belagavi news :
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಜ್ ಜನತಾ ಪಕ್ಷ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಧಾರಾಕಾರ ಮಳೆಯನ್ನು ಲೆಕ್ಕಿಸದೆ ವಿದ್ಯಾರ್ಥಿಗಳು, ಯುವಕರು ಹಾಗೂ ಪಕ್ಷದ ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶಾದ್ಯಂತ ಸಿಜೆಪಿ ನಡೆಸುತ್ತಿರುವ ಅಭಿಯಾನದ ಭಾಗವಾಗಿ ನಡೆದ ಈ ಪ್ರತಿಭಟನೆಯಲ್ಲಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್ಇ ಆನ್-ಸ್ಕ್ರೀನ್ ಅಂಕ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟನಾಕಾರರು ಧ್ವನಿ ಎತ್ತಿದರು. ವಿವಿಧ ಬಿತ್ತಿ ಚಿತ್ರಗಳು ಮತ್ತು ಪೋಷಣೆಗಳ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿಕತ್ವಕ್ಕೆ ಒತ್ತಾಯಿಸಿದರು.
ಮೈಸೂರಿನಿಂದ ತಮ್ಮ 10 ವರ್ಷದ ಪುತ್ರಿಯೊಂದಿಗೆ ಆಗಮಿಸಿದ್ದ ರಾಹುಲ್ ಸೇರಿದಂತೆ ಹಲವು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಈ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಳೆಯ ನಡುವೆಯೂ ನಡೆದ ಈ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
"ತಮ್ಮ ಸೋದರ ಸೊಸೆ ಸಿಬಿಎಸ್ಸಿ ಪರೀಕ್ಷೆಗಳಲ್ಲಿ ಶೇ. 98 ರಷ್ಟು ಅಂಕ ಗಳಿಸಿದ್ದರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಉಂಟಾದ ಸಮಸ್ಯೆಯಿಂದ ಎಂಬಿಬಿಎಸ್ ಸೀಟು ಪಡೆಯಲು ವಿಫಲರಾದರು" ಎಂದು ಅವರು ಆಕ್ರೋಶ ಹೊರ ಹಾಕಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಬಿಜೆಪಿ ಪ್ರತಿಭಟನೆಗೆ ನಟ ಪ್ರಕಾಶ್ ರಾಜ್ ಹಾಗೂ ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ, "ರಾಜಕೀಯ ಹೇಗೆ ಕೆಲಸ ಮಾಡುತ್ತದೆ, ಶಿಕ್ಷಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಮತ್ತು ಪ್ರಶ್ನೆ ಪತ್ರಿಕೆಗಳು ಹೇಗೆ ಸೋರಿಕೆ ಆಗುತ್ತವೆ ಎಂಬುವುದು ಅವರಿಗೆ ತಿಳಿದಿದ್ದರೂ, ಈ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ?" ಎಂದು ಪ್ರಶಿಸಿದರು. ಅವರ ಈ ಹೇಳಿಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಗಮನ ಸೆಳೆಯಿತು.
ಇದೆ ವೇಳೆ, ಸಿಜೆಪಿ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಸೋನಮ್ ವಾಂಗ್ಚುಕ್ ಬಳಿಕ ಅವರನ್ನು ಶ್ಲಾಘಿಸಿದ ಪ್ರಕಾಶ್ ರಾಜ್," ಸೋನಮ್ ವಾಂಗ್ಚುಕ್ ನಮ್ಮ ದೇಶದ ಶಿಕ್ಷಣ ಸಚಿವರಾಗಬೇಕು ಎಂಬುವುದು ನನ್ನ ಆಶಯ" ಎಂದು ಹೇಳಿದರು.
ಬಳಿಕ ಮಾತನಾಡಿದ ಸೋನಮ್ ವಾಂಗ್ಚುಕ್, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿರುವ ಸಮಸ್ಯೆಗಳು ಮತ್ತು ಅಕ್ರಮಗಳನ್ನು ಪ್ರಶ್ನಿಸುವ ಉದ್ದೇಶದಿಂದ ಈ ಆಂದೋಲನದಲ್ಲಿ ಭಾಗಿಯಾಗಿದಾಗಿ ತಿಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಸುಧಾರಣೆಗಾಗಿ ಹೋರಾಟ ಮುಂದುವರಿಯಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಮಳೆಯ ನಡುವೆಯೂ ನಡೆದ ಈ ಪ್ರತಿಭಟನೆ ಶಿಕ್ಷಣ ವ್ಯವಸ್ಥೆ, ನೀಟ್ ಪರೀಕ್ಷೆ ಹಾಗೂ ಆಡಳಿತದ ಜವಾಬ್ದಾರಿತನದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಸಿಜೆಪಿ ಸಂಸ್ಥಾಪಕ ಅಭಿಜಿತ್ ಡಿಪ್ಕೆ ಮಾತನಾಡಿ, "ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದಾಗ, ಈ ಮುರಿದ ವ್ಯವಸ್ಥೆಯನ್ನು ಬಹಿರಂಗಪಡಿಸಲು ಪ್ರಯತ್ನಿಸಿದಾಗ, ನಮ್ಮನ್ನು ಜಿರಳೆಗಳು ಎಂದು ಕರೆಯಲಾಗುತ್ತದೆ. ಜೀವಗಳನ್ನು ಉಳಿಸಬಹುದಾಗಿದ್ದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ತಮ್ಮ ಪ್ರಾಣ ಕಳೆದುಕೊಂಡರು" ಎಂದು ಆಕ್ರೋಶ ಹೊರ ಹಾಕಿದರು.
Also Read: