Belagavi News :
ಮೈಸೂರು: ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ, ಮುಂಬರುವ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಅವರು, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಷಾಢ ಮಾಸದಲ್ಲಿ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಚಾಮುಂಡಿಬೆಟ್ಟಕ್ಕೆ ಮೆಟ್ಟಿಲು ಹತ್ತಿ ಆಗಮಿಸುವ ಭಕ್ತರಿಗೆ ಹಾಲು ಮತ್ತು ಬಿಸ್ಕೆಟ್ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಯಾತ್ರಾರ್ಥಿಗಳಿಗೆ ಸುಗಮ ದರ್ಶನ ವ್ಯವಸ್ಥೆ ಒದಗಿಸುವತ್ತ ಗಮನ ಹರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜುಲೈ 17ರಿಂದ ಆರಂಭವಾಗುವ ಆಷಾಢ ಶುಕ್ರವಾರದ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ವಿಐಪಿ ದರ್ಶನ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದ್ದು, ಪ್ರೋಟೋಕಾಲ್ ಇರುವವರಿಗೆ ಮಾತ್ರ ವಾಹನ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಇತರ ವಿಐಪಿಗಳು ಸಹ ಸಾರ್ವಜನಿಕ ಬಸ್ ಗಳ ಮೂಲಕವೇ ಬೆಟ್ಟಕ್ಕೆ ತೆರಳಬೇಕೆಂದು ನಿರ್ಧರಿಸಲಾಗಿದೆ.
ಅದೇ ವೇಳೆ 2000 ರೂಪಾಯಿ ಮೌಲ್ಯದ ವಿಶೇಷ ಟಿಕೆಟ್ ವ್ಯವಸ್ಥೆ ಪರಿಚಯಿಸಲಾಗಿದ್ದು, ಈ ಟಿಕೆಟ್ ಗಳನ್ನು ಪಾರ್ಕಿಂಗ್ ಸ್ಥಳ, ಬೆಟ್ಟದ ಮೇಲ್ಭಾಗ ಹಾಗು ಆನ್ ಲೈನ್ ಮೂಲಕ ಖರೀದಿಸಬಹುದು. ಇ ಟಿಕೇಟ್ ಹೊಂದಿದ್ದ ಭಕ್ತರಿಗೆ ಶ್ರೀಚಕ್ರ ಚಿಹ್ನೆಯ ಕಿಟ್, ನೀರಿನ ಬಾಟಲಿ, ದೇವಿಯ ಫೋಟೋ ಹಾಗೂ ಪ್ರಸಾದವನ್ನು ನೀಡಲಾಗುವುದು.
ಭಕ್ತರ ಸುಗಮ ದರ್ಶನ ಹಾಗೂ ಸುರಕ್ಷತೆಗಾಗಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.