belagavi news :
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಟ್ರೇಲರ್ ಬಿಡುಗಡೆ ಯಾದವ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಜುಲೈ 30 ರಂದು 5 ಭಾಷೆಗಳಲ್ಲಿ ಬಿಡುಗಡೆಯಾದ ನಾಲ್ಕು ನಿಮಿಷಗಳ ಟ್ರೈಲರ್, ನಿರ್ದೇಶಕ ನಿತೇಶ್ ತಿವಾರಿ ಅವರ ಭವ್ಯ ದೃಷ್ಟಿಕೋನವನ್ನು ಅನಾವರಣಗೊಳಿಸಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಈ ಟ್ರೇಲರ್ ಕುರಿತು ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಭಾರತೀಯ ಮಹಾಕಾವ್ಯಗಳನ್ನು ತೆರೆಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಅದನ್ನು ಮನಮುಟ್ಟುವ ರೀತಿಯಲ್ಲಿ ಮೂಡಿಸಿರುವ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರಿಷಭ ಶೆಟ್ಟಿ ಅವರು ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರಯತ್ನವನ್ನು ಶ್ಲಾಘಿಸಿ, ಮಹಾಕಾವ್ಯದ ಪಾತ್ರಗಳನ್ನು ಜೀವಂತಗೊಳಿಸಿದ ಪ್ರತಿಯೊಬ್ಬ ಕಲಾವಿದರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಸಂಗೀತ ನಿರ್ದೇಶಕರಾದ ಎಆರ್ ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಅವರ ಸಂಗೀತವು ಪ್ರತಿಯೊಂದು ಭಾವನೆಯನ್ನು ಅದ್ಭುತವಾಗಿ ಮೂಡಿಸಿದೆ ಎಂದು ಪ್ರಶಂಸಿಸಿದ್ದಾರೆ.
ಇನ್ನು ರಣಬೀರ್ ಕಪೂರ್ ಅಭಿನಯದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, "ನೀವು ನನಗೆ ನಿಜವಾಗಿಯೂ ಶ್ರೀ ರಾಮನ ದೈವಿಕತೆ ಮತ್ತು ಔರಾ ವನ್ನು ಅನುಭವಿಸುವಂತೆ ಮಾಡಿದ್ದೀರಿ"ಎಂದು ಬರೆದುಕೊಂಡಿದ್ದಾರೆ.
ಯಶ್ ಅಭಿನಯದ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ನಿಮ್ಮ ಪ್ರತಿಯೊಂದು ದೃಶ್ಯದಲ್ಲೂ ನನ್ನ ಕಣ್ಣುಗಳು ದೊಡ್ಡದಾಗುತ್ತಾ ಹೋಯಿತು. ಆ ಪಾತ್ರಕ್ಕೆ ನಿಮ್ಮಷ್ಟು ನ್ಯಾಯ ಒದಗಿಸುವವರು ಬೇರೆ ಯಾರಿರಬಹುದು ಎಂಬುದೇ ಅನುಮಾನ. ಓರ್ವ ಕನ್ನಡಿಗನಾಗಿ ನೀವು ಸದಾ ನಮಗೆ ಹೆಮ್ಮೆ ತರುತ್ತೀರಿ" ಎಂದು ಹೇಳಿದ್ದಾರೆ.
ರಿಷಬ್ ಶೆಟ್ಟಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಶ್ ಅಭಿಮಾನಿಗಳು ಹಾಗೂ ಸಿನಿಪ್ರಿಯರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. 'ರಾಮಾಯಣ : ಭಾಗ ಒಂದು' ಚಿತ್ರದ ಟ್ರೈಲರ್ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದ್ದು, ಸಿನಿಮಾ ಬಿಡುಗಡೆಯತ್ತ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಭಾರತೀಯ ಚಿತ್ರರಂಗದ ಅತ್ಯಂತ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ರಾಮಾಯಣ: ಭಾಗ 1' ಇದೇ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾದ ಟ್ರೇಲರ್ ಸಿನಿಪ್ರಿಯರ ಗಮನ ಸೆಳೆದಿದ್ದು, ಚಿತ್ರದ ದೃಶ್ಯ ವೈಭವ, ಸಂಗೀತ ಮತ್ತು ತಾರಾಗನದ ಅಭಿನಯದ ಬಗ್ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಮಹಾಕಾವ್ಯ ಆಧಾರಿತ ಚಿತ್ರದಲ್ಲಿ ಭಗವಾನ್ ಶ್ರೀ ರಾಮನಾಗಿ ರಣಬೀರ್ ಕಪೂರ್, ಸೀತಾದೇವಿಯಾಗಿ ಸಾಯಿ ಪಲ್ಲವಿ, ರಾವಣನಾಗಿ ಕೆಜಿಫ್ ಖ್ಯಾತಿಯ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸಿದ್ದಾರೆ. ಟ್ರೇಲರ್ ಬಿಡುಗಡೆಯಾದ ಬಳಿಕ ವಿಶೇಷವಾಗಿ ರಾಮನ ಪಾತ್ರದಲ್ಲಿರುವ ಯಶ್ ಅವರ ಲುಕ್ ಮತ್ತು ಪರದೆ ಮೇಲಿನ ಪ್ರೆಸೆನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ದಿಗ್ಗಜರಾದ ಎ ಆರ್ ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತವು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆಕ್ಷನ್ ಕಟ್ ಹೇಳಿದ್ದು, ಪ್ರೈಮ್ ಫೋಕಸ್ ಸಂಸ್ಥಾಪಕ ಹಾಗೂ DNEG ಜಾಗತಿಕ ಸಿಇಒ ನಮಿತ್ ಮಲ್ಹೋತ್ರಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ನಟ ಯಶ್ ಅಭಿನಯದ ಜೊತೆಗೆ ನಿರ್ಮಾಪಕರಾಗಿಯೂ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವರದಿಗಳ ಪ್ರಕಾರ, 'ರಾಮಾಯಣ' ಎರಡು ಭಾಗಗಳ ನಿರ್ಮಾಣಕ್ಕೆ ಸುಮಾರು 4000ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎನ್ನಲಾಗಿದ್ದು, ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಿದೆ. ಈ ಕಾರಣದಿಂದ ಚಿತ್ರದ ವಿಷುಯಲ್ ಎಫೆಕ್ಟ್ಸ್ , ಸೆಟ್ಗಳು ಹಾಗೂ ತಾಂತ್ರಿಕ ಗುಣಮಟ್ಟದ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ.
ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 'ರಾಮಾಯಣ:ಭಾಗ 1'ಇದೇ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದ್ದು, 'ರಾಮಾಯಣ:ಭಾಗ2' ಮುಂದಿನ ವರ್ಷದ ದೀಪಾವಳಿಗೆ ತೆರೆ ಕಾಣಲಿದೆ. ಟ್ರೇಲರ್ ಗೆ ದೊರೆತಿರುವ ಅದ್ಭುತ ಪ್ರತಿಕ್ರಿಯೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ರಾವಣ ಪಾತ್ರದ ಸದ್ದು ನೋಡಿದರೆ, ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯುವ ನಿರೀಕ್ಷೆ ಹೆಚ್ಚಾಗಿದೆ.