Belagavi News:
ಶಿವಮೊಗ್ಗ: ಕುಡಿಯಲು ನೀರು ಕೇಳುವ ನೆಪದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮನೆಗೆ ನುಗ್ಗಿ , ಆಕೆಗೆ ಹಲ್ಲೆ ನಡೆಸಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಆಗುಂಬೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಗ್ರಾಮದ ವೃದ್ಧೆಯ ಮನೆಯಲ್ಲಿ ಏಪ್ರಿಲ್ 21ರಂದು ಈ ಘಟನೆ ನಡೆದಿತ್ತು. ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಕುರಿತು ವೃದ್ಧೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ಆಧರಿಸಿ ತನಿಖೆ ನಡೆಸಿದ ಆಗುಂಬೆ ಠಾಣೆ ಪೊಲೀಸರು, ಭದ್ರಾವತಿಯ ಜೇಡಿಕಟ್ಟೆಯ ಭರತ್ (25), ಜಾವಳ್ಳಿಯ ಅಶೋಕ್ (28), ಭದ್ರಾವತಿ ಭದ್ರಾ ಕಾಲೋನಿಯ ಮಹಮ್ಮದ್ ಇಬ್ರಾಹಿಂ ಮೀರಾ (24) ಹಾಗೂ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ಪಾರ್ಟಿಪ್ (25) ಅವರನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ: ಏಪ್ರಿಲ್ 21 ರಂದು ಆಗುಂಬೆ ಪೊಲೀಸ್ ಠಾಣೆಗೆ ಒಂದು ಫೋನ್ ಕರೆ ಬರುತ್ತದೆ. ಲಕ್ಕುಂದದಲ್ಲಿ ಒಂಟಿಯಾಗಿ ವಾಸುತ್ತಿರುವ ವೃದ್ಧೆಯ ಮೇಲೆ ಹಲ್ಲೆ ನಡೆಸಿ, ಕಳ್ಳತನ ಮಾಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ. ಇದುಕ್ಕು ಒಂದು ದಿನದ ಹಿಂದಷ್ಟೇ ಪೊಲೀಸರು ಒಂಟಿಯಾಗಿ ವಾಸಿಸುವ ವೃದ್ಧರ ಮನೆಯನ್ನು ಸರ್ವೆ ನಡೆಸಿಕೊಂಡು ಹೋಗಿರುತ್ತಾರೆ. ಘಟನೆ ಬಗ್ಗೆ 33/2026 ಕಲಂ 309(6), 329(4), 127(2) ರೆ/ವಿ 3(5) ಬಿ ಏನ್ ಎಸ್ ಅಡಿ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.
ಲಕ್ಕುಂದ ಗ್ರಾಮದಲ್ಲಿ ವೃದ್ಧೆ ಒಂಟಿಯಾಗಿ ವಾಸಿಸುತ್ತಿರುವುದನ್ನು ಗಮನಿಸಿದ ಆರೋಪಿಗಳು ಮೊದಲು ಮನೆಯ ಎದುರಿಗೆ ಬಂದು ಕುಡಿಯಲು ನೀರು ಕೇಳಿದರೆ ಆದರೆ ಅನುಮಾನ ಗೊಂಡ ವೃದ್ಧೆ ಬಾಗಿಲು ತೆರೆಯದೆ ಇದ್ದಾಗ, ಆರೋಪಿಗಳು ಮನೆಯ ಸುತ್ತಲ್ಲೇ ಹೊಂಚು ಹಾಕಿ ಕಾದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ವೃದ್ಧೆ ಬಾಗಿಲು ತೆರೆಯುತ್ತಿದ್ದಂತೆ ಮನೆಗೆ ನುಗ್ಗಿದ ಆರೋಪಿಗಳು ಆಕೆಯನ್ನು ತಳ್ಳಿಹಾಕಿ ಹಲ್ಲೆ ನಡೆದಿದ್ದಾರೆ. ಬಳಿಕ ಬಾಯಿಗೆ ಬಟ್ಟೆ ತುರಕಿ ಬೆದರಿಕೆ ಹಾಕಿ, ಮನೆಯಲ್ಲಿ ಇದ್ದ 56 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 70 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಬಂಧಿತ ನಾಲ್ವರಿಂದ 70 ಗ್ರಾಂ ಬಂಗಾರದ ಆಭರಣಗಳು, 56 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಸ್ಕೂಟಿಗಳು ಸೇರಿದಂತೆ ಒಟ್ಟು ₹11,97,700 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆಗುಂಬೆ ಪೊಲೀಸರ ಕಾರ್ಯಾಚರಣೆಗೆ ನಿಖಿಲ್ ಬಿ. ಅಭಿನಂದನೆ ಸಲ್ಲಿಸಿದ್ದಾರೆ.
Also Read:
ಅಬು ಬಿಲಾಲ್ ಸಾವು ದೃಢಪಡಿಸಿದ ಟ್ರಂಪ್: ಐಸಿಸ್ ಗೆ ಭಾರಿ ಹೊಡೆತ, ಭಯ ಅಂತ್ಯ ಎಂದ ಹೇಳಿಕೆ