Belagavi News:
ಜಕಾರ್ತ್ (ಇಂಡೋನೇಷಿಯಾ): ಮೂರು ರಾಷ್ಟ್ರಗಳ ರಾಜತಾಂತ್ರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಡೋನೇಷಿಯಾ ರಾಜಧಾನಿ ಜಕಾರ್ತ್ ನಲ್ಲಿ ಅದ್ದೂರಿ ಮತ್ತು ಭವ್ಯ ಸ್ವಾಗತ ದೊರೆತಿದೆ. ಎರಡು ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಈ ಮಹತ್ವದ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನ ಇಂಡೋನೇಷ್ಯಾ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಇಂಡೋನೇಷ್ಯಾ ವಾಯುಪಡೆಯ ಫೈಟರ್ ಜೆಟ್ ಗಳು ಬೆಂಗಾವಲು ನೀಡಿ ವಿಶೇಷ ಗೌರವ ಸಲ್ಲಿಸಿದವು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು. ಭಾರತ - ಇಂಡೋನೇಷ್ಯಾ ಸ್ನೇಹದ ಸಂಕೇತವಾಗಿ ಗಮನ ಸೆಳೆದಿವೆ.
ಜಕಾರ್ತ್ ಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಔಪಚಾರಿಕವಾಗಿ ಬರಮಾಡಿಕೊಂಡರು. ಸ್ವಾಗತ ಸಮಾರಂಭದಲ್ಲಿ ಸಾಂಪ್ರದಾಯಿಕ ಸಂಸ್ಕೃತಿಕ ನೃತ್ಯ ಪ್ರದರ್ಶನಗಳು ನಡೆದಿದ್ದು, ಎರಡು ದೇಶಗಳ ನಡುವಿನ ಸ್ನೇಹ ಮತ್ತು ಸಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸಿತು.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಅವರ ವೈಯಕ್ತಿಕ ಆಹ್ವಾನದ ಮೇರೆಗೆ ಮೋದಿ ಈ ಭೇಟಿ ಕೈಗೊಂಡಿದ್ದಾರೆ. 2018 ರಲ್ಲಿ ಭಾರತ ಮತ್ತು ಇಂಡೋನೇಷ್ಯಾ ತಮ್ಮ ಸಂಬಂಧವನ್ನು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ' ಮಟ್ಟಕ್ಕೆ ಏರಿಸಿದ ಬಳಕ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ.
ಈ ಭೇಟಿಯ ವೇಳೆ ರಕ್ಷಣಾ ಸಹಕಾರ, ಕಡಲ ಭದ್ರತೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಮನ್ವಯ, ವ್ಯಾಪಾರ ಮತ್ತು ಹೂಡಿಕೆ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಕುರಿತು ಚರ್ಚೆ ನಡೆಯಲಿದೆ. ಉಭಯ ರಾಷ್ಟ್ರಗಳ ನಡುವೆ ಜಂಟಿ ಮಿಲಿಟರಿ ಕಾರ್ಯಾಚರಣೆಗಳು, ರಕ್ಷಣಾ ಉದ್ಯಮ ಸಹಯೋಗ ಹಾಗೂ ಇಂಡೋನೇಷಿಯಾದಿಂದ ಬ್ರಹ್ಮೋಸ್ ಸೂಪರ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಖರೀದಿ ವಿಚಾರವೂ ಪ್ರಮುಖ ಅಜೆಂಡಾಗಳಲ್ಲಿ ಸೇರಿದೆ.
ಪ್ರಧಾನಿ ಮೋದಿ ಅವರ ಈ ಇಂಡೋನೇಷ್ಯಾ ಬೇಟಿ ಭಾರತ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರ ಗಳ ನಡುವಿನ ಸಂಬಂಧಗಳಿಗೆ ಹೊಸ ದಿಕ್ಕು ನೀಡುವ ಜೊತೆಗೆ, ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಈ ಭೇಟಿಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, 'ಮಹಾಸಾಗರ್' (MAHASAGAR) ದೃಷ್ಟಿಕೋನದ ಮೂಲಕ ಸಮುದ್ರ ಕ್ಷೇತ್ರದಾದ್ಯಂತ ಭದ್ರತೆ, ಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವತ್ತ ಭಾರತ ಬದ್ಧವಾಗಿದೆ ಎಂದು ಹೇಳಿದರು. ಆರ್ಥಿಕ ಬೆಳವಣಿಗೆ, ಜನ ಕೇಂದ್ರೀತ ಸಹಕಾರ, ಕಡಲ ಭದ್ರತೆ ಹಾಗೂ ಪ್ರಾದೇಶಿಕ ಸಮನ್ವಯಕ್ಕೆ ವಿಶೇಷ ಆದ್ಯತೇ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.