BELAGAVI NEWS :
ಬಡತನ ಮೆಟ್ಟಿ ಬೆಳೆದ ಶಿಲ್ಪಾ : ಕಾಮನ್ ವೆಲ್ತ್ ನಲ್ಲಿ ಕಂಚುಗೆದ್ದು ಮೈಸೂರಿನ ಹೆಮ್ಮೆ ಹೆಚ್ಚಿಸಿದ ಕನ್ನಡತಿ
ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ ಶೈಲಾ ಅವರು ಕಂಚಿನ ಪದಕ ಗೆದ್ದು ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಮಹಿಳೆಯರ ಶಾರ್ಟ್ ಪುಟ್ F- 57 ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶಿಲ್ಪಾ, ತಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಈ ಸಾಧನೆ ಮಾಡಿದ್ದಾರೆ. ಅವರ ಯಶಸ್ಸಿಗೆ ಕುಟುಂಬ, ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದು ಬರುತ್ತಿದೆ.
ಬಾಲ್ಯದಲ್ಲಿ ಎದುರಾದ ಸವಾಲು, ಚಲದಿಂದ ಸಾಧನೆಯ ಹಾದಿ
ಶೈಲೇಶ್ ಮತ್ತು ಶಾಂತ ದಂಪತಿಯ ಎರಡನೇ ಮಗಳಾದ ಶಿಲ್ಪಾ, ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡರು. ಆದರೆ ಈ ಸವಾಲು ಅವರ ಕನಸುಗಳಿಗೆ ಅಡ್ಡಿಯಾಗಲಿಲ್ಲ.
ತಂದೆ ತಾಯಿಯ ಪ್ರೋತ್ಸಾಹದಿಂದ ಶಿಕ್ಷಣ ಮುಂದುವರೆಸಿದ ಶಿಲ್ಪಾ, ಎಂ.ಎ ಮತ್ತು ಬಿ.ಇಡಿ ಪದವಿಗಳನ್ನು ಪೂರ್ಣಗೊಳಿಸಿದರು. ಬಳಿಕ ಮೈಸೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಶಾರ್ಟ್ ಪುಟ್ ಅಭ್ಯಾಸ ಮಾಡಿದರು.
ಕ್ರೀಡೆಯ ಮೇಲಿನ ಆಸಕ್ತಿ ಮತ್ತು ಸಾಧಿಸುವ ಛಲದಿಂದ ಹಲವು ಪದಕಗಳು ಹಾಗೂ ಪ್ರಶಸ್ತಿಗಳನ್ನು ಗೆದ್ದ ಶಿಲ್ಪಾ, ನಂತರ ಹೆಚ್ಚಿನ ತರಬೇತಿಗಾಗಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಠಿಣ ಅಭ್ಯಾಸ ಮುಂದುವರಿಸಿ ಇದೀಗ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಶಿಲ್ಪಾ ಕೆ.ಶೈಲಾ ಅವರ ಜೀವನ ಗಾಥೆ ಸವಾಲುಗಳನ್ನು ಎದುರಿಸಿ ಯಶಸ್ಸು ಸಾಧಿಸುವ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಶಿಲ್ಪಾ ಕೆ.ಶೈಲಾ ಸಾಧನೆಗೆ ಸಿಎಂ ಡಿ ಕೆ ಶಿವಕುಮಾರ್ ಅಭಿನಂದನೆ : ಪ್ಯಾರಾ ಒಲಿಂಪಿಕ್ಸ್ ಪಂದ್ಯಕ್ಕೆ ಮುಂದಿನ ಗುರಿ
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ ಕನ್ನಡತಿ ಶಿಲ್ಪಾ ಕೆ.ಶೈಲಾ ತಮ್ಮ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಸಾಕಷ್ಟು ಕಷ್ಟ- ನಷ್ಟಗಳನ್ನು ಎದುರಿಸಿದ ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವುದು ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಸಾಧನೆಗೆ ಸಹಕಾರ ನೀಡಿದ ಪೋಷಕರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಶಿವಕುಮಾರ್ ಅವರಿಗೆ ಶಿಲ್ಪಾ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದಿನ ಗುರಿಯಾಗಿ 2028ರಲ್ಲಿ ಅಮೆರಿಕಾದ 'ಲಾಸ್ ಏಂಜಲೀಸ್ 'ನಲ್ಲಿ ನಡೆಯಲಿರುವ ಪ್ಯಾರಾ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಕನಸು ಹೊಂದಿದ್ದು, ಅದಕ್ಕಾಗಿ ಮತ್ತಷ್ಟು ಪರಿಶ್ರಮಿಸುವುದಾಗಿ ತಿಳಿಸಿದ್ದಾರೆ.
ಶಿಲ್ಪಾ ಕೆ ಶೈಲಾ ಅವರ ಸಾಧನೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ಮತ್ತು ದೇಶಕ್ಕೆ ಇದು ಹೆಮ್ಮೆಯ ಕ್ಷಣವಾಗಿದ್ದು, ಶಿಲ್ಪಾ ಅವರ ದೃಢ ನಿಶ್ಚಯ ಹಾಗೂ ಅಚಲ ಮನೋಭಾವ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಶಿಲ್ಪಾ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಿ ಭಾರತಕ್ಕೆ ಹಲವು ಪ್ರಶಸ್ತಿಗಳನ್ನು ತಂದು ಕೊಡಲಿ ಎಂದು ಮುಖ್ಯಮಂತ್ರಿ ಶುಭ ಹಾರೈಸಿದ್ದಾರೆ.
ಶಿಲ್ಪಾ ಕೆ.ಶೈಲಾ ಸಾಧನೆಗೆ ಎಚ್ ಡಿ ಕುಮಾರಸ್ವಾಮಿ ಅಭಿನಂದನೆ : ಭಾರತದ ಹೆಮ್ಮೆ ಎಂದ ಕೇಂದ್ರ ಸಚಿವ
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯಗಳು ತಿಳಿಸಿರುವ ಅವರು, ಶಿಲ್ಪಾ ಅವರು ಬಾಲ್ಯದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಭಾರತವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ರೈತ ಕುಟುಂಬದ ಹಿನ್ನೆಲೆಯ ಶಿಲ್ಪಾ, ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದರು. ಆದರೆ, ಸವಾಲಿನಿಂದ ವಿಚಲಿತ ರಾಗದೆ ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶಿಲ್ಪ ಅವರ ಯಶಸ್ಸಿನ ಹಿಂದೆ ಶ್ರಮಿಸಿದ ತರಬೇತುದಾರರು ಮತ್ತು ಪೋಷಕರಿಗೂ ಕೇಂದ್ರ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.