belagavi News:
ನವದೆಹಲಿ: ದೇಶದ ಹಲವು ವಲಯಗಳಲ್ಲಿ ಭಾರತ ಸ್ವಾವಲಂಬನೆಯ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ' ಮನ್ ಕಿ ಬಾತ್ ' ನಲ್ಲಿ ಅವರು, ಏರೋಸ್ಪೇಸ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ' ಮೇಡ್ ಇನ್ ಇಂಡಿಯಾ' ಸಿ- 295 ವಿಮಾನದ ಮೊದಲು ಹಾರಾಟವನ್ನು ವಿಶೇಷವಾಗಿ ಉಲ್ಲೇಖಿಸಿದರು.
ಭಾರತದಲ್ಲೇ ತಯಾರಾಗುತ್ತಿರುವ ಸಿ- 295 ವಿಮಾನ ಯೋಜನೆ ದೇಶದ ರಕ್ಷಣಾ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಹೊಸ ಶಕ್ತಿ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದಲ್ಲಿ ಒಟ್ಟು 56 ಸಿ -295 ವಿಮಾನಗಳನ್ನು ಕ? ಖರೀದಿಸಲಾಗುತ್ತಿದ್ದು, ಅದರಲ್ಲಿ 40 ವಿಮಾನಗಳನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಏರ್ ಬಸ್ ಸಹಯೋಗದೊಂದಿಗೆ ವಡೋದರದ ಉತ್ಪಾದನಾ ಘಟಕದಲ್ಲಿ ಅಸೆಂಬರ್ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದರು. ಈ ಯೋಜನೆ ಎಂಎಸ್ ಎಂಇ ಕ್ಷೇತ್ರಕ್ಕೆ ಬಲ ನೀಡುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲಿ ನಿರ್ಮಿತ ಮೊದಲ ಸಿ-295 ಮಿಲಿಟರಿ ಸಾರಿಗೆ ವಿಮಾನವು ಜೂನ್ 10 ರಂದು ತನ್ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸುಮಾರು 21,935 ಕೋಟಿ ರೂಪಾಯಿ ವೆಚ್ಚದ ಈ ಮಹತ್ವದ ಯೋಜನೆ, ಆತ್ಮನಿರ್ಭರ ಭಾರತ ದಿಕ್ಕಿನಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಇದಲ್ಲದೆ, ಕೋಲ್ಕತ್ತಾದಲ್ಲಿ ನಡೆದ ನೌಕಾಪಡೆ ಕಾರ್ಯಕ್ರಮವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಐಎನ್ಎಸ್ ದುನಗಿರಿ, ಐಎನ್ಎಸ್ ಶಂಶಕ್ ಮತ್ತು ಐಎನ್ಎಸ್ ಅಗ್ರಾ ಹಡಗುಗಳನ್ನು ಭಾರತೀಯ ನೌಕಾಪಡೆಗೆ ಸೇರಿಸಿರುವುದನ್ನು ಹೆಮ್ಮೆಪಟ್ಟು ಹೇಳಿದರು. ಈ ಯುದ್ಧನೌಕೆಗಳ ವಿನ್ಯಾಸದಿಂದ ನಿರ್ಮಾಣದವರೆಗೆ ಎಲ್ಲವೂ ಭಾರತದಲ್ಲೇ ನಡೆದಿರುವುದು ದೇಶೀಯ ತಂತ್ರಜ್ಞಾನದ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜೂನ್ ತಿಂಗಳಲ್ಲಿ ದೇಶವು ಹಲವು ಕ್ಷೇತ್ರಗಳಲ್ಲಿ ಸಾಧಿಸಿದ ಈ ಮೈಲಿಗಲ್ಲುಗಳು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ತಂದಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜೂನ್ 21ರಂದು ಆಚರಿಸಲಾದ ಅಂತಾರಾಷ್ಟ್ರೀಯ ಯೋಗ ದಿನವನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ವಿಶ್ವದಾದ್ಯಂತ ಯೋಗದ ಬಗ್ಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2,500ಕ್ಕೂ ಹೆಚ್ಚು ಸ್ಥಳಗಳಲ್ಲಿ ವೈವಿಧ್ಯಮಯ ಯೋಗ ಕಾರ್ಯಕ್ರಮಗಳು ನಡೆದಿವೆ ಎಂದು ತಿಳಿಸಿದ್ದಾರೆ. ಕೋಟ್ಯಂತರ ಜನರು ಅಭಿಯಾನದಲ್ಲಿ ಭಾಗವಹಿಸಿರುವುದು ಯೋಗದ ಜಾಗತಿಕ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ಅಯೋಜಿಸಲಾದ 'ವಿಶ್ವ ಯೋಗ ಆಸನ ಚಾಂಪಿಯನ್ ಶಿಪ್ ' ಕುರಿತು ಮಾತನಾಡಿದ ಪ್ರಧಾನಿ ಮೋದಿ, ಈ ಸ್ಪರ್ಧೆಯಲ್ಲಿ ಭಾರತವು ಅತ್ಯುತ್ತಮ ಸಾಧನೆ ಮಾಡಿದೆ ಎಂದು ಹೇಳಿದರು. ಭಾರತವೂ ಒಟ್ಟು 114 ಪದಕಗಳನ್ನು ಗೆದ್ದು, ಅದರಲ್ಲಿ 102 ಚಿನ್ನದ ಪದಕಗಳನ್ನು ಪಡೆದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಇದೇ ವೇಳೆ ನಳಂದ ವಿಶ್ವವಿದ್ಯಾಲಯದ ಪ್ರಾಚೀನ ಪರಂಪರೆಯಾದ ' ಶಸ್ತ್ರಾರ್ಥ'ದ ಪುನರುಜ್ಜೀವನದ ಕುರಿತು ಮಾತನಾಡಿದ ಪ್ರಧಾನಿ, ಇದು ಕೇವಲ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಅಲ್ಲ, ಬದಲಾಗಿ ಚರ್ಚೆ, ಸಂವಾದ ಮತ್ತು ವಿಚಾರ ವಿನಿಮಯದ ಶಿಸ್ತುಬದ್ಧ ಪ್ರಕ್ರಿಯೆಯಾಗಿದೆ ಎಂದು ವಿವರಿಸಿದರು.
ತರ್ಕ ಮತ್ತು ಸತ್ಯಾಧಾರಿತ ವಾದವನ್ನು ಮಂಡಿಸುವ ಕೌಶಲ್ಯ ಹಾಗೂ ಇತರರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸುವ ಗುಣವನ್ನು ' ಶಾಸ್ತ್ರಾರ್ಥ ' ಬೆಳೆಯಿಸುತ್ತದೆ ಎಂದು ಅವರು ಹೇಳಿದರು. ನಳಂದ ವಿಶ್ವವಿದ್ಯಾಲಯವು ಈ ಪರಂಪರೆಯನ್ನು ತನ್ನ ಘಟಿಕೋತ್ಸವ ಸಮಾರಂಭದ ಭಾಗವಾಗಿ ಅಳವಡಿಸಿಕೊಂಡಿರುವುದು ಸಂತೋಷದ ಸಂಗತಿ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
Also Read:
ಪ್ರಧಾನಿ ಮೋದಿ ಸೆರೆಲ್ಸ್ ನಲ್ಲಿ ಅಧಿಕೃತ ಸ್ವಾಗತ ಸ್ವೀಕರಿಸಿದರು