belagavi news :
'ಫಸ್ಟ್ ಡೇ ಫಸ್ಟ್ ಶೋ', 'ಶಾಲಿವಾಹನ ಶಕೆ', 'ಒಂದು ಕಥೆ ಹೇಳ್ಲಾ' ಹಾಗೂ 'ವಾವ್' ಸಿನಿಮಾಗಳ ಮೂಲಕ ಗಮನ ಸೆಳೆದ ಯುವ ನಿರ್ದೇಶಕ ಗಿರೀಶ್ ಅವರು ಇದೀಗ ಪ್ರಸಿದ್ಧ ಟಗರಾದ 'ಬೆಳ್ಳೂಡಿ ಕಾಳಿ' ಯ ಜೀವನಗಾಥೆಯನ್ನು ಡಾಕ್ಯುಮೆಂಟರಿ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. ಈ ಸಾಕ್ಷ್ಯ ಚಿತ್ರಕ್ಕೆ ಕಾಳಿ ಎಂಬ ಶೀರ್ಷಿಕೆ ನೀಡಲಾಗಿದೆ.
ಸಾವಿರಾರು ಅಭಿಮಾನಿಗಳ ಬಳಗವನ್ನು ಹೊಂದಿದ್ದ ಹಾಗೂ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ಬೆಳ್ಳೂಡಿ ಕಾಳಿ' ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಟಗರಾಗಿದೆ. ವಿವಿಧ ಟಗರು ಕಾಳಗಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ಈ ಕಾಳಿ, ತನ್ನ ಗತ್ತು ಮತ್ತು ಗಾಂಭೀರ್ಯದಿಂದ ಕಣಕ್ಕಿಳಿಯುತ್ತಿದ್ದ ರೀತಿಯಿಂದಲೇ ಅಭಿಮಾನಿಗಳ ಮನ ಗೆದ್ದಿತು.
'ಬೆಳ್ಳೂಡಿ ಕಾಳಿ' ಕಣಕ್ಕಿಳಿಯಲಿದೆ ಎಂಬ ಸುದ್ದಿ ಬಂದರೆ ಇತರ ಟಗರುಗಳ ಮಾಲೀಕರು ತಮ್ಮ ಟಗರುಗಳನ್ನು ಕಾಳಗಕ್ಕೆ ಇಳಿಸುವ ಕುರಿತು ಎರಡು ಬಾರಿಯ ಯೋಚಿಸುವಷ್ಟು ಅದರ ಪ್ರಭಾವ ಇತ್ತು ಎಂದು ಹೇಳಲಾಗುತ್ತದೆ. ದೂರದ ಊರುಗಳಿಂದಲೇ ಅಭಿಮಾನಿಗಳು ಇದರ ಕಾಳಗವನ್ನು ಕಣ್ಣುತುಂಬಿಕೊಳ್ಳಲು ಬರುತ್ತಿದ್ದರು. ಇದೀಗ ಈ ದಂತ ಕಥೆಯಂತಿರುವ ಟಗರಿನ ಯಶೋಗಾಥೆ 'ಕಾಳಿ' ಡಾಕ್ಯುಮೆಂಟರಿಯಾಗಿ ಮೂಡಿ ಬರಲಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
2024ರಲ್ಲಿ ಅಕಾಲಿಕ ಮರಣ ಹೊಂದಿದ 'ಬೆಳ್ಳೂಡಿ ಕಾಳಿ' ವಿದಾಯ ಹೇಳಲು ಜನಸಾಗರವೇ ಹರಿದು ಬಂದಿತ್ತು. ಅಲ್ಲದೆ, ಮನುಷ್ಯರ ರೀತಿಯಲ್ಲಿ ಹಿಂದೂ ಧರ್ಮದ ವಿಧಿ ವಿಧಾನದಂತೆ ದಫನ್ ಕೂಡ ಮಾಡಲಾಯಿತು. ಪ್ರೀತಿಯ ಕಾಳಿಯ ಮಾಲೀಕರಾದ ರಾಘವೇಂದ್ರ ಮತ್ತು ಅವರ ತಂಡದಿಂದ ಸಮಾಧಿಯನ್ನು ನಿರ್ಮಾಣ ಮಾಡಲಾಗಿದೆ.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಶಿವಮೊಗ್ಗ ರಸ್ತೆಯಲ್ಲಿರುವ ಈ ಪ್ರಸಿದ್ಧ ಟಗರಿನ ಸಮಾಧಿ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ನಿತ್ಯವೂ ಪೂಜೆ ಸಲ್ಲಿಸಲಾಗುತ್ತಿದ್ದು, ಈ ಟಗರಿನ ಜನಪ್ರಿಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಿರುವ ವಿಶೇಷತೆ ಆಗಿದೆ.
ಈ ದಂತಕತೆಯಂತಿರುವ 'ಬೆಳ್ಳೂಡಿ ಕಾಳಿ' ಟಗರಿನ ಯಶೋಗಾಥೆಯನ್ನು ನಿರ್ದೇಶಕ ಗಿರೀಶ್ ಅವರು ಡಾಕ್ಯುಮೆಂಟರಿ ರೂಪಕ್ಕೆ ತಂದಿದ್ದಾರೆ. ಜೈನ್ ಯುನಿವರ್ಸಿಟಿ ಸೇರಿದಂತೆ ಹಲವು ಸಿನಿಮಾ ವಿದ್ಯಾರ್ಥಿಗಳು ಹಾಗೂ ಹೊಸ ತಂತ್ರಜ್ಞಾನರನ್ನು ಒಳಗೊಂಡ ತಂಡದೊಂದಿಗೆ, ದಾವಣಗೆರೆ ಮತ್ತು ಬಾಗಲಕೋಟೆ ಕಣಗಳಲ್ಲಿ ಸ್ಥಳೀಯರ ಸಹಕಾರದೊಂದಿಗೆ ಚಿತ್ರಿಕರಣ ನಡೆಸಲಾಗಿದೆ.
ಪ್ರಸ್ತುತ ಡಾಕ್ಯುಮೆಂಟರಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಲ್ಲಿ ಸಾಗುತ್ತಿದ್ದು, ದೊಡ್ಡ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿಯೂ ಈ ಡಾಕ್ಯುಮೆಂಟರಿಯನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ಎರಡು ಮೂರು ತಿಂಗಳೊಳಗೆ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಮನುಷ್ಯ ಮತ್ತು ಪ್ರಾಣಿ ನಡುವಿನ ಆಳವಾದ ಭಾವನಾತ್ಮಕ ಸಂಬಂಧವನ್ನು ಕೇಂದ್ರವಾಗಿರಿಸಿಕೊಂಡು ಈ ಕಥೆಯನ್ನು ನಿರೂಪಿಸಲು ನಿರ್ದೇಶಕ ಗಿರಿ ಸಜ್ಜಾಗಿದ್ದಾರೆ. ಕೇವಲ ಕಾಳಗಗಳ ಯಶೋಗಾತಿ ಎಷ್ಟೇ ಅಲ್ಲದೆ, ಅದರ ಹಿಂದೆ ಇರುವ ಭಾವನೆ, ಶ್ರದ್ದೆ ಹಾಗೂ ಅಭಿಮಾನಿಗಳ ಬಂಧವನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತಿದೆ.
ಈ ವಿಭಿನ್ನ ಕಥಾವಸ್ತುವಿನ ಡಾಕ್ಯುಮೆಂಟರಿ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಕಾಳಿಯ ಜೀವನ ಪಯಣವನ್ನು ದೊಡ್ಡ ಮಟ್ಟದಲ್ಲಿ ಚಿತ್ರಿಕರಿಸುವ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ ಎಂದು ಚಿತ್ರತಂಡ ತಿಳಿಸಿದೆ.
Also Read:
ಜೂನ್ 15ರಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ನಿರ್ಬಂಧ : ಜಿಲ್ಲಾಧಿಕಾರಿ ಆದೇಶ