Belagavi News:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 12 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ವಿಶೇಷ ಪ್ರದರ್ಶನವನ್ನು ಉದ್ಘಾಟಿಸಿದರು.
ಈ ಕುರಿತು ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 12 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದಲ್ಲಿ ಜನಸೇವೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದ ಹೊಸ ಯುಗ ಆರಂಭವಾಯಿತು ಎಂದು ತಿಳಿಸಿದ್ದಾರೆ. ದೇಶದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಜನರಿಂದ ಆಯ್ಕೆಯಾದ ಪ್ರಧಾನಿಯಾಗುವ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಅವರ ಆಡಳಿತಾವಧಿಯಲ್ಲಿ ರೈತರ ಕಲ್ಯಾಣ, ಮಹಿಳಾ ಸಬಲೀಕರಣ ಹಾಗೂ ಮೂಲಸೌಕರ್ಯ ವಿಸ್ತರಣೆಗೆ ಹೊಸ ವೇಗ ದೊರೆತಿದೆ ಎಂದು ಅವರು ಹೇಳಿದ್ದಾರೆ.
ಈ ಅವಧಿಯಲ್ಲಿ ಪ್ರಧಾನ ಮೋದಿ ಅವರು 'ಪ್ರಧಾನ ಸೇವಕ' ಎಂಬ ತತ್ವಕ್ಕೆ ಬದ್ಧರಾಗಿದ್ದು, ಇದೇ ಉತ್ಸಾಹದಿಂದ ಪ್ರೇರಿತವಾಗಿ " ವಿಕಸಿತ ಭಾರತ - 2047" ಕನಸನ್ನು ಸಾಕಾರಗೊಳಿಸಲು ಎಲ್ಲರೂ ಸಾಮೂಹಿಕ ಪ್ರಯತ್ನದಿಂದ ಮುಂದುವರಿಯ ಬೇಕಾಗಿದೆ ಎಂದು ನಿತಿನ್ ನಬಿನ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 12 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಯೋಜಿಸಿರುವ ವಿಶೇಷ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರದರ್ಶನದಲ್ಲಿ ಭಾಗವಹಿಸಿದ ಸಂದರ್ಶಕ ಅಭಿಷೇಕ್ ಪಟೇಲ್ ಮಾತನಾಡಿ, ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ಕೆಲಸಗಳು ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಹೇಳಿದ್ದಾರೆ. ಜನರು ಬಿಜೆಪಿ ಮೇಲೆ ಇಟ್ಟಿರುವ ವಿಶ್ವಾಸದಿಂದ ಸತತ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗೂ ದೇಶವನ್ನು ಬಲಿಷ್ಠಗೊಳಿಸಿದ್ದಾರೆ ಎಂದು ಹೇಳಿದರು ಜೊತೆಗೆ ಸ್ಮಾರ್ಟ್ ಅಪ್ ಗಳಿಗೆ ಉತ್ತೇಜನ ಮತ್ತು ಸಾಲ ಸೌಲಭ್ಯಗಳನ್ನು ರಿಯಾಯಿತಿಯಲ್ಲಿ ನೀಡುವ ಮೂಲಕ ಸ್ವಾವಲಂಬನೆಗೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಬ್ಬ ಸಂದರ್ಶಕಿ ಆಕಾಂಕ್ಷಾ ಚತುರ್ವೇದಿ ಮಾತನಾಡಿ, ಪ್ರದರ್ಶನದಲ್ಲಿ 12 ವರ್ಷಗಳ ಅಭಿವೃದ್ಧಿ ನಂಬಿಕೆ ಮತ್ತು ಜನ ಕಲ್ಯಾಣದ ಸಾಧನೆಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಇದು ಕೇವಲ ಪ್ರದರ್ಶನವಲ್ಲ ಭಾರತ ಅಭಿವೃದ್ಧಿಯ ದಾರಿಗೆ ಮೋದಿ ಸರ್ಕಾರ ನೀಡಿದ ಕೊಡುಗೆಯ ಪ್ರತಿಬಿಂಬವಾಗಿದೆ ಎಂದು ಅವರು ಬಣ್ಣಿಸಿದರು.
ಈ ಮೂಲಕ ದೆಹಲಿಯ ಪ್ರದರ್ಶನವು ಸರ್ಕಾರದ ಸಾಧನೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಮತ್ತು ಮೆಚ್ಚುಗೆಗೆ ವೇದಿಕೆಯಾಗುತ್ತಿದೆ.
ಪ್ರಧಾನಿ ಮೋದಿ ಸರಣಿ ಪೋಸ್ಟ್: ತಮ್ಮ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಮ್ಮ ಅವಧಿಯು ನಂಬಿಕೆ, ಅಭಿವೃದ್ದಿ ಮತ್ತು ಜನ ಕಲ್ಯಾಣಕ್ಕೆ ಸಮರ್ಪಿತವಾಗಿದೆ ಎಂದು ಅದರಲ್ಲಿ ತಿಳಿಸಿದ್ದಾರೆ.
140 ಕೋಟಿ ಭಾರತೀಯರ ಆಶೀರ್ವಾದ ಮತ್ತು "ದೇಶವೇ ಮೊದಲು" ಎಂಬ ಮನೋಭಾವದಿಂದ ಯುವಕರು, ಮಹಿಳೆಯರು ಹಾಗೂ ರೈತ ಸಹೋದರ - ಸಹೋದರಿಯರ ಸಬಲೀಕರಣಕ್ಕೆ ಶ್ರಮವಹಿಸಿದ್ದೇವೆ ಎಂದು ಪ್ರಧಾನ ಹೇಳಿದ್ದಾರೆ.
Also Read:
ವರುಣಾರ್ಭಟಕ್ಕೆ ಬೈಲಹೊಂಗಲ ತತ್ತರ : ವ್ಯಾಪಾರ ಕೇಂದ್ರಗಳಲ್ಲಿ ಭಾರಿ ನಷ್ಟ