belagavi news :
ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾ ರಚನೆ ಕುರಿತು ತೀರ್ಮಾನಿಸಲು ತಿಂಗಳ ಅಂತ್ಯದವರೆಗೆ ಸಮಯ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ಮೌನವಾಗಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕ್ಯಾಬಿನೆಟ್ ಪುನಾರಚನೆ ಬಗ್ಗೆ ತೀರ್ಮಾನಿಸಲು ಈ ತಿಂಗಳ ಅಂತ್ಯದವರೆಗೆ ಸಮಯ ಇದೆ. ಮೊದಲ ಕೇರಳ ಮುಖ್ಯಮಂತ್ರಿ ವಿಚಾರ ಇತ್ಯರ್ಥವಾಗಬೇಕು. ಇನ್ನು ಸ್ವಲ್ಪ ದಿನ ಕಾಯಬೇಕಾಗಿದೆ ಪಕ್ಷದೊಳಗಿನ ಸಂಘರ್ಷ ಮತ್ತು ಘರ್ಷಣೆ ನಿಲ್ಲಬೇಕು" ಎಂದು ಹೇಳಿದರು.
" ಸಂಪುಟ ವಿಸ್ತರಣೆ ಹಳೆಯ ಬೇಡಿಕೆಯಾಗಿದೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಿದೆ ಎಂಬುದನ್ನು ಕಾದು ನೋಡಬೇಕು. ಕೇರಳದಲ್ಲಿಯೂ ಗೊಂದಲ ಮತ್ತು ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಎಲ್ಲದನ್ನು ಬಗೆಹರಿಸುತ್ತದೆ. ಕೇರಳದ ವಿಚಾರ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಬಹುದು" ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
"ಹೈಕಮಾಂಡ್ ಮುಂದೆ ನಮ್ಮ ಬೇಡಿಕೆ ಒಂದೇ- ರಾಜ್ಯದ ರಾಜಕೀಯ ಗೊಂದಲವನ್ನು ಬಗೆಹರಿಸಬೇಕು. ಹಲವು ನಾಯಕರು ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಬದ್ಲಾವಣೆ ವಿಚಾರಕ್ಕೆ ಪರಿಹಾರ ಕಂಡುಹಿಡಿದು ಪಕ್ಷದೊಳಗಿನ ಗೊಂದಲ ಮತ್ತು ಘರ್ಷಣೆ ನಿಲ್ಲಬೇಕು ಎಂಬುದಷ್ಟೇ ನಮ್ಮ ಆಶಯ" ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
" ಇಲ್ಲಿ ನಾನು ಒಪ್ಪುವುದು ಅಥವಾ ವಿರೋಧಿಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈಗಾಗಲೇ ಹೈ ಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ" ಎಂದರು.
ಇದೇ ವೇಳೆ ಹೈ ಕಮಾಂಡ್ ದುರ್ಬಲವಾಗಿದೆ ಎಂಬ ಮಾತನ್ನು ತಳ್ಳಿಹಾಕಿದ ಅವರು, "ಹೈಕಮಾಂಡ್ ವೀಕ್ ಆಗಿಲ್ಲ, ಬಿಜೆಪಿಯಲ್ಲಿಯೂ ಇಂತಹ ಸಂದರ್ಭಗಳಲ್ಲಿ ತೀರ್ಮಾನಕ್ಕೆ ಸಮಯ ತೆಗೆದುಕೊಂಡು ಉದಾಹರಣೆಗಳಿವೆ. ನಮ್ಮಲ್ಲೂ ಮುಖ್ಯಮಂತ್ರ್ಯಕ್ಕೆ ತಡವಾಗಿತ್ತು. ಕೆ.ಸಿ. ವೇಣುಗೋಪಾಲ್ ಕೇರಳ ಮುಖ್ಯಮಂತ್ರಿ ಆಗುವ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತಿಮವಾಗಿ ಎಲ್ಲ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ" ಎಂದು ಸ್ಪಷ್ಟಪಡಿಸಿದರು.
ಜಿಬಿಎ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, "ಜಿಬಿಎ ಚುನಾವಣೆ ನಡೆಸುತ್ತೇವೆ ಎಂದು ಡಿಸಿಎಂ ಅವರೇ ಹೇಳಿದ್ದಾರೆ. ಆದರೆ ನೌಕರರು ಖಾಲಿ ಇಲ್ಲದೆ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಅದಕ್ಕಾಗಿ ಮಳೆಗಾಲ ಮುಗಿದ ಬಳಿಕ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಮುಂದಾಗಿದೆ" ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿರುವ ಕರಿ ಕುರಿತು ಮಾತನಾಡಿದ ಅವರು, " ಇದಕ್ಕೆ ಜನರೇ ಉತ್ತರ ನೀಡಬೇಕು. ಕಾಂಗ್ರೆಸ್ ಯಾವ ಸಂದರ್ಭದಲ್ಲಿ ಏನು ಹೇಳುತ್ತದೆ ಎಂಬುದರ ಬೇರೆ ವಿಷಯ. ಅಂತಿಮವಾಗಿ ಜನರ ತೀರ್ಮಾನವೇ ಮುಖ್ಯ. ಪೆಟ್ರೋಲಿಯಂ ಬೆಲೆಗಳನ್ನು ತಕ್ಷಣ ಕಡಿಮೆ ಮಾಡುವುದು ಸಾಧ್ಯವಿಲ್ಲ" ಎಂದು ಹೇಳಿದರು.
" ಜನರು ವಿದೇಶ ಪ್ರವಾಸಗಳನ್ನು ಮುಂದೂಡಬಹುದು. ಚಿನ್ನದ ಬೆಲೆ ಮುಂದೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಈಗಾಗಲೇ ಖರೀದಿ ಮಾಡುತ್ತಿದ್ದಾರೆ" ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
Also Read:
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ NEET 2026 ಪರೀಕ್ಷೆ ರದ್ದು: ಮರು ಪರೀಕ್ಷೆ ಬಗ್ಗೆ ಎನ್ ಟಿ ಎ ಸ್ಪಷ್ಟನೆ.