belagavi news :
ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಚನೋತ್ಸವವು ಭಕ್ತಿಯ, ಸಂಸ್ಕೃತಿಯ ಮತ್ತು ಏಕತೆಯ ಅದ್ಭುತ ಸಂಭ್ರಮವಾಗಿ ಮೂಡಿಬಂದಿತು. ಸುಮಾರು ೧ ಗಂಟೆ 15 ನಿಮಿಷಗಳ ಕಾಲ ವಿಶ್ವಗುರು ಬಸವಣ್ಣನವರ 34 ವಚನಗಳು ಸಾವಿರ ಕಂಠಗಳಿಂದ ಒಂದೇ ಸ್ವರದಲ್ಲಿ ಮೊಳಗಿದವು. ರಾಗಬದ್ಧವಾಗಿ ಹಾಡಿದ ಈ ವಚನಗಳಿಗೆ ಗಣ್ಯರು ತಲೆದುಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಸಂಸ್ಥೆಯ ಕನ್ನಡ ಬಳಗ ಹಾಗೂ ಸಂಗೀತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಈ ವಚನೋತ್ಸವ ಎಲ್ಲರ ಮನಸೋರೆಗೊಂಡಿತು.
5 ವರ್ಷದ ಮಕ್ಕಳಿಂದ ಹಿಡಿದು 80 ವರ್ಷದ ಹಿರಿಯರವರೆಗೆ ಕೆಎಲ್ಇ ಸಂಸ್ಥೆಯ ಮೆಡಿಕಲ್, ಡೆಂಟಲ್, ಹೋಮಿಯೋಪತಿ, ಫಾರ್ಮಸಿ, ಪಿಸಿಯೋಥೆರಪಿ, ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸ್, ಪ್ರಾರ್ಥಮಿಕ, ಪ್ರೌಢ, ಪಿಯು ಹಾಗೂ ಪದವಿ ವಿದ್ಯಾರ್ಥಿಗಳು, ವೈದ್ಯರು, ಅಧ್ಯಾಪಕರು, ಶಿಕ್ಷಕರು ಮತ್ತು ಸಿಬ್ಬಂದಿ ಸೇರಿ ಸುಮಾರು ೧ ಸಾವಿರಕ್ಕೂ ಹೆಚ್ಚು ಜನರು ಒಟ್ಟಾಗಿ ವಚನಗಳನ್ನು ಏಕಕಂಠದಿಂದ ಸುಶ್ರಾವ್ಯವಾಗಿ ಹಾಡಿದರು.
ಈ ವಿಶಿಷ್ಟ ಕಾರ್ಯಕ್ರಮವು ಬಸವಣ್ಣನವರ ತತ್ವಸಾರವನ್ನು ಮತ್ತೊಮ್ಮೆ ಜನಮನಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.
ಡೀಮ್ಡ್ ವಿ.ವಿಯ ಆವರಣದ ಮೆಟ್ಟಿಲುಗಳ ಮೇಲೆ ಶುಭ್ರ ಬಿಳಿ ಬಟ್ಟೆ ಧರಿಸಿ, ಕೊರಳಲ್ಲಿ ಬಸವಣ್ಣನ ಭಾವಚಿತ್ರವಿದ್ದ ವಚನೋತ್ಸವ ಶಲ್ಯ ಧರಿಸಿ ನಿಂತಿದ್ದ ಗಾಯಕರು ಶಿಸ್ತು, ರಾಗಬದ್ಧವಾಗಿ 34 ವಚನಗಳನ್ನು ಹಾಡಿದರು.
ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ವಚನೋತ್ಸವವು ಶಿವಮೊಗ್ಗದಲ್ಲಿ ನಡೆದ ವಚನ ಗಾಯನ ಮಾದರಿಯನ್ನು ಅನುಸರಿಸಿ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜಿಸಲಾಯಿತು. ಖ್ಯಾತ ಗಾಯಕ ದಿವಂಗತ ಸಿ. ಅಶ್ವಥ್ ಅವರು ರಾಗ ಸಂಯೋಜಿಸಿ ಹಾಡಿನ ಶೈಲಿಯನ್ನು ಆಧರಿಸಿ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಲಾಯಿತು.
ಸಂಗೀತ ಮಹಾವಿದ್ಯಾಲಯದ ಶಿಕ್ಷಕರು ಕಳೆದ ಮೂರು ತಿಂಗಳ ಕಾಲ ನಿರಂತರ ಪರಿಶ್ರಮದಿಂದ ಸಮೂಹ ಗಾಯನವನ್ನು ಸಿದ್ಧಪಡಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಈ ಪ್ರಯತ್ನಕ್ಕೆ ಎಲ್ಲರಿಂದಲೂ ಬಾರಿ ಶ್ಲಾಘನೆ ವ್ಯಕ್ತವಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಭಾಕರ್ ಕೋರೆ ಅವರು ವಚನ ಗಾಯನದ ಮಾಧುರ್ಯಕ್ಕೆ ಮನಸೋತು ನೆಚ್ಚಿಗೆ ವ್ಯಕ್ತಪಡಿಸಿದರು. ಜೊತೆಗೆ ಪ್ರತಿ ವರ್ಷವೂ ದೊಡ್ಡ ಮಟ್ಟದಲ್ಲಿ ವಚನೋತ್ಸವ ಆಯೋಜಿಸುವ ಭರವಸೆಯನ್ನು ನೀಡಿದರು.
ಅವರು ಮಾತನಾಡಿ, "12ನೇ ಶತಮಾನದಲ್ಲಿಯೇ ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತಾದ ಅನುಭವ ಮಂಟಪದ ಮೂಲಕ ಜಾತಿ, ವರ್ಣ, ವರ್ಗ ಬೇದದ ವಿರುದ್ಧ ಧ್ವನಿ ಎತ್ತಿ ಸಮಾನತೆಯ ಸಂದೇಶ ನೀಡಿದರು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿದರು. ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದರು. ಇಂದಿನ ಕಾಲಘಟ್ಟದಲ್ಲಿಯೂ ವಚನಗಳ ಪ್ರಸ್ತುತತೆ ಅತ್ಯಂತ ಮಹತ್ವದ್ದಾಗಿದೆ" ಎಂದು ಹೇಳಿದರು.
ಈ ವಚನೋತ್ಸವವು ಶರಣ ಸಂಸ್ಕೃತಿಯ ಮೌಲ್ಯಗಳನ್ನು ಮತ್ತೊಮ್ಮೆ ಜನಮನದಲ್ಲಿ ಜಾಗೃತಿಗೊಳಿಸಿದೆ.
ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ವಚನೋತ್ಸವವು ಭಕ್ತಿ, ತತ್ವಜ್ಞಾನ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂಯೋಜನೆಯಾಗಿ ಮೂಡಿಬಂದಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕಮಗಳೂರು ಶ್ರೀ ಬಸವ ತತ್ವ ಪೀಠ ಹಾಗೂ ಶಿವಮೊಗ್ಗದ ಬಸವ ಕೇಂದ್ರದ ಡಾ. ಬಸವ ಮರಳುಸಿದ್ದ ಸ್ವಾಮೀಜಿ ಅವರು ಮಾತನಾಡಿ, ಶರಣರ ವಚನ ಗಾಯನ ಇಂದಿನ ಜಗತ್ತಿಗೆ ಅತ್ಯಂತ ಪ್ರಸ್ತುತವಾದ ಸಂದೇಶ ನೀಡುತ್ತದೆ ಎಂದು ಹೇಳಿದರು.
ಅವರು ಮಾತನಾಡಿ, "ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ನಿದರ್ಶನವಾಗಿದೆ. ಇಂದಿನ ಜಗತ್ತು ಯುದ್ಧ, ಅಶಾಂತಿ ಹಾಗೂ ಮಾನವೀಯ ಮೂಲಗಳ ಕುಸಿತದಿಂದ ಕತ್ತಲೆಗೆ ಸಿಲುಕಿದೆ. ಈ ಕತ್ತಲೆಯನ್ನು ದೂರ ಮಾಡಲು ಬಸವಾದಿ ಶರಣರ ಮಾನವ ಪರ ಬೆಳಕು ಅಗತ್ಯ" ಎಂದು ಅಭಿಪ್ರಾಯಪಟ್ಟರು.
ಅವರು ಮುಂದುವರೆದು, "ಲಿಂಗಾಯತ ಸಮಾಜವು ಬಸವಣ್ಣನವರನ್ನು ಕೇವಲ ಸೀಮಿತ ವಲಯದಿಂದ ಹೊರ ತಂದು ಜನಸಾಮಾನ್ಯರ ನಡುವೆ ಅವರ ತತ್ವಗಳನ್ನು ಹೆಚ್ಚು ವ್ಯಾಪಕವಾಗಿ ಪರಿಚಯಿಸುವ ಅಗತ್ಯವಿದೆ. ಈ ದೆಸೆಯಲ್ಲಿ ವಚನೋತ್ಸವ ಮಹತ್ವದ ಹೆಜ್ಜೆಯಾಗಿದೆ" ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎನ್ಎಂಸಿ ಪ್ರಾಂಶುಪಾಲ ಡಾ. ರಾಜೇಶ ಪವಾರ ವಹಿಸಿದ್ದರು. ಡಾ. ವಿ.ಎಂ. ಪಟ್ಟಶೆಟ್ಟಿ, ಡಾ. ಎಚ್.ಬಿ. ರಾಜಶೇಖರ, ಡಾ. ವ್ಹಿ.ಡಿ. ಪಾಟೀಲ, ಡಾ. ಅವಿನಾಶ್ ಕವಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
Also Read:
ಪ್ಯಾಕಿಂಗ್ ಕೆಲಸ ಕೊಡ್ತೀವಿ ಅಂತ ಹೇಳಿ ನಂಬಿಸಿ ₹10 ಕೋಟಿ ಮೋಸ : ಹಾವೇರಿಯಲ್ಲಿ ಬಯಲಾಯಿತು ಮಹಾ ವಂಚನೆ