Belagavi News:
ಮುಖ್ಯಾಂಶಗಳು;
ರಾಜ್ಯದಲ್ಲಿ RSS ಪಥಸಂಚಲನಕ್ಕೆ ಇನ್ನೂ ಅನುಮತಿ ಬೇಕು
ಮಹತ್ವದ ಹೇಳಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದ ಸಚಿವರು
ಕಲಬುರಗಿ: ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ರಾಜ್ಯ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಡುವೆ ಮತ್ತೊಂದು ರಾಜಕೀಯ ತೀವ್ರತೆ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಆರ್ ಎಸ್ ಎಸ್ ನೋಂದಣಿ ಹಾಗೂ ಸಂಘಟನೆಯ ಚಟುವಟಿಕೆಗಳ ಕುರಿತು ಮಾತನಾಡುತ್ತಲೇ ಬಂದಿರುವ ಅವರು, ಇದೀಗ ತಮ್ಮ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ ಎಂದು ಹೇಳಲಾಗಿದೆ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸಂಘಟನೆಯ ನೋಂದಣಿ ಹಾಗೂ ದೇಣಿಗೆ ವಿಚಾರವನ್ನು ಉಲ್ಲೇಖಿಸಿದ ಖರ್ಗೆ, "ನಾಳೆ ನೀವು ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಸಂಗ್ರಹ ಮಾಡಿದರೆ ಐಟಿ ಮತ್ತು ಇಡಿ ಸಂಸ್ಥೆಗಳು ಸುಮ್ಮನೆ ಕುಳಿತುಕೊಳ್ಳುತ್ತವೆಯೇ?" ಎಂದು ಪ್ರಶ್ನಿಸಿದ್ದಾರೆ.
ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಜಟಾಪಟಿಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಆರ್ ಎಸ್ ಎಸ್ ಪಥಸಂಚಲನ ನಡೆಸಲು ಅನುಮತಿ ಕಡ್ಡಾಯವಾಗಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಈಗಾಗಲೇ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
" 100 ವರ್ಷದ ಸಂಘಟನೆಗೆ ಸಂಬಂಧಿಸಿದ ದಾಖಲೆಗಳು ಎಲ್ಲೋ ಇರಬಹುದು, ಅವನ್ನು ಹುಡುಕಿ ತರಲಿ" ಎಂದು ಹೇಳಿರುವ ಅವರು, ತಮ್ಮ ವಿರುದ್ಧ ವೈಯಕ್ತಿಕ ವಿಚಾರಗಳನ್ನು ಕೆದಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. " ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದಾರೆ, ಅವರ ಮಕ್ಕಳು ಯಾರು, ನಾನು ಕಪ್ಪಗಿದ್ದೇನಾ ಅಥವಾ ಬೆಳ್ಳಗಿದ್ದೇನಾ ಎಂಬುದರವರೆಗೆ ಪ್ರಶ್ನೆಗಳು ಕೇಳಲಾಗುತ್ತಿವೆ. ಆದರೆ ಇಂತಹ ಟೀಕೆಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ" ಎಂದು ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಹಿಂದೆ ಕಲಬುರಗಿಯ ಚಿತ್ತಾಪುರ ಮತ್ತು ಯಾದಗಿರಿಯ ಕೆಂಭಾವಿಯಲ್ಲಿ ಆರ್ ಎಸ್ ಎಸ್ ಪಥಸಂಚಲನದ ವಿಚಾರದಲ್ಲಿ ತೀವ್ರ ಚಟಾಪಟಿ ನಡೆದಿದ್ದು, ವಿಷಯ ಕೋರ್ಟ್ ಮೆಟ್ಟಿಲು ಕೂಡ ಏರಿದ್ದದ್ದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಈಗಿನ ಹೇಳಿಕೆಗಳು ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ.
RSS ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ: ದೇಣಿಗೆ ಲೆಕ್ಕ ಪತ್ರಗಳ ಕುರಿತು ಪ್ರಶ್ನೆ
ಆರ್ ಎಸ್ ಎಸ್ ಚಟುವಟಿಕೆಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಧ್ವಜದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತದೆ ಎಂಬ ಆರೋಪವನ್ನು ಉಲ್ಲೇಖಿಸಿದ ಅವರು ದೇಣಿಗೆ ಸ್ವೀಕರಿಸುವ ವ್ಯವಸ್ಥೆಯ ಪಾರದರ್ಶಕತೆ ಕುರಿತು ಪ್ರಶ್ನೆ ಎತ್ತಿದ್ದಾರೆ.
" ಆರ್ ಎಸ್ ಎಸ್ ನವರು ಧ್ವಜದ ಮೇಲೆ ದೇಣಿಗೆ ತೆಗೆದುಕೊಳ್ಳುತ್ತಾರೆ. ದೇಣಿಗೆ ಪಡೆಯಲು ಅವರಿಗೆ ಗುರು ಯಾರು? ಹಾಗಿದ್ದರೆ ಇವರಿಗೆ ಲೆಕ್ಕ ಕೇಳಬಾರದಾ? ಎಂದು ಅವರು ಪ್ರಶ್ನಿಸಿದ್ದಾರೆ.
ಇದಲ್ಲದೆ, ಸಂಘಟನೆಗಳ ಹಣಕಾಸು ಪಾರದರ್ಶಕತೆ ಕುರಿತು ಟೀಕಿಸಿದ ಅವರು, " ನಾಳೆ ನೀವು ಕೂಡ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ ಚಂದಾ ಸಂಗ್ರಹಿಸಿದರೆ, ಆಗ ಐಟಿ ಮತ್ತು ಇಡಿ ಸಂಸ್ಥೆಗಳು ಸುಮ್ಮನೆ ಕುಳಿತುಕೊಳ್ಳುತ್ತವೆಯೇ?" ಎಂದು ಹೇಳಿದ್ದಾರೆ. ಎಲ್ಲರೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಅವರು ಕಿಡಿಕಾರಿದ್ದಾರೆ.
ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, RSS ಹಾಗೂ ಸರ್ಕಾರದ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.