳುವ ಸಾಧ್ಯತೆ ಹಾಗೂ ಭೂಕುಸಿತಗಳ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ವಿಶೇಷ ಜಾಗರೂಕತೆ ವಹಿಸಲಾಗುತ್ತಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಕೇದಾರನಾಥ ಯಾತ್ರೆಯ ಸಮಯದಲ್ಲಿ ಬೆಟ್ಟಗಳಲ್ಲಿ ಆಗಾಗ ಭೂಕುಸಿತ, ಕಲ್ಲುಗಳು ಉರುಳುವುದು ಹಾಗೂ ಭೂಮಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿರುವುದು ಯಾತ್ರಿಕರಲ್ಲಿ ಆತಂಕ ಹೆಚ್ಚಿಸಿದೆ. ಈ ವಿಶೇಷವಾಗಿ ಸೋನ್ ಪ್ರಯಾಗ ಮತ್ತು ಗೌರಿಕುಂಡ್ ನಡುವಿನ ಅನೇಕ ಪ್ರದೇಶಗಳು ಹೆಚ್ಚು ಅಪಾಯಕಾರಿಯಾಗಿ ಗುರುತಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಯಾತ್ರಾ ಮಾರ್ಗದ ಸುರಕ್ಷತೆಗಾಗಿ ಶಾಶ್ವತ ಮತ್ತು ಬಲವಾದ ಮೂಲಸೌಕರ್ಯ ವ್ಯವಸ್ಥೆಗಳನ್ನು ರೂಪಿಸಬೇಕೆಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಅನಗತ್ಯವಾಗಿ ನಿಲ್ಲಬಾರದು ಹಾಗೂ ಆಡಳಿತ ಹೊರಡಿಸಿದ ಸೂಚನೆಗಳನ್ನು ಕಟ್ಟುನೆಟ್ಟಾಗಿ ಪಾಲಿಸಬೇಕು ಎಂದು ಯಾತ್ರಿಕರು ಮತ್ತು ಸ್ಥಳೀಯರಿಗೆ ಮನವಿ ಮಾಡಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಪ್ರಯಾಣದ ವೇಳೆ ವಿಶೇಷ ಎಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ.
Also Read: