Belagavi News :
ಮರ್ಷಿದಾಬಾದ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ರೈಲು ಅಪಘಾತ ಸಂಭವಿಸಿದ್ದು, ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರ ವಿದ್ಯಾರ್ಥಿಗಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮರ್ಷಿದಾಬಾದ್ ನ ಅಜೆಮ್ ಗಂಜ್ - ಕಟ್ಟಾ ರೈಲು ವಿಭಾಗದ ಗೋಬಿಂದ್ ಪುರ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆಳಗ್ಗೆ ಸುಮಾರು ಏಳು ಗಂಟೆ ವೇಳೆಗೆ ಈ ಅಪಘಾತ ನಡೆದಿದೆ. ತೆರೆದ ಲೆವೆಲ್ ಕ್ರಾಸಿಂಗ್ ದಾಟುತ್ತಿದ್ದ ವೇಳೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಜಮ್ಶೆಡ್ ಶೇಕ್ (73), ಫರ್ಹಾನಾ ಬೇಗಂ (6), ಮತ್ತು ಜೆಸ್ಸಿಕಾ ಖಾತುನ್(8) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಸಾನೂರ್ ರೆಹಮಾನ್ (9) ಮತ್ತು ತಮ್ಮನ್ನಾ ಖಾತುನ್ (8) ಅವರ ಮರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ಗಾಯಾಳುಗಳಿಗೆ ಮರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಾಗೂ ಇತರರಿಗೆ ಸ್ಥಳೀಯ ಕರ್ಣಸುವರ್ಣ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರಂತಕ್ಕೆ ರೈಲ್ವೆ ಗೇಟ್ ಕೀಪರ್ ನ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅಪಘಾತದ ನಿಖರ ಕಾರಣ ಪತ್ತೆಹಚ್ಚಲಾಗುತ್ತಿದೆ.
ಪಶ್ಚಿಮ ಬಂಗಾಳ ರೈಲ್ವೆ ಅಪಘಾತ - ತೆರೆದ ಲೆವೆಲ್ ಕ್ರಾಸಿಂಗ್ ನಲ್ಲಿ ಶಾಲಾ ವ್ಯಾನ್ ಗೆ ರೈಲು ಡಿಕ್ಕಿ, ಗೇಟ್ ಕೀಪರ್ ಬಂಧನ :
ಮರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಶಾಲಾ ವ್ಯಾನ್ ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಐವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಗೇಟ್ ಕೀಪರ್ ವಿರುದ್ಧ ನಿರ್ಲಕ್ಷದ ಆರೋಪ ಕೇಳಿಬಂದಿದೆ.
ಗೋಬಿಂದ್ ಪುರ - ಕರ್ಣಸುಬರ್ಣ ರೈಲ್ವೆ ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ನಲ್ಲಿ ಬೆಳಗ್ಗೆ ಸುಮಾರು ಏಳು ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ಶಾಲೆಗೆ ತೆರಳುತ್ತಿದ್ದ ಸುಮಾರು 13 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ತೆರೆದ ರೈಲ್ವೆ ಗೇಟ್ ಮೂಲಕ ಹಳಿ ದಾಟುತ್ತಿದ್ದ ವೇಳೆ ನಿಮ್ಟಿಟಾ - ಕಟ್ವಾ ಪ್ಯಾಸೆಂಜರ್ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಶಾಲಾ ವ್ಯಾನ್ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದ್ದು, ರೈಲ್ವೆ ಹಳಿ ಮೇಲೆ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರೈಲ್ವೆ ಗೇಟ್ ಕೀಪರ್ ನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗೇಟ್ ತೆರೆಯಲ್ಪಟ್ಟಿದ್ದರಿಂದ ವ್ಯಾನ್ ಚಾಲಕ ಹಳಿದಾಟಲು ಮುಂದಾಗಿದ್ದು, ಇದೇ ವೇಳೆ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಸ್ಥಳೀಯರು ಗೇಟ್ ಕೀಪರ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲು 10 ಸದಸ್ಯರ ತಂಡ ಸ್ಥಳಕ್ಕೆ ಆಗಮಿಸಿದ್ದು, ರೈಲ್ವೆಯ ಹಿರಿಯ ಅಧಿಕಾರಿಗಳು, ವಿಭಾಗಿಯ ರೈಲ್ವೆ ವ್ಯವಸ್ಥಾಪಕ ಸೇರಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಲೆವೆಲ್ ಕ್ರಾಸಿಂಗ್ ಗೇಟ್ ತೆರೆದಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಕರ್ತವ್ಯ ನಿರ್ಲಕ್ಷದ ಆರೋಪದಡಿ ಗೇಟ್ ಕೀಪರ್ ಬಂಧಿಸಲಾಗಿದೆ.
ಅಪಘಾತದಿಂದ ಪೂರ್ವ ರೈಲ್ವೆಯ ಹೌರಾ ವಿಭಾಗದ ಅಜೀಮ್ ಗಂಜ್ - ಕಟ್ಟಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಮಾಜಿ ರೈಲ್ವೆ ಸಚಿವ ಅದೀರ್ ಚೌಧರಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.