Belagavi News:
ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಪಾದಯಾತ್ರೆಗೆ ಚಾಲನೆ ನೀಡಿದರು.
ಬಿಡದಿಯ ಅಂಚಿಪುರದಿಂದ ಆರಂಭವಾದ ಪಾದಯಾತ್ರೆಗೆ ಮುನ್ನ ಸ್ಥಳೀಯ ಶಕ್ತಿ ದೇವತೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು. " ನಮ್ಮ ಭೂಮಿ ನಮ್ಮ ಹಕ್ಕು" ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಹೋರಾಟಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾ ರೆಡ್ಡಿ, ಮಾಜಿ ಶಾಸಕ ಮಂಜು, ಶರವಣ ಸೇರಿದಂತೆ ನೂರಾರು ರೈತರು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಕಳೆದ 16 ತಿಂಗಳಿಂದ ಮಹಿಳೆಯರು ಮತ್ತು ಹಿರಿಯರು ಹಗಲು -ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಅವರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ನಾವು ಹಲವು ಬಾರಿ ಬಂದು ಚರ್ಚೆ ಮಾಡಿದ್ದೇವೆ. ರೈತರು ಯಾವುದೇ ಕಾರಣಕ್ಕೂ ಜಮೀನು ಕೊಡಲು ಸಿದ್ದರಿಲ್ಲ. ಹೀಗಾಗಿ ಅವರ ಪರವಾಗಿ ನಾವು ನಮ್ಮ ಮತ್ತು ನಮ್ಮ ಪಕ್ಷ ನಿಂತಿದ್ದೇವೆ" ಎಂದು ಹೇಳಿದರು.
"ಇತ್ತೀಚಿನ ಪಾದಯಾತ್ರೆ ಯಾವುದೇ ಪಕ್ಷದ ರಾಜಕೀಯ ಲಾಭ - ನಷ್ಟಕ್ಕೆ ಸಂಬಂಧಿಸಿದುದಲ್ಲ. ಇದು ಸಂಪೂರ್ಣವಾಗಿ ರೈತರ ಹಿತ ಕಾಯುವ ಉದ್ದೇಶದಿಂದ ನಡೆಯುತ್ತಿರುವ ಹೋರಾಟ. ಇದು ಕೇವಲ ಆರಂಭ ಮಾತ್ರ. ನಿನ್ನೆ ಏಳು ಜನರು ಚೆಕ್ ಪಡೆದುಕೊಂಡಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಫಲವತ್ತಾದ ಭೂಮಿಯನ್ನು ಗುರಿಯಾಗಿಸಿಕೊಂಡು ಕೆಲವು ದಲ್ಲಾಳಿಗಳು ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದಾರೆ" ಎಂದು ಆರೋಪಿಸಿದರು.
" ರೈತರನ್ನು ಭಯಪಡಿಸಿ, ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ರೈತರ ಒಗ್ಗಟ್ಟನ್ನು ಮುರಿಯುವ ಪ್ರಯತ್ನಗಳು ನಡೆಯುತ್ತಿವೆ. ರೈತರು ಯಾವುದೇ ಕಾರಣಕ್ಕೂ ಒಗ್ಗಟ್ಟನ್ನು ಕಳೆದುಕೊಳ್ಳಬಾರದು. ನಿಮ್ಮ ಭೂಮಿಯನ್ನು ಯಾರಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, "ರೈತರನ್ನು ಒಕ್ಕಲೆಬ್ಬಿಸುವವರ ವಿರುದ್ಧ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ. ರೈತರ ಪರವಾಗಿ ನಿಲ್ಲಲು ಜೆಡಿಎಸ್ ಪಕ್ಷ ಸದಾ ಸಿದ್ಧವಾಗಿದೆ. ದೇವೇಗೌಡರು ಯಾವಾಗಲೂ ರೈತರ ಪರವಾಗಿಯೇ ಇದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆ ನಿಲ್ಲಿಸಬೇಕು ಎಂದು ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಿದ್ದಾರೆ. ಯೋಜನೆಯನ್ನು ಕೂಡಲೇ ಕೈ ಬಿಡದಿದ್ದರೆ ನಾನು ಸ್ವತಃ ಹೋರಾಟಕ್ಕೆ ಇಳಿಯುತ್ತೇನೆ ಎಂದು ಹೇಳಿದ್ದಾರೆ" ಎಂದು ತಿಳಿಸಿದರು.
Also Read:
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್! ರೈಲ್ವೆ ಇಲಾಖೆಯಲ್ಲಿ 6,365 ಹುದ್ದೆಗಳ ನೇಮಕಾತಿ