Belagavi News:
ತಿರುವನಂತಪುರಂ (ಕೇರಳ) : 16ನೇ ಕೇರಳ ವಿಧಾನಸಭೆಯ ಮೊದಲ ಅಧಿವೇಶನ ಇಂದು ಆರಂಭಗೊಂಡಿದ್ದು, ಮುಖ್ಯಮಂತ್ರಿ ವಿ.ಡಿ. ಸತೀಸನ್ ನೇತೃತ್ವದ ಹೊಸ ಸರ್ಕಾರದ ಶಾಸನಾತ್ಮಕ ಕಾರ್ಯ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರಕಿತು. ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಅವರು ನೂತನವಾಗಿ ಆಯ್ಕೆಯಾದ 139 ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.
ಇದಕ್ಕೂ ಮೊದಲು ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಜಿ. ಸುಧಾಕರನ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಸಮ್ಮುಖದಲ್ಲಿ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಸನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಐ.ವಿ. ಅಬ್ದುಲ್ ಗಫೂರ್ ಮೊದಲ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪರಕ್ಕಲ್ ಅಬ್ದುಲ್ಲಾ ಮತ್ತು ಕೆ .ಎಂ. ಅಭಿಜಿತ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆ.ಕೆ. ಅಬಿದ್ ಹುಸೇನ್ ತಂಗಲ್ ಹಾಗೂ ಅಬಿನ್ ವರ್ಕಿ ಕೂಡಾ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮಹಿಳಾ ಶಾಸಕ ಎಂಬ ಹೆಗ್ಗಳಿಕೆಗೆ ಓ. ಎಸ್. ಅಂಬಿಕಾ ಪಾತ್ರರಾದರು. ಪುನಲೂರು ಶಾಸಕ ಸಿ. ಅಜಯಸ್ ಪ್ರಸಾದ್, ಜಿ. ಆರ್. ಅನಿಲ್, ಎಂ.ಎಸ್. ಅರುಣ್ ಕುಮಾರ್, ವಿ.ಟಿ. ಬಲರಾಮ್, ಕೆ.ಎನ್. ಬಾಲಗೋಪಾಲ್, ಸಿ.ಪಿ. ಜಾನ್ ಮತ್ತು ವಿ. ಜಾಯ್ ಸೇರಿದಂತೆ ಹಲವು ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ವಡಕ್ಕಂಚೇರಿ ಶಾಸಕ ಕ್ಸೇವಿಯರ್ ಚಿಟ್ಟಿಲಪ್ಪಿಲ್ಲಿ ಕೊನೆಯ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದೇ ವೇಳೆ, ಮಂಜೇಶ್ವರಂ ಕ್ಷೇತ್ರದ ಶಾಸಕ ಅಶ್ರಫ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ವಿಶೇಷ ಗಮನ ಸೆಳೆದರು. ಗಡಿಭಾಗದ ಕನ್ನಡಿಗರ ಭಾಷಾ ಭಾವನೆಗೆ ಗೌರವ ಸೂಚಿಸಿದ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ: ಕೇರಳ ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಈ ಬಾರಿ ಸಾಂಸ್ಕೃತಿಕ ಹಾಗು ಭಾಷಾ ವೈವಿಧ್ಯತೆಗೆ ಸಾಕ್ಷಿಯಾಯಿತು. ಮಂಜೇಶ್ವರಂ ಶಾಸಕ ಎ.ಕೆ.ಎಂ. ಅಶ್ರಫ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಡಿಭಾಗದ ಭಾಷೆ ಭಾವನೆಗೆ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ದೇವಿ ಕುಲಂ ಶಾಸಕ ಎ. ರಾಜಾ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಗೃಹ ಸಚಿವ ರಮೇಶ್ ಚೆನ್ನಿತ್ತಲ, ಕೋಝೀಕ್ಕೋಡ್ ದಕ್ಷಿಣ ಶಾಸಕ ಅಡ್ವ, ಪೈಸಲ್ ಬಾಬು, ಸನ್ನಿ ಜೋಸೆಫ್ ಮತ್ತು ಪಾಲಕ್ಕಾಡ್ ಶಾಸಕ ರಮೇಶ್ ಪಿಶಾರಡಿ ಸೇರಿದಂತೆ ಹಲವು ಶಾಸಕರು ತಮ್ಮ ತಮ್ಮ ಭಾಷಾ ವೈವಿಧ್ಯತೆಯನ್ನು ಪ್ರಾದೇಶಿಸಿದರು.
ಸಂದೀಪ್ ವಾರಿಯರ್ ಸಂವಿಧಾನವನ್ನು ಉಲ್ಲೇಖಿಸಿ ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿ "ಜೈ ಹಿಂದ್", "ಜೈ ಸಂವಿಧಾನ" ಎಂಬ ಘೋಷಣೆಗಳನ್ನು ಕೂಗಿ ಗಮನ ಸೆಳೆದರು. ಅನ್ವರ್ ಸಾದಕ್ ತಮ್ಮ ಪ್ರಮಾಣವಚನವನ್ನು ಜನರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮುಕ್ತಾಯಗೊಳಿಸಿದರು. ಚಾಂಡಿ ಉಮ್ಮನ್ ಅವರು ತಮ್ಮ ದಿವಂಗತ ತಂದೆ ಉಮ್ಮನ್ ಚಾಂಡಿಯವರ ಫೋಟೋವಿರುವ ಟೀ ಶರ್ಟ್ ಧರಿಸಿ ಪ್ರಮಾಣವಚನ ಸ್ವೀಕರಿಸಿದ ವಿಶೇಷವಾಗಿತ್ತು.
ಸದನಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಶಾಸಕರು ಚಪ್ಪಾಳೆಯ ಮೂಲಕ ಸ್ವಾಗತ ಕೋರಿದರು. ಇದೇ ವೇಳೆ ನೇಮಮ್ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಬಿಜೆಪಿ ರಾಜ್ಯ ಅಧ್ಯಕ್ಷ ರಾಜು ಚಂದ್ರಶೇಖರ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
Also Read: NEET ಬದಲಿಗೆ ರಾಜ್ಯ CETಗೆ ಅವಕಾಶ ಕೋರಿ ಸಿದ್ದರಾಮಯ್ಯ ಒತ್ತಾಯ