Belagavi News :
ಕರೂರು ( ತಮಿಳುನಾಡು): ಕರೂರು ಕಾಲ್ತುಳಿತ ದುರಂತವು ತಮ್ಮ ರಾಜಕೀಯ ಜೀವನದ ಅತ್ಯಂತ ನೋವಿನ ಅಧ್ಯಾಯವಾಗಿ ಉಳಿದಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಹೇಳಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿದ ಅವರು, ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ವೇಳೆ ಭಾವುಕರಾದ ವಿಜಯ್, ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಸಾಧನೆಯು ಕರೂರು ದುರಂತದಿಂದ ಉಂಟಾದ ನೋವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
" ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು, ಕೆಲವು ನೋವುಗಳು ಮತ್ತು ಗಾಯಗಳು ಎಂದಿಗೂ ಮರೆಯಾಗುವುದಿಲ್ಲ. ನನ್ನ ಜೀವನದಲ್ಲಿ ಅತಿ ಹೆಚ್ಚು ನೋವುಂಟು ಮಾಡಿದ ಘಟನೆ, ಕರೂರು ಕಾಲ್ತುಳಿತ ದುರಂತವಾಗಿದೆ" ಎಂದು ಅವರು ಹೇಳಿದರು.
ಘಟನೆಯ ಕುರಿತು ಮಾತನಾಡಿದ ವಿಜಯ್, ಜನಸಂದಣಿಯನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದರು ಎಂದು ಆರೋಪಿಸಿದರು. ಈ ದುರಂತದ ಹೊಣೆಯನ್ನು ತಮ್ಮ ಮೇಲೆ ಹೊರಿಸಲು ಹಿಂದಿನ ಡಿಎಂಕೆ ಸರ್ಕಾರ ಪ್ರಯತ್ನಿಸಿತ್ತು ಎಂದು ಟೀಕಿಸಿದರು.
ಚುನಾವಣೆ ಪ್ರಚಾರದ ವೇಳೆ ರಾಜ್ಯಾದ್ಯಂತ ಜನರೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದ ಅವರು, ಪೆರಂಬಲೂರಿನ ಕಾರ್ಯಕ್ರಮವನ್ನು ಜನಸಂದಣಿ ಹೆಚ್ಚಿರುವ ಕಾರಣ ರದ್ದುಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದರು. ಆದರೆ, ಕರೂರು ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸೇರಿದರು ಯಾವುದೇ ಮುನ್ನೆಚ್ಚರಿಕೆ ಅಥವಾ ಎಚ್ಚರಿಕೆ ನೀಡಲಾಗಿರಲಿಲ್ಲ ಎಂದು ಆರೋಪಿಸಿದರು.
ಕರೂರು ಕಾಲ್ತುಳಿತ ದುರಂತದ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್, ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದರು.
ನಮಕ್ಕಲ್ ನ ಸಾರ್ವಜನಿಕರ ಸಭೆ ಬಳಿಕ ಕರೂರಿಗೆ ಬಂದಿದ್ದೆವು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಅನಿಸಿದ್ದರೆ, ಕಾರ್ಯಕ್ರಮವನ್ನು ರದ್ದುಗೊಳಿಸುವ ಅಧಿಕಾರ ಅವರಿಗಿತ್ತು. ಆದರೆ, ಅಂತಹ ಯಾವುದೇ ಎಚ್ಚರಿಕೆ ನೀಡದೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟರು. ಅಂದು ನಾನು ಪೊಲೀಸರ ಕಾರ್ಯಕ್ಕೆ ಧನ್ಯವಾದಗಳು ತಿಳಿಸಿದ್ದೆ. ಇಂತಹ ದುರಂತ ಸಂಭವಿಸುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ವಿಜಯ್ ಹೇಳಿದರು.
ಈ ದುರಂತಕ್ಕೆ ಕಾರಣವೇನು? ಸೂಕ್ತ ಪೊಲೀಸ್ ಬಂದೋಬಸ್ತ್ ಏಕೆ ಒದಗಿಸಲಾಗಲಿಲ್ಲ? ಇಷ್ಟೊಂದು ದೊಡ್ಡ ಜನಸಮೂಹವನ್ನು ನಿರ್ವಹಿಸಲು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಅವರು ಒತ್ತಾಯಿಸಿದರು.
ತಮ್ಮನ್ನು ನೋಡಲು ಬಂದಿದ್ದ ಅನೇಕ ಮಕ್ಕಳು ಸೇರಿದಂತೆ ಹಲವು ಅಮಾಯಕರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ ಎಂದು ವಿಜಯ್ ಭಾವುಕರಾದರು.
ಈ ವೇಳೆ ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಸ್ಮಾರಕ ನಿರ್ಮಿಸುವುದಾಗಿ ಅವರು ಘೋಷಿಸಿದರು. ಭವಿಷ್ಯದ ಪೀಳಿಗೆಗಳು ಈ ಘಟನೆಯನ್ನು ನೆನಪಿಸಿಕೊಳ್ಳುವಂತಾಗಬೇಕು ಹಾಗೂ ಇಂತಹ ದುರಂತಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ತಪ್ಪಿಸುವ ಉದ್ದೇಶದಿಂದ ಟಿವಿಕೆ ವತಿಯಿಂದ ಕರೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ವಿಜಯ್ ತಿಳಿಸಿದರು.