Belagavi News:
ಚಾಮರಾಜನಗರ: ಹನೂರು ತಾಲೂಕಿನಲ್ಲಿ ಮತ್ತೆ ಚಿರತೆ ದಾಳಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಮನೆಯ ಮುಂಭಾಗ ಕುಳಿತಿದ್ದ ಅಜ್ಜಿ ಹಾಗೂ 4 ವರ್ಷದ ಮೊಮ್ಮಗಳ ಮೇಲೆ ಚಿರತೆ ಏಕಾಏಕಿ ಎರಗಿದ ಘಟನೆ ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ದಾಳಿಯಲ್ಲಿ ಶಿವಮ್ಮ (55) ಹಾಗು ಅವರ ನಾಲ್ಕು ವರ್ಷದ ಮೊಮ್ಮಗಳು ಗಾಯಗೊಂಡಿದ್ದು, ಬಾಲಕಿಗೆ ಗಂಭೀರ ಗಾಯಗಳಾಗಿವೆ. ಇಬ್ಬರಿಗೂ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಶಿವಮ್ಮ ಅವರು ಮನೆಯ ಮುಂಭಾಗ ಕುಳಿತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಅವರ ಕಿರುಚಾಟ ಕೇರಿ ನಾಲ್ಕು ವರ್ಷದ ಮೊಮ್ಮಗಳು ಮನೆಯ ಹೊರಗೆ ಬಂದಿದ್ದಾಳೆ, ಇದೇ ವೇಳೆ ಬಾಲಕಿಯ ಮೇಲೆಯೂ ಚಿರತೆ ದಾರಿ ನಡೆಸಿ ಗಾಯಗೊಳಿಸಿದೆ.
ಅಜ್ಜಿ ಮತ್ತು ಬಾಲಕಿಯ ಕಿರುಚಾಟ ಕೇಳಿ ಮನೆಯವರು ಹಾಗೂ ಸ್ಥಳೀಯರು ತಕ್ಷಣ ಹೊರಗೆ ಓಡಿ ಬಂದ ಪರಿಣಾಮ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಇತ್ತೀಚಿನ ದಿನಗಳಲ್ಲಿ ಹನೂರು ಭಾಗದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಾತ್ರಿ ವೇಳೆ ಮಕ್ಕಳನ್ನು ಒಂಟಿಯಾಗಿ ಹೊರಗೆ ಬಿಡದಂತೆ ಹಾಗೂ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಅಜ್ಜಿ - ಮೊಮ್ಮಗಳು ಬದುಕುಳಿದಿದ್ದೇ ಪವಾಡ! ಚಿರತೆಯ ಭೀಕರ ದಾಳಿಯ ನಡುವೆಯೂ ಇಬ್ಬರು ಪ್ರಾಣಪಾಯದಿಂದ ಪಾರಾಗಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. ಚಿರತೆ ದಾಳಿ ನಡೆಸಿದ ಕೇಳಬೇಕು ಕ್ಷಣಗಳಲ್ಲಿ ಮನೆಯವರು ತಮ್ಮ ಸ್ಥಳೀಯರು ಕಿರುಚಾಟ ಕೇಳಿ ಹೊರಗೆ ಧಾವಿಸಿದ್ದರಿಂದ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಕ್ಷಣಮಾತ್ರದ ವಿಳಂಬವಾಗಿದ್ದರು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹೊಗ್ಯಂ ವಲಯ ಅರಣ್ಯಾಧಿಕಾರಿ ಜಿತೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯ ಸುತ್ತಮುತ್ತ ಚಿರತೆಯ ಚಲನವಲನದ ಗುರುತುಗಳನ್ನು ಪರಿಶೀಲಿಸಿದ ಅಧಿಕಾರಿಗಳು ಪರಿಸ್ಥಿತಿಯ ಅವಲೋಕನ ನಡೆಸಿದರು.
ಗ್ರಾಮದಲ್ಲಿ ಚಿರತೆಯ ಓಡಾಟದಿಂದ ಜನರು ಭಯ ಭೀತಿರಾಗಿದ್ದು, ಕೂಡಲೇ ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ರಾತ್ರಿ ವೇಳೆ ಅರಣ್ಯ ಇಲಾಖೆ ನಿರಂತರ ಗಸ್ತು ನಡೆಸಿ ಜನರ ಸುರಕ್ಷತೆಯನ್ನು ಖಚಿತ ಪಡಿಸಬೇಕು ಎಂಬ ಬೇಡಿಕೆಯು ಕೇಳಿಬಂದಿದೆ.