Belagavi News:
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ.
ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಪಾರ್ಟಿ ಕೊಡಬೇಕೆಂದು ಸ್ನೇಹಿತ ಕೇಳಿದ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನದೇ ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಮೃತರನ್ನು ವಣ್ಣೂರ ಗ್ರಾಮದ ಹನುಮಂತಪ್ಪ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಆರೋಪಿಯಾಗಿ ಅದೇ ಊರಿನ ವಿಶ್ವನಾಥ್ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಗ್ರಾಮದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.
ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಪಾರ್ಟಿ ವಿಚಾರಕ್ಕೆ ಆರಂಭವಾದ ಮಾತುಕತೆ ವಿಕೋಪಕ್ಕೆ ತಿರುಗಿ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ.
ಮಧ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ವಿಶ್ವನಾಥ್ ಮತ್ತು ಹನುಮಂತಪ್ಪ ನಡುವೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಹನುಮಂತಪ್ಪ ಆತ್ಮೀಯತೆಯಿಂದ ಪಾರ್ಟಿ ಕೊಡಿಸುವಂತೆ ಕೇಳಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ನಡೆದ ಸಣ್ಣ ತಕರಾರಿನಲ್ಲಿ, ವಿಶ್ವನಾಥನ ಕಣ್ಣಿಗೆ ಹನುಮಂತಪ್ಪನ ಬೆರಳು ತಾಗಿದ್ದು, ಇದರಿಂದ ಸಿಟ್ಟುಗೊಂಡ ಆರೋಪಿ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಂತರ ಆರೋಪಿ ವಿಶ್ವನಾಥ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ನೇಸರಗಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆದಿದೆ. ಘಟನೆಯ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಹೆತ್ತ ತಾಯಿ ಅನಾಥ: ಹೆತ್ತ ತಾಯಿ ಅನಾಥಳಾದಂತೆ ಕಣ್ಣೀರಿಡುತ್ತಿರುವ ಸುಜಾತಾ ಇಟಗಿ ಅವರ ತಮ್ಮ ಮಗ ಹನುಮಂತಪ್ಪನನ್ನು ಕಳೆದುಕೊಂಡ ದುಃಖವನ್ನು ತಡೆದುಕೊಳ್ಳಲಾಗದೆ ಭಾವುಕರಾಗಿದ್ದಾರೆ. ಕಾಲಿನ ಸಮಸ್ಯೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಮಗನೇ ತಮ್ಮನ್ನು ಜೋಪಾನ ಮಾಡುತ್ತಿದ್ದನು ಎಂದು ಅವರು ನೆನಪಿಸಿಕೊಂಡರು.
" ಅವನೇ ನನಗೆ ಅಡುಗೆ ಮಾಡಿ ಊಟ ಕೊಡುತ್ತಿದ್ದ, ಊರಿನ ಎಲ್ಲರ ಜೊತೆಯೂ ಅವನಿಗೆ ಒಳ್ಳೆಯ ಸಂಬಂಧವಿತ್ತು. ಯಾರ ಜೊತೆಗೂ ಜಗಳ ಮಾಡದ ಒಳ್ಳೆಯ ಹುಡುಗ. ಈ ವರ್ಷ ಅವನ ಮದುವೆ ಮಾಡಲು ಹುಡುಗಿ ನೋಡುತ್ತಿದ್ದೆವು. ಅಷ್ಟರೊಳಗೆ ಈ ದುರಂತ ಸಂಭವಿಸಿತು. ಈಗ ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾನೆ," ಎಂದು ಸುಜಾತಾ ಇಟಗಿ ಕಣ್ಣೀರಿಟ್ಟರು.
ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಘಟನೆ ಕುಟುಂಬ ಹಾಗೂ ಗ್ರಾಮಸ್ಥರನ್ನು ಆಘಾತಕ್ಕೊಳಪಡಿಸಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ಮುಂದುವರಿದಿದೆ.
Also Read:
ಉತ್ತರ ಕನ್ನಡದಲ್ಲಿ ಭಾರಿ ಮಳೆ : ವಾಹನ ಸವಾರರ ಪರದಾಟ, ಸಂಚಾರ ಅಸ್ತವ್ಯಸ್ತ,