BELAGAVI NEWS :
ವಿಜಯವಾಡ (ಆಂಧ್ರಪ್ರದೇಶ): ರಾಜ್ಯಮಟ್ಟದ ಔಷಧೀಯ ಸಸ್ಯಗಳ ಮೇಳದಲ್ಲಿ ಭೂಮಿಯೊಳಗೆ ಬೆಳೆದ ಅಪರೂಪದ 40 ಕೆ.ಜಿ ತೂಕದ ಕುಂಬಳಕಾಯಿ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯ ಕುಂಬಳಕಾಯಿಗಳಿಗಿಂತ ಭಿನ್ನವಾಗಿ ಮಣ್ಣಿನ ಒಳಭಾಗದಲ್ಲಿ ಬೆಳೆಯುವ ಈ ದೈತ್ಯ ಗಾತ್ರದ ಕುಂಬಳಕಾಯಿ, ಅದರ ಬೆಳವಣಿಗೆಯ ವೈಶಿಷ್ಟ್ಯದಿಂದಲೇ ಜನರಲ್ಲಿ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ಸಿಹಿ ಮತ್ತು ಬೂದು ಕುಂಬಳಕಾಯಿಗಳು ನೆಲದ ಮೇಲೆ ಬೆಳೆಯುತ್ತವೆ. ಆದರೆ ಈ ಅಪರೂಪದ ಪ್ರಭೇದ ಮಣ್ಣಿನೊಳಗೆ ಬೆಳೆಯುವ ವಿಶೇಷ ಗುಣ ಹೊಂದಿದೆ. ಮೇಳದಲ್ಲಿ ಪ್ರದರ್ಶಿಸಲಾದ 40 ಕೆ.ಜಿ ತೂಕದ ಈ ಕುಂಬಳಕಾಯಿ ರೈತರು ಆಯುರ್ವೇದ ತಜ್ಞರು ಹಾಗೂ ಸಂದರ್ಶಕರ ಪ್ರಮುಖ ಆಕರ್ಷಣೆಯಾಯಿತು.
ಆಯುರ್ವೇದ ತಜ್ಞ ಡಾ. ರವಿವರ್ಮಾ ಅವರ ಪ್ರಕಾರ, ಈ ಅಪರೂಪದ ಕುಂಬಳಕಾಯಿ ಪ್ರಭೇದ ಅಳಿವಿನ ಅಂಚಿನಲ್ಲಿದೆ. ಇದರ ಸಂರಕ್ಷಣೆಗೆ ಮುಂದಾಗಿರುವ ಅವರು, ಬೀಜಗಳನ್ನು ಸಂಗ್ರಹಿಸಿ ಪೂರ್ವ ಗೋದಾವರಿ ಜಿಲ್ಲೆಯ ಗದರಾಡ ಗ್ರಾಮದಲ್ಲಿ 2 ಎಕರೆ ಭೂಮಿಯಲ್ಲಿ ಈ ಸಸ್ಯಗಳನ್ನು ಬೆಳೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭೂಮಿಯೊಳಗೆ ಬೆಳೆಯುವ ಈ ಅಪರೂಪದ ಕುಂಬಳಕಾಯಿಯನ್ನು ಸಾಮಾನ್ಯವಾಗಿ ಒಣಗಿಸಿ, ಪುಡಿ ಮಾಡಿ ಅದರ ಘಟಕಾಂಶಗಳನ್ನು ಆಯುರ್ವೇದ ಪದ್ಧತಿಗಳಲ್ಲಿ ಬಳಸಲಾಗುತ್ತದೆ ಎಂದು ಆಯುರ್ವೇದ ತಜ್ಞ ಡಾ. ರವಿವರ್ಮಾ ತಿಳಿಸಿದ್ದಾರೆ. ತಲೆಮಾರುಗಳಿಂದಲೂ ಹಳೆಯ ಆಯುರ್ವೇದ ಚಿಕಿತ್ಸಾ ಪದ್ಧತಿಗಳಲ್ಲಿ ಈ ಸಸ್ಯದ ಬಳಕೆ ಇರುವುದಾಗಿ ಅವರು ಹೇಳಿದ್ದಾರೆ.
ವಿಜಯವಾಡದಲ್ಲಿ ನಡೆದ ಔಷಧೀಯ ಸಸ್ಯಗಳ ಮೇಳದಲ್ಲಿ ಈ ಕುಂಬಳಕಾಯಿ ಮಾತ್ರವಲ್ಲದೆ, ಹಲವು ಅಪರೂಪದ ಸಸ್ಯ ಪ್ರಭೇದಗಳನ್ನು ಪ್ರದೇಶಿಸಲಾಯಿತು. ಸ್ಥಳೀಯ ಔಷಧೀಯ ಹಾಗೂ ಆಹಾರ ಸಸ್ಯಗಳನ್ನು ಸಂರಕ್ಷಿಸುವ ಅಗತ್ಯವನ್ನು ಈ ಮೇಳ ತೋರಿಸಿದೆ.
ಬದಲಾಗುತ್ತಿರುವ ಕೃಷಿ ಪದ್ಧತಿಗಳು, ಕೃಷಿ ಭೂಮಿಯ ಕಡಿಮೆಯಾಗುತ್ತಿರುವ ಪ್ರಮಾಣ ಮತ್ತು ನಿರ್ಲಕ್ಷ್ಯದಿಂದಾಗಿ ಹಲವು ಅಪರೂಪದ ಸಸ್ಯ ಪ್ರಭೇದಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಇಂತಹ ಸಸ್ಯಗಳ ಸಂರಕ್ಷಣೆ ಮತ್ತು ಬೀಜ ಸಂಗ್ರಹಣೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.