BELAGAVI NEWS :
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಇಂಡೋನೇಷ್ಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿ ಮೂರು ರಾಷ್ಟ್ರಗಳ ಮಹತ್ವದ ಪ್ರವಾಸ ಕೈಗೊಂಡಿದ್ದಾರೆ.
ನಿರ್ಗಮನಕ್ಕೂ ಮುನ್ನ ಪ್ರಕಟಿಸಿದ ಹೇಳಿಕೆಯಲ್ಲಿ ಪ್ರಧಾನಿ ಕಚೇರಿ, ಈ ಭೇಟಿ ಭಾರತದ ' ಆಕ್ಟ್ ಈಸ್ಟ್' ನೀತಿ, ' ಮಹಾಸಾಗರ' ದೃಷ್ಟಿಕೋನ ಹಾಗೂ ಮುಕ್ತ ಮತ್ತು ಸ್ವಾತಂತ್ರ ಇಂಡೋ- ಪೆಸಿಫಿಕ್ ಕುರಿತ ಭಾರತದ ನಿಲುವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದೆ.
ಜುಲೈ 6 ರಿಂದ 11ರವರೆಗೆ ನಡೆಯಲಿರುವ ಈ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ ಮೊದಲಿಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. 2018ರಲ್ಲಿ ನಡೆದ ಭೇಟಿಯ ನಂತರ ಇದು ಅವರ ಮೊದಲ ದ್ವಿಪಕ್ಷೀಯ ಭೇಟಿ ಆಗಿದ್ದು, ಭಾರತ - ಇಂಡೋನೇಷ್ಯಾ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ವಿಸ್ತರಿಸಿದ ಬಳಿಕ ನಡೆಯುತ್ತಿರುವ ಮಹತ್ವದ ರಾಜತಾಂತ್ರಿಕ ಹಂತವಾಗಿದೆ.
2025ರ ಜನವರಿ 26ರಂದು ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಪ್ರಬೋವೊ ಭಾಗವಹಿಸಿದ ನಂತರ ನಡೆಯುತ್ತಿರುವ ಈ ಭೇಟಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಭಾರತ ಮತ್ತು ಇಂಡೋನೇಷ್ಯಾ ನಡುವೆ ಬಲವಾದ ನಾಗರಿಕ ಹಾಗೂ ಜನರ ನಡುವಿನ ಸಂಬಂಧವಿದ್ದು, ಈ ಭೇಟಿಯು ದ್ವಿಪಕ್ಷೀಯ ಬಹುಮುಖಿ ಪಾಲುದಾರಿಕೆಯನ್ನು ಇನ್ನಷ್ಟು ಆಳವಾಗಿಸಲು ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ಪ್ರವಾಸದ ವೇಳೆ ಇಂಡೋನೇಷ್ಯಾದಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಅವರು ಸಂವಾದ ನಡೆಸಲಿದ್ದಾರೆ. ಜೊತೆಗೆ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಯೊಗ್ಯಕರ್ತಾದಲ್ಲಿ ಪ್ರಸಿದ್ದ ಪ್ರಂಬನನ್ ದೇಗುಲಕ್ಕೂ ಭೇಟಿ ನೀಡಲಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಮೆಲ್ಬೋರ್ನ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದಾಗಿ ಹೇಳಿದ್ದಾರೆ. ಈ ಭೇಟಿಯ ವೇಳೆ ರಕ್ಷಣಾ, ಭದ್ರತೆ, ವ್ಯಾಪಾರ, ಹೂಡಿಕೆ, ಶಿಕ್ಷಣ ಹಾಗೂ ಜನರ ಚಲನೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆಯಲಿವೆ. ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಕ್ರೀಡೆ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಈ ಭೇಟಿ ಅವಕಾಶ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ನಂತರ ಅವರು ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ಗೆ ಭೇಟಿ ನೀಡಲಿದ್ದಾರೆ. 2025ರ ಮಾರ್ಚ್ ನಲ್ಲಿ ಪ್ರಧಾನಿ ಲಕ್ಸನ್ ಅವರ ಭಾರತ ಭೇಟಿಯ ನಂತರ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲಗೊಂಡಿವೆ ಎಂದು ಅವರು ಹೇಳಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಆರ್ಥಿಕ, ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳ ಕುರಿತು ಚರ್ಚೆ ನಡೆಯಲಿದ್ದು, ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ದ್ವೀಪಕ್ಷೀಯ ವ್ಯಾಪಾರವನ್ನು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.