belagavi news :
ನವದೆಹಲಿ: Telegram Temporary Ban: ನೀಟ್ ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಹೊರಡಿಸಲಾದ ಕೇಂದ್ರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ನ್ಯಾಯಪೀಠ ವಜಾಗೊಳಿಸಿದ್ದು, ಜೂನ್ 22ರವರೆಗೆ ಟೆಲಿಗ್ರಾಮ್ ಮೇಲೆ ವಿಧಿಸಲಾದ ನಿರ್ಬಂಧವನ್ನು ಮುಂದುವರಿಸಲು ಅನುಮೋಧನೆ ನೀಡಿದೆ.
ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ ಕ್ರಮ ಕೈಗೊಂಡಿದೆ ಎಂದು ನ್ಯಾಯಾಲಯ ತನ್ನ ಆದೇಶವನ್ನು ಹೇಳಿದೆ. ಈ ವೇದಿಕೆಗೆ ಐಟಿ ಕಾಯ್ದೆಯ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಐಟಿ ಕಾಯ್ದೆಯು ಸರ್ಕಾರಕ್ಕೆ ಅಗತ್ಯವಿದ್ದರೆ ಸಂಪೂರ್ಣ ವೇದಿಕೆ ಅಥವಾ ಅಪ್ಲಿಕೇಶನ್ ಗಳನ್ನು ನಿಷೇಧಿಸುವ ಅಧಿಕಾರ ನೀಡುತ್ತದೆ. ಭಾರತದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ವಿನಿಮಯ ಆ್ಯಪ್ ಗಳು ದೇಶದ ಕಾನೂನುಗಳಿಗೆ ಒಳಪಟ್ಟಿರಬೇಕು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಜೂನ್ 21ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಟೆಲಿಗ್ರಾಮ್ ಮೇಲೆ ತಾತ್ಕಾಲಿಕ ನಿರ್ಬಂಧ ಹೇಳಿದ್ದು. ಈ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಮ್ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಇದೀಗ ನ್ಯಾಯಾಲಯ ಕೇಂದ್ರದ ಕ್ರಮವನ್ನು ಎತ್ತಿ ಹಿಡಿದಿದೆ.
ಗಂಭೀರ ಆರೋಪಗಳು: ಟೆಲಿಗ್ರಾಮ್ ವೇದಿಕೆಯನ್ನು ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ವಿವಿಧ ಅಕ್ರಮ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ. ಅಕ್ರಮ ವಸ್ತುಗಳ ಮಾರಾಟ ಸೇರಿದಂತೆ ಅನೇಕ ಕಾನೂನುಬಾಹಿರ ಚಟುವಟಿಕೆಗಳಿಗೆ ಈ ವೇದಿಕೆ ದುರುಪಯೋಗವಾಗುತ್ತಿರುವುದು ಆತಂಕಕಾರಿ ಎಂದು ಅವರು ವಾದಿಸಿದರು.
ಇದೇ ಸಂದರ್ಭದಲ್ಲಿ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ನಿಯಂತ್ರಣ ಮತ್ತು ಕಾನೂನು ಪ್ರಶ್ನೆಗಳ ಹಿನ್ನೆಲೆಯಲ್ಲಿ ನ್ಯಾಯಾಂಗದ ಮುಂದೆ ಹಾಜರಾಗುವುದು ಹೊಸ ವಿಷಯವಲ್ಲ ಎಂದು ಕೂಡ ಉಲ್ಲೇಖಿಸಲಾಗಿದೆ.
ಈ ಸಂಬಂಧ, ಹಿಂದಿನ ವರ್ಷಗಳಲ್ಲಿ ಮೆಟಾ ಸಂಸ್ಥೆಯ ವಾಟ್ಸಪ್ ವಿರುದ್ಧ ವಿಧಿಸಲಾದ ದಂಡವನ್ನು ಪ್ರಶ್ನಿಸಿ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉದಾಹರಣೆಯನ್ನು ಉಲ್ಲೇಖಿಸಲಾಗಿದೆ. 2024 ರಲ್ಲಿ ಭಾರತೀಯ ಸ್ಪರ್ಧಾ ಆಯೋಗ (CCI) ವಾಟ್ಸಪ್ ಮೇಲೆ ₹213 ಕೋಟಿ ದಂಡ ವಿಧಿಸಿತ್ತು ಎಂಬ ಮಾಹಿತಿ ನೀಡಲಾಗಿದೆ.
ಟೆಲಿಗ್ರಾಮ್ ಪ್ರಕರಣವು ಡಿಜಿಟಲ್ ವೇದಿಕೆಗಳ ಮೇಲಿನ ನಿಯಂತ್ರಣ, ಭದ್ರತೆ ಮತ್ತು ಕಾನೂನು ಪಾಲನೆಯ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.
Also Read:
"ತಂದೆ ಟೈಗರ್ ಪ್ರಭಾಕರ್ ಬಿಟ್ಟು ಹೋದ ಅಧ್ಯಾಯಕ್ಕೆ ಜೀವ ತುಂಬಿದ ವಿನೋದ್ ಪ್ರಭಾಕರ್!"