ಹವಾಮಾನ ಬದಲಾವಣೆ ನಿಜ, ಡಿಸೆಂಬರ್ ಒಳಗೆ ಎನ್ಡಿಸಿ ಸಲ್ಲಿಸಲಿರುವ ಭಾರತ
ಹವಾಮಾನ ಬದಲಾವಣೆಯು ನಿಜ ಮತ್ತು ಸನ್ನಿಹಿತವಾಗಿದ್ದು, ಇದು ಸುಸ್ಥಿರವಲ್ಲದ ಬೆಳವಣಿಗೆ ಮತ್ತು ಅಭಿವೃದ್ಧಿ ಮಾದರಿಗಳಿಂದ ನಡೆಸಲ್ಪಡುತ್ತದೆ
ನವದೆಹಲಿ:
ಬ್ರೆಜಿಲ್ನ ಬೆಲೆಮ್ನಲ್ಲಿ ನಡೆದ ಕಾಪ್30 ಹವಾಮಾನ ಶೃಂಗಸಭೆಯ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಮಾತನಾಡಿದ ಯಾದವ್, ಹವಾಮಾನ ಬದಲಾವಣೆಯು, ’ನಿಜ ಮತ್ತು ಸನ್ನಿಹಿತವಾದದ್ದು’, ಇದು ಸುಸ್ಥಿರವಲ್ಲದ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಾದರಿಗಳಿಂದ ಮುನ್ನಡೆಸಲ್ಪಡುತ್ತದೆ ಎಂದರು.
ಪ್ಯಾರಿಸ್ ಒಪ್ಪಂದದ ಅಡಿ ತನ್ನ ರಾಷ್ಟ್ರೀಯ ಹವಾಮಾನ ಬದ್ಧತೆಯ ಭಾಗವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಪ್ರಸ್ತುತ ಗಡುವುಗಳಿಗಿಂತ ಬಹಳ ಮುಂಚಿತವಾಗಿ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಬೇಕಿದೆ. ಭಾರತವೂ 2035ರ ಅವಧಿಗೆ ತನ್ನ ಪರಿಷ್ಕೃತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್ಡಿಸಿ)ಯನ್ನು ಡಿಸೆಂಬರ್ ವೇಳೆಗೆ ಸಲ್ಲಿಸಲಿದೆ ಎಂದು ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳು ಪ್ರಸ್ತುತ ಗುರಿಯ ದಿನಾಂಕಗಳಿಗಿಂತ ಬಹಳ ಮುಂಚೆಯೇ ನಿವ್ವಳ ಶೂನ್ಯವನ್ನು ತಲುಪಬೇಕಿದೆ. ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 9.1 ರ ಅಡಿ ನಮ್ಮ - ನಮ್ಮ ಬಾಧ್ಯತೆಗಳನ್ನು ಪೂರೈಸಬೇಕು. ಟ್ರಿಲಿಯನ್ಗಟ್ಟಲೆ ಡಾಲರ್ಗಳಲ್ಲಿ ಅಂದಾಜಿಸಲಾದ ಹೊಸ, ಹೆಚ್ಚುವರಿ ಮತ್ತು ರಿಯಾಯಿತಿ ಹವಾಮಾನ ಹಣಕಾಸು ಒದಗಿಸಬೇಕು. ಹವಾಮಾನ ಗುರಿಗಳ ಅನುಷ್ಠಾನವು ಸಮರ್ಪಕವಾಗಿರಬೇಕು, ಸುಲಭವಾಗಿ ಲಭ್ಯವಿರಬೇಕು ಮತ್ತು ಕೈಗೆಟುಕುವಂತಿರಬೇಕು ಮತ್ತು ನಿರ್ಬಂಧಿತ ಬೌದ್ಧಿಕ ಆಸ್ತಿ ಅಡೆತಡೆಗಳಿಂದ ಮುಕ್ತವಾಗಿರಬೇಕು ಎಂದರು.
ಭಾರತದ ಗುರಿಯ ಕುರಿತು ಮಾತನಾಡಿದ ಅವರು, ಹೊಸದಾಗಿ ಪ್ರಾರಂಭಿಸಲಾದ ಪರಮಾಣು ಮಿಷನ್ ಮತ್ತು ಹಸಿರು ಹೈಡ್ರೋಜನ್ ಮಿಷನ್ 2070ರ ವೇಳೆಗೆ ನಿವ್ವಳ ಶೂನ್ಯದತ್ತ ತೆರಳಬೇಕಿದ್ದು, ಮತ್ತಷ್ಟು ವೇಗಗೊಳಿಸುತ್ತದೆ. ನಾವು 2035ರವರೆಗಿನ ನಮ್ಮ ಪರಿಷ್ಕೃತ ಎನ್ಡಿಸಿಗಳನ್ನು ಮತ್ತು ಮೊದಲ ದ್ವೈವಾರ್ಷಿಕ ಪಾರದರ್ಶಕತೆ ವರದಿಯನ್ನು ಸಹ ಬಿಡುಗಡೆ ಮಾಡುತ್ತೇವೆ ಎಂದರು.
ಶೃಂಗಸಭೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ, ಕೈಗಾರಿಕಾ ಪರಿವರ್ತನೆಯನ್ನು ವೇಗಗೊಳಿಸಲು ಜಾಗತಿಕ ಪಾಲುದಾರಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು. ಕೈಗಾರಿಕಾ ಉಪ - ಉತ್ಪನ್ನಗಳಿಂದ ಮೌಲ್ಯ ಸೃಷ್ಟಿಯ ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಯೋಜನೆಗಳನ್ನು ಘೋಷಿಸಿದರು.
ಏನಿದು ಎನ್ಡಿಸಿ:
ಎನ್ಡಿಸಿ ಪ್ಯಾರಿಸ್ ಒಪ್ಪಂದದ ಅಡಿ ಜಾರಿಗೆ ಬಂದಿರುವ ರಾಷ್ಟ್ರೀಯ ಹವಾಮಾನ ಯೋಜನೆಗಳಾಗಿದ್ದು, ಅವು ಹೊರಸೂಸುವಿಕೆಯ ಪ್ರಮಾಣವನ್ನು ಕಡಿತಗೊಳಿಸುವ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಗುರಿ ನಿಗದಿಪಡಿಸುತ್ತದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸುವ ಜಾಗತಿಕ ಪ್ರಯತ್ನಗಳಿಗೆ ಇದು ಮಾರ್ಗದರ್ಶನ ನೀಡುತ್ತದೆ.
ಶೃಂಗಸಭೆಯ ಹೊರತಾಗಿ ಯಾದವ್ ಅವರು ಯುಕೆ ಇಂಧನ ಭದ್ರತೆ ಮತ್ತು ನಿವ್ವಳ ಶೂನ್ಯ ರಾಜ್ಯ ಕಾರ್ಯದರ್ಶಿ ಎಡ್ವರ್ಡ್ ಮಿಲಿಬ್ಯಾಂಡ್ ಅವರನ್ನು ಭೇಟಿ ಮಾಡಿ ಹವಾಮಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬೆಲೆಮ್ನಲ್ಲಿ ಇಂದು ನಡೆದ ಕಾಪ್30 ಶೃಂಗಸಭೆಯ ಸಂದರ್ಭದಲ್ಲಿ ಯುಕೆ ಇಂಧನ ಭದ್ರತೆ ಮತ್ತು ನಿವ್ವಳ ಶೂನ್ಯ ರಾಜ್ಯ ಕಾರ್ಯದರ್ಶಿ ಶ್ರೀ ಎಡ್ವರ್ಡ್ ಮಿಲಿಬ್ಯಾಂಡ್ ಅವರೊಂದಿಗೆ ಸಭೆ ನಡೆಸಲಾಯಿತು ಎಂದರು.
ಕಾಪ್30 ಶೃಂಗಸಭೆಯಲ್ಲಿ ಸಹ - ಅಧ್ಯಕ್ಷರಾಗಿ ಲೀಡರ್ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್ ಅಧಿವೇಶನವನ್ನು ಸಚಿವರು ಉದ್ಘಾಟಿಸಿದರು. ಜಗತ್ತು ಪ್ಯಾರಿಸ್ ಒಪ್ಪಂದದ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಈ ದುಂಡುಮೇಜಿನ ಸಭೆಯು ನಿರ್ಣಾಯಕ ಸಮಯದಲ್ಲಿ ನಡೆಯುತ್ತಿದೆ. ನಾವು ಈಗ ನಿಗದಿತ ಗುರಿ ಅನುಷ್ಠಾನದತ್ತ ಸಾಗಬೇಕಾಗಿದೆ ಎಂದರು.
ಎನ್ಡಿಸಿ ಪ್ರಸ್ತುತ ಪಡಿಸುವಲ್ಲಿ ವಿಳಂಬದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟ ಅನುಮೋದನೆ ಸೇರಿದಂತೆ ಆಂತರಿಕ ಪ್ರಕ್ರಿಯೆಗಳು ನಡೆಯುತ್ತಿದ್ದು, ಡಿಸೆಂಬರ್ ಒಳಗೆ ಬಿಡುಗಡೆ ಮಾಡಲಾಗುವುದು ಎಂದರು.
ಇನ್ನಷ್ಟು ಓದಿರಿ :
ಪ್ರಮುಖ ನಕ್ಸಲ್ ಕಮಾಂಡರ್ ಸೇರಿ 6 ಮಂದಿಯ ಎನ್ಕೌಂಟರ್