Belagavi News :
ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿ ಹಾಗೂ ಕೇಂದ್ರ ಮತ್ತು ರಾಜ್ಯ ಸಚಿವರು ಯಾವುದೇ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ಸತತ 30 ದಿನಗಳ ಕಾಲ ಜೈಲಿನಲ್ಲಿದ್ದರೆ, ಅವರು ಸ್ವಯಂಚಾಲಿತವಾಗಿ ತಮ್ಮ ಸಚಿವ ಹುದ್ದೆಯನ್ನು ಕಳೆದುಕೊಳ್ಳುವ ಕಠಿಣ ಕಾನೂನು ಜಾರಿಗೆ ಬರಲು ಸಿದ್ಧತೆ ನಡೆಯುತ್ತಿದೆ.
ಈ ನಿರ್ಬಂಧನೆಯನ್ನು ಒಳಗೊಂಡಿರುವ ವಿವಾದಾತ್ಮಕ 130 ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಸ್ತಾವಿತ ನಿಯಮದ ಪ್ರಕಾರ, ಕೇಂದ್ರ ಹಾಗೂ ರಾಜ್ಯ ಸಚಿವರು, ಪ್ರಧಾನಿ ಅಥವಾ ಮುಖ್ಯಮಂತ್ರಿಗಳು ಗಂಭೀರ ಅಪರಾಧ ಪ್ರಕರಣದಲ್ಲಿ ಬಂಧಿತರಾಗಿ 30 ದಿನಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದರೆ, ಅವರು ತಮ್ಮ ಹುದ್ದೆಯನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವ ವ್ಯವಸ್ಥೆ ರೂಪುಗೊಳ್ಳಲಿದೆ. ಈ ಮಸೂದೆಗೆ ಸಂಸದೀಯ ಸಮಿತಿಯ ವರದಿ ಅನುಮೋಧನೆಗೆ ಸಿದ್ಧವಾಗಿದ್ದು, ಮುಂದಿನ ಹಂತಕ್ಕೆ ಸಾಗುವ ನಿರೀಕ್ಷೆಯಿದೆ.
ಈ ಕ್ರಮ ಸಾರ್ವಜನಿಕ ಜೀವನದಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ ಎಂದು ಬೆಂಬಲಿಗರು ವಾದಿಸುತ್ತಿದ್ದಾರೆ. ಆದರೆ, ವಿರೋಧಿಗಳು ಇದನ್ನು ರಾಜಕೀಯ ಪ್ರೇರಿತ ದುರ್ಬಳಕೆಗೆ ಅವಕಾಶ ನೀಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವಿತ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (JPC) ಜುಲೈ 17ರಂದು ತನ್ನ ಅಂತಿಮ ವರದಿಯನ್ನು ಅನುಮೋದಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬುಧವಾರ ನಡೆದ ಸಮಿತಿಯ ಸಭೆಯ ಮಾಹಿತಿಯ ಪ್ರಕಾರ, ದೇಶದ ಹಲವು ವಲಯಗಳಿಂದ ಈ 30 ದಿನಗಳ ಕಠಿಣ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ಸಹ, ವಿವಾದಾತ್ಮಕ ನಿಯಮವನ್ನು ಮಸೂದೆಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅಂದರೆ, ಈ ನಿಯಮವನ್ನು ಮಸೂದೆಯಲ್ಲಿ ಮುಂದುವರಿಸಲು ಸಮಿತಿ ಒಲವು ತೋರಿಸಿದೆ.
ಆದರೆ, ಈ ನಿಯಮವನ್ನು ರಾಜಕೀಯದ ದ್ವೇಷ ಅಥವಾ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ದುರುಪಯೋಗಪಡಿಸಿಕೊಳ್ಳುವ ಅಪಾಯ ಇರುವ ಬಗೆಯ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಸಾಧ್ಯತೆಯನ್ನು ತಡೆಯಲು ಕೆಲವು 'ಸುರಕ್ಷತಾ ಕ್ರಮಗಳನ್ನು' ವರದಿಯಲ್ಲಿ ಸೇರಿಸುವ ಕುರಿತು ಸಹ ಸಮಿತಿ ಚರ್ಚೆ ನಡೆಸಿದೆ.
ಈ ಮಸೂದೆ ಅಂತಿಮವಾಗಿ ಹೇಗೆ ರೂಪುಗೊಳ್ಳಲಿದೆ ಎಂಬುದು ಜುಲೈ 17ರ ವರದಿಯ ನಂತರ ಸ್ಪಷ್ಟವಾಗಲಿದೆ.
ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿ ಇದೀಗ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸಚಿವರು, ಮುಖ್ಯಮಂತ್ರಿಗಳು ಅಥವಾ ಪ್ರಧಾನಮಂತ್ರಿ ಗಂಭೀರ ಅಪರಾಧ ಪ್ರಕರಣದಲ್ಲಿ ಬಂಧಿತರಾಗಿ 30 ದಿನಗಳ ಕಾಲ ಜೈಲಿನಲ್ಲಿ ಇದ್ದರೆ ಸ್ವಯಂಚಾಲಿತವಾಗಿ ಹುದ್ದೆ ಕಳೆದುಕೊಳ್ಳುವ ನಿಯಮವು ಜಾರಿಗೆ ಬಂದರೆ, ಸಾರ್ವಜನಿಕ ಜೀವನದಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ನೈತಿಕತೆ ಹೆಚ್ಚುತ್ತದೆ ಎಂದು ಮಸೂದೆಯನ್ನು ಬೆಂಬಲಿಸುವವರು ವಾದಿಸುತ್ತಿದ್ದಾರೆ.
ಆದರೆ ಈ ನಿಯಮದ ಕುರಿತು ತೀವ್ರ ವಿಮರ್ಶೆಯು ವ್ಯಕ್ತವಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳ ಮೂಲಕ ಚುನಾಯಿತ ಮುಖ್ಯಮಂತ್ರಿಗಳು ಅಥವಾ ಸಚಿವರನ್ನು 30 ದಿನಗಳ ಕಾಲ ಬಂಧನದಲ್ಲಿಟ್ಟು, ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸರ್ಕಾರಗಳನ್ನು ಅಸ್ಥಿರಗೊಳಿಸಲು ಈ ಕಾನೂನನ್ನು ಬಳಸುವ ಅಪಾಯವಿದೆ ಎಂದು ವಿರೋಧಿಗಳು ಎಚ್ಚರಿಕೆ ನೀಡಿದ್ದಾರೆ.
ಜಂಟಿ ಸಂಸದೀಯ ಸಮಿತಿ (JPC) ವರದಿ ಸಲ್ಲಿಕೆಯಾದ ಬಳಿಕ ಸಂಸತ್ತಿನಲ್ಲಿ ಈ ಮಸೂದೆಯ ಕುರಿತು ಭಾರಿ ಚರ್ಚೆ ಹಾಗೂ ರಾಜಕೀಯ ಗದ್ದಲ ಉಂಟಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.