belagavai news :
ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ರಾಜಕೀಯ ಶರಣಾಗತಿಯಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ರಾಜ್ಯಸಭಾ ನಾಮ ನಿರ್ದೇಶನ ನೀಡದ ಬಿಜೆಪಿ ನಿರ್ಧಾರವನ್ನು ಟೀಕಿಸಿದ ಅವರು, ಜೆಡಿಎಸ್ ಗೆ ಬಿಜೆಪಿ ಪದೇ ಪದೇ ಮಾಡುತ್ತಿರುವ ಅವಮಾನವನ್ನು ಎಚ್.ಡಿ.ಕೆ ಸಹಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಜೇವಾಲಾ, 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತ ಬಳಿಕವೂ ಅವರ ಹುದ್ದೆ ಮತ್ತು ಅನುಭವಕ್ಕೆ ಗೌರವ ನೀಡಿ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು ಎಂದು ನೆನಪಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಮಾಜಿ ಪ್ರಧಾನಿಯ ಸ್ಥಾನಮಾನಕ್ಕೆ ಗೌರವ ನೀಡಿದ ಕಾಂಗ್ರೆಸ್ ನಡೆ ಮತ್ತು ಇದೀಗ ಬಿಜೆಪಿ ನಿರ್ಧಾರದ ನಡುವಿನ ವ್ಯತ್ಯಾಸವನ್ನು ಅವರು ಪ್ರಶ್ನಿಸಿದ್ದಾರೆ.
ದೇವೇಗೌಡರು ಈ ಹಿಂದೆ ಬಿಜೆಪಿಯ ವಿರುದ್ಧ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದ ಸುರ್ಜೇವಾಲಾ, ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದರೆ ತ್ಯಜಿಸುವುದಾಗಿ ದೇವೇಗೌಡರು ಹೇಳಿದ್ದನ್ನು ಸ್ಮರಿಸಿದ್ದಾರೆ. ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ದೇವೇಗೌಡರಿಗೆ ಅವಕಾಶ ನೀಡದಿರುವುದು ಬಿಜೆಪಿಗೆ ಮಾಡಿದ ಮತ್ತೊಂದು ಅವಮಾನವಾಗಿದ್ದು, ಅದನ್ನು ಒಪ್ಪಿಕೊಳ್ಳುವುದು ರಾಜಕೀಯ ಶರಣಾಗತಿಯ ಪರಮಾವಧಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಹಾಗೂ ರಾಜ್ಯಸಭಾ ನಾಮ ನಿರ್ದೇಶನ ವಿಚಾರವನ್ನು ಮುಂದಿಟ್ಟುಕೊಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇವಾಲಾ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2023ರ ಅಕ್ಟೋಂಬರ್ ನಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದರು. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ರಾಜ್ಯಸಭಾ ನಾಮನಿರ್ದೇಶನ ದೊರಕದಿರುವುದು ಜೆಡಿಎಸ್ ನ ರಾಜಕೀಯ ದುರ್ಬಲತೆಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಮಾಜಿ ಪ್ರಧಾನಿಯನ್ನು ರಾಜ್ಯಸಭೆಗೆ ಕಳಿಸುವ ವಿಚಾರದಲ್ಲೂ ಬಿಜೆಪಿ ಒಪ್ಪದಿರುವುದು ಕರ್ನಾಟಕಕ್ಕೆ ಮಾಡಿದ ಅನ್ಯಾಯ ಹಾಗೂ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ. ದೇವೇಗೌಡರು ರೈತರ ಧ್ವನಿ, ಮಣ್ಣಿನ ಮಗ ಮತ್ತು ದೇಶದಲ್ಲಿ ಬದುಕಿರುವ ಏಕೈಕ ಮಾಜಿ ಪ್ರಧಾನಿ ಎಂಬುದನ್ನು ಉಲ್ಲೇಖಿಸಿದ ಸುರ್ಜೆವಾಲ, ಅಂತಹ ನಾಯಕನಿಗೆ ರಾಜ್ಯಸಭೆಯಲ್ಲಿ ಅವಕಾಶ ನೀಡದಿರುವುದು ಬಿಜೆಪಿ ಮನೋಭಾವವನ್ನು ಬಯಲಿಗೆ ಎಳೆಯುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ತಮ್ಮ ತಂದೆಗೆ ರಾಜ್ಯಸಭಾ ಸ್ಥಾನವನ್ನು ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಅವರ ರಾಜಕೀಯ ಪ್ರಭಾವವೇನು ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಅಧಿಕಾರಕ್ಕಾಗಿ ಎಲ್ಲವನ್ನು ಸಹಿಸಿಕೊಳ್ಳುವ ಪರಿಸ್ಥಿತಿಗೆ ಜೆಡಿಎಸ್ ತಲುಪಿದೆ ಎಂದು ಆರೋಪಿಸಿದ ಕಾಂಗ್ರೆಸ್, ಪಕ್ಷಕ್ಕೆ ಸ್ವಾಭಿಮಾನ ಇದ್ದರೆ ಬಿಜೆಪಿ ಮೈತ್ರಿಯಿಂದ ಹೊರ ಬರಬೇಕು. ಎಂದು ಆಗ್ರಹಿಸಿದೆ. ರಾಜ್ಯಸಭೆ ಟಿಕೆಟ್ ವಿಚಾರ ಇದೀಗ ರಾಜ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Also Read:
23 ಪಕ್ಷಗಳು ಒಂದೇ ವೇದಿಕೆಯಲ್ಲಿ: ಇಂದು INDIA ಕೂಟದ 'ಜನಬಂಧನ್' ಮಹಾಸಭೆ