Belagavi News:
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ನ 7 ಸ್ಥಾನಗಳಿಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿಧಾನಸೌಧದಲ್ಲಿ ಬೆಳಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದ್ದು, ಶಾಸಕರು ಸಂಜೆ 4 ಗಂಟೆಯವರೆಗೆ ತಮ್ಮ ಮತ ಚಲಾಯಿಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 5 ಬಿಜೆಪಿ 2 ಹಾಗೂ ಜೆಡಿಎಸ್ 1 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಂಖ್ಯಾಬಲದ ಲೆಕ್ಕಾಚಾರ ಪ್ರಕಾರ ಕಾಂಗ್ರೆಸ್ ನ 4 ಅಭ್ಯರ್ಥಿಗಳು ಹಾಗೂ ಬಿಜೆಪಿಯ 2 ಅಭ್ಯರ್ಥಿಗಳು ಸುಲಭವಾಗಿ ಗೆಲುವಿನತ್ತ ಸಾಗಲಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿರುವುದು ಏಳನೇ ಸ್ಥಾನಕ್ಕಾಗಿ ನಡೆಯುತ್ತಿರುವ ಹೈವೋಲ್ಟೇಜ್ ಪೈಪೋಟಿ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಮತ್ತು ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನಡುವಿನ ನೇರ ಹಣಾಹಣಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕ್ರಾಸ್ ವೋಟಿಂಗ್ ಹಾಗೂ ಅಂತಿಮ ಕ್ಷಣದ ರಾಜಕೀಯ ಲೆಕ್ಕಾಚಾರಗಳು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದ್ದು, ಏಳನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ.
ಸಂಜಿ 4 ಗಂಟೆಯ ನಂತರ ಮತ ಎಣಿಕೆ ಆರಂಭವಾಗಲಿದ್ದು, ಸುಮಾರು 6 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗುವ ನೀರಿಕ್ಷೆಯಿದೆ. ಏಳನೇ ಸ್ಥಾನಕ್ಕಾಗಿ ಕಾಂಗ್ರೆಸ್ - ಜೆಡಿಎಸ್ ನಡುವಿನ ಈ ಪ್ರತಿಷ್ಠೆಯ ಕದನದ ಮೇಲೆ ರಾಜ್ಯ ರಾಜಕೀಯದ ಕಣ್ಣು ನೆಟ್ಟಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಶಿವಣ್ಣ ಬಿ.ಎಸ್., ಬಿ.ಕೆ. ಹರಿಪ್ರಸಾದ್, ವಿನಯ್ ಕಾರ್ತಿಕ್ ಕಣಕ್ಕಿಳಿದಿದ್ದಾರೆ.
ಬಿಜೆಪಿಯಿಂದ ರಘು ಆರ್. ಹಾಗೂ ಲಿಂಗರಾಜ್ ಪಾಟೀಲ್ ಸ್ಪರ್ಧಿಸಿದ್ದಾರೆ.
ಜೆಡಿಎಸ್ ಪಕ್ಷ ಗೋವಿಂದ ರಾಜು ಅವರನ್ನು ಕಣಕ್ಕಿಳಿಸಿದೆ.
ಪಕ್ಷಗಳ ಶಾಸಕರ ಬಲಾಬಲ: ಗೆಲುವಿಗೆ 28 ಮತಗಳ ಕೋಟಾ
ಅಭ್ಯರ್ಥಿಯ ಗೆಲುವಿಗೆ 28 ಮತಗಳ ಕೋಟಾ ನಿಗದಿಯಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಶಾಸಕರೊಂದಿಗೆ ಸ್ಪಷ್ಟ ಬಹುಮತ ಹೊಂದಿದೆ. ಬಿಜೆಪಿ 62 ಶಾಸಕರ ಬಲ ಹೊಂದಿದ್ದರೆ, ಜೆಡಿಎಸ್ ಗೆ 18 ಶಾಸಕರ ಬೆಂಬಲವಿದೆ.
ಇದರ ಜೊತೆಗೆ 3 ಪಕ್ಷೇತರ ಶಾಸಕರು, ಬಿಜೆಪಿ ಉಚ್ಚಾಟಿತ 3 ಶಾಸಕರು ಹಾಗೂ ಸ್ವತಂತ್ರ ಪಕ್ಷದ ಶಾಸಕ Gali Janardhan Reddy ಅವರ ಮತಗಳು ನಿರ್ಣಾಯಕವಾಗಿವೆ.
ಮೂವರು ಪಕ್ಷೇತರ ಶಾಸಕರು ಹಾಗೂ ಉಚ್ಚಾಟಿತ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ, ಬಸವಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಅಲ್ಲದೆ, ಬಿಜೆಪಿ ಜೊತೆ ವಿಲೀನಗೊಂಡಿರುವ ಜನಾರ್ಧನ್ ರೆಡ್ಡಿ ಕೂಡ ಎನ್ ಡಿಎ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ. ಹೀಗಾಗಿ ಪಕ್ಷೇತರರು ಹಾಗೂ ಉಚ್ಚಾಟಿತ ಶಾಸಕರ ಮತಗಳು ಫಲಿತಾಂಶದ ಮೇಲೆ ಮಹತ್ವದ ಪ್ರಭಾವ ಬೀರುವ ಸಾದ್ಯತೆ ಇದೆ.
7ನೇ ಸ್ಥಾನಕ್ಕೆ ಮತ ಕಾಳಗ: ಕಾಂಗ್ರೆಸ್ - ಜೆಡಿಎಸ್ ನಡುವೆ ತೀವ್ರ ಪೈಪೋಟಿ:
ಪಕ್ಷಗಳ ಸಂಖ್ಯಾಬಲದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ 4 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲುವ ಸ್ಥಿತಿಯಲ್ಲಿದೆ. ಬಿಜೆಪಿ ಕೂಡ ತನ್ನ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸುವ ವಿಶ್ವಾಸದಲ್ಲಿದೆ. ಆದರೆ, 7ನೇ ಸ್ಥಾನಕ್ಕಾಗಿ ನಡೆಯುತ್ತಿರುವ ಸ್ಪರ್ಧೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇಬ್ಬರು ಅಭ್ಯರ್ಥಿಗಳಿಗೆ ಗೆಲುವಿನ ಅಗತ್ಯವಿರುವ 28 ಮತಗಳ ಕೋಟಾ ತಲುಪಲು ಹೆಚ್ಚುವರಿ ಮತಗಳ ಅಗತ್ಯವಿರುವುದರಿಂದ, ಪಕ್ಷೇತರರು ಹಾಗೂ ಇತರೆ ಶಾಸಕರ ಬೆಂಬಲ ನಿರ್ಣಾಯಕವಾಗಲಿದೆ.
ಈ ಹಿನ್ನೆಲೆಯಲ್ಲಿ, ಮತಗಳ ಲೆಕ್ಕಾಚಾರ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ನಿರ್ವಹಣೆ ಮಹತ್ವ ಪಡೆದುಕೊಂಡಿದೆ. ಯಾವ ಅಭ್ಯರ್ಥಿಗೆ ಎಷ್ಟು ಮತಗಳನ್ನು ನೀಡಬೇಕು ಮತ್ತು ಎರಡನೇ ಪ್ರಾಶಸ್ತ್ಯದ ಮತಗಳನ್ನು ಯಾರಿಗೆ ವರ್ಗಾಯಿಸಬೇಕು ಎಂಬ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಶಾಸಕಾಂಗ ಸಭೆಗಳಲ್ಲಿ ಶಾಸಕರಿಗೆ ಈಗಾಗಲೇ ಸ್ಪಷ್ಟ ಸೂಚನೆಗಳನ್ನು ನೀಡಿವೆ. ಹೀಗಾಗಿ 7ನೇ ಸ್ಥಾನಕ್ಕಾಗಿ ನಡೆಯುತ್ತಿರುವ ಈ ಪೈಪೋಟಿ ಕೊನೆಯ ಕ್ಷಣದವರೆಗೂ ರೋಚಕತೆಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಅಡ್ಡ ಮತದಾನ ಅಥವಾ ಶಾಸಕರ ಗೈರು?: ಮತ ಕೊರತೆ ಎದುರಾಗಿರುವುದರಿಂದ ಅಡ್ಡ ಮತದಾನ ನಡೆಯಲಿದೆಯಾ ಎಂಬ ಕುತೂಹಲ ಕೆರಳಿಸಿದೆ. ಯಾರಾದರೂ ಶಾಸಕರು ಗೈರಾಗುತ್ತಾರೋ ಎಂಬ ನಿರೀಕ್ಷೆಯು ಮೂಡಿಸಿದೆ.
ಕಾಂಗ್ರೆಸ್ ಶಾಸಕರು ವಂಡರ್ ಲಾ ರೆಸಾರ್ಟ್ ನಿಂದ ನೇರವಾಗಿ ಬಸ್ ಮೂಲಕ ವಿಧಾನಸೌಧಕ್ಕೆ ಮತದಾನ ಚಲಾಯಿಸಲು ಆಗಮಿಸುತ್ತಿದ್ದು ಜೆಡಿಎಸ್ ಶಾಸಕರು ದೇವನಹಳ್ಳಿ ರೆಸಾರ್ಟ್ ನಿಂದ ವಿಧಾನಸೌಧಕ್ಕೆ ಬರುತ್ತಿದ್ದಾರೆ.
Also Read:
KIADB ವಿರುದ್ಧ ಬಳ್ಳಾರಿ ಬಂದ್: ಪರಿಹಾರಕ್ಕಾಗಿ ರೈತರ ಹೋರಾಟ, ಪ್ರತಿಕೃತಿ ದಹನ