belagavi news :
ಅಯೋಧ್ಯೆ ರಾಮ ಮಂದಿರದ ದೇಣಿಗೆಗೆ ಸಂಬಂಧಿಸಿದ ವಿವಾದದ ಬೆನ್ನಲ್ಲೇ, ಇದೀಗ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ನಾಲ್ಖೇಡಾ ಸಮೀಪದ ಪ್ರಸಿದ್ಧ 'ಮಾ ಬಾಗಲಾಮುಖಿ' ದೇವಸ್ಥಾನವು ದೇಣಿಗೆ ನಿರ್ವಹಣೆ ಕುರಿತ ಆರೋಪಗಳಿಂದ ಸುದ್ದಿಯಲ್ಲಿದೆ. ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ದೇವಸ್ಥಾನದಲ್ಲಿ ಕಾಣಿಕೆ ಮತ್ತು ದೇಣಿಗೆಗಳ ನಿರ್ವಹಣೆಯಲ್ಲಿ ಹಣಕಾಸು ಆಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿವೆ
ವರದಿಗಳ ಪ್ರಕಾರ, ದೇವಸ್ಥಾನಕ್ಕೆ ಹರಿದುಬರುವ ದೇಣಿಗೆ ಹಾಗೂ ಆಸ್ತಿಯ ನಿರ್ವಹಣೆಗೆ ಸಂಬಂಧಿಸಿದಂತೆ ಟ್ರಸ್ಟಿಗಳ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಇದೇ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಣಕಾಸಿನ ಪಾರದರ್ಶಕತೆ ಕೊರತೆ ಹಾಗೂ ದೇಣಿಗೆ ನಿಧಿಯ ದುರುಪಯೋಗ ನಡೆದಿದೆ ಎಂಬ ಆರೋಪ-ಪ್ರತ್ಯಾರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅದಾಗ್ಯೂ, ಈ ಆರೋಪಗಳ ಕುರಿತು ಸಂಬಂಧಪಟ್ಟ ಆಡಳಿತ ಮಂಡಳಿ ಅಥವಾ ಅಧಿಕಾರಿಗಳಿಂದ ಅಧಿಕೃತ ತನಿಖೆ ಅಥವಾ ಅಂತಿಮ ತೀರ್ಮಾನ ಹೊರ ಬಂದಿರುವ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ನಿರೀಕ್ಷಿಸಲಾಗಿದೆ.
ದೇಣಿಗೆ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಅಗರ್ ಮಾಲ್ವಾ ಜಿಲ್ಲಾಡಳಿತವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಪ್ರಕರಣದ ಸತ್ಯತೆಯ ಪರಿಶೀಲಿಸಲು ಮೂರು ಸದಸ್ಯರ ತನಿಖೆ ಸಮಿತಿಯನ್ನು ರಚಿಸಲಾಗಿದ್ದು, ಏಳು ದಿನಗಳೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಜಿಲ್ಲಾಧಿಕಾರಿ ಪ್ರೀತಿ ಯಾದವ್ ಜೋಡಿಸಿರುವ ಆದೇಶದ ಪ್ರಕಾರ, 'ಮಾ ಬಾಗಲಾಮುಖಿ' ದೇವಸ್ಥಾನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಮಿತಿಯೊಂದು, ಸರ್ಕಾರದ ಅಧಿಕೃತ ದೇವಸ್ಥಾನ ನಿರ್ವಹಣೆ ಸಮಿತಿಯ ಬದಲಾಗಿ ಭಕ್ತರಿಂದ ನಗದು, ಚಿನ್ನ ಹಾಗೂ ಬೆಳ್ಳಿ ರೂಪದಲ್ಲಿ ದೇಣಿಗೆ ಮತ್ತು ಕಾಣಿಕೆಗಳನ್ನು ಸಂಗ್ರಹಿಸುತ್ತಿದೆ ಎಂಬ ಆರೋಪಗಳು ಜಿಲ್ಲಾಡಳಿತಕ್ಕೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.
ದೂರಿನಲ್ಲಿ, ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆಯನ್ನು ನಿರ್ವಹಿಸಲು ಖಾಸಗಿ ಸಮಿತಿಯು ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದು, ದೇವಸ್ಥಾನದ ನಿಧಿಯ ದುರುಪಯೋಗ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಈ ಗಂಭೀರ ಆರೋಪಗಳನ್ನು ಪರಿಗಣಿಸಿ ಜಿಲ್ಲಾಡಳಿತವೂ ಸಮಗ್ರ ತನಿಖೆ ನಡೆಸಲು ನಿರ್ಧರಿಸಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಾಗಿ ಬಿ.ಎಸ್.ಸೋಲಂಕಿ ಅವರ ನೇತೃತ್ವದಲ್ಲಿ ರಚಿಸಲಾದ ತನಿಖಾ ಸಮಿತಿಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಮನೀಶ್ ಸೋಲಂಕಿ ಹಾಗೂ ನಾಲ್ಖೇಡಾ ನಗರ ಪರಿಷತ್ತಿನ ಮುಖ್ಯ ಪೌರಾಧಿಕಾರಿ ಮಿನ್ನಿ ಅಗರ್ವಾಲ್ ಸದಸ್ಯರಾಗಿದ್ದಾರೆ. ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಸಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶನ ನೀಡಲಾಗಿದೆ.
ತನಿಖೆಯ ಭಾಗವಾಗಿ ಮೂರು ಸದಸ್ಯರ ಸಮಿತಿಯು 'ಮಾ ಬಾಗಲಾಮುಖಿ' ದೇವಸ್ಥಾನದ ಆವರಣಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದೆ. ದೇವಸ್ಥಾನದ ನಿರ್ವಹಣೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಹಾಗೂ ಈ ಪ್ರಕರಣದಲ್ಲಿ ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ಅಥವಾ ನಿರ್ವಹಣಾ ಸಮಿತಿಯ ಪ್ರತಿನಿಧಿಗಳ ಪಾತ್ರವಿದೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ.
ಜಿಲ್ಲಾಧಿಕಾರಿಗಳು ಸಮಿತಿಗೆ ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಿ, ತನಿಖೆಯ ಶಿಫಾರಸುಗಳೊಂದಿಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಬಾಗಲಾಮುಖಿ ದೇವಸ್ಥಾನದ ಹಿನ್ನೆಲೆ:
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ನಾಲ್ಖೇಡಾ ದಲ್ಲಿರುವ 'ಮಾ ಬಾಗಲಾಮುಖಿ' ದೇವಸ್ಥಾನವು ದೇಶದ ಪ್ರಮುಖ ಶಕ್ತಿ ಪೀಠ ಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ವರ್ಷಪೂರ್ತಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಹಾಗೂ ಗಣ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ದೇವಸ್ಥಾನಕ್ಕೆ ಭಾರಿ ಪ್ರಮಾಣದಲ್ಲಿ ದೇಣಿಗೆ ಮತ್ತು ಕಾಣಿಕೆಗಳು ಹರಿದುಬರುವ ಹಿನ್ನೆಲೆಯಲ್ಲಿ, ಅದರ ನಿರ್ವಹಣೆಗೆ ಸಂಬಂಧಿಸಿದ ಅಕ್ರಮಗಳ ಆರೋಪಗಳು ಸಾರ್ವಜನಿಕರಲ್ಲಿ ಆತಂಕ ಮತ್ತು ವ್ಯಾಪಕ ಚರ್ಚೆಗೆ ಕಾರಣವಾಗಿವೆ. ತನಿಖಾ ವರದಿ ಬಳಿಕ ಪ್ರಕರಣದ ನೈಜ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.