BELAGAVI NEWS :
ಪರಿಷತ್ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರ 'ಚಾಣಕ್ಯ ತಂತ್ರ' ಹೇಳಿಕೆಗೆ ವಿಪಕ್ಷ ನಾಯಕ ಆರ್ ಅಶೋಕ್ ತೀವ್ರ ತಿರುಗೇಟು ನೀಡಿದ್ದಾರೆ."ಚಾಣಕ್ಯ ಎಂದಿಗೂ ಕುದುರೆ ವ್ಯಾಪಾರ ಮಾಡುತ್ತಿರಲಿಲ್ಲ.ಹಾಗಿದ್ದರೆ ಕುದುರೆ ವ್ಯಾಪಾರ ಮಾಡುವ ಡಿಕೆಶಿ ಹೇಗೆ ಚಾಣಕ್ಯ ಆಗುತ್ತಾರೆ?"ಎಂದು ಲೇವಡಿ ಮಾಡಿದ ಅವರು,2019ರ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು 17 ಶಾಸಕರನ್ನು ಕರೆದುಕೊಂಡು ಬಂದಾಗ ಅದನ್ನು ಆಪರೇಷನ್ ಕಮಲ ಎಂದು ಟೀಕಿಸಿದ್ದ ಕಾಂಗ್ರೆಸ್,ಈಗ ಮಾಡುತ್ತಿರುವುದೇನು?"ಎಂದು ಪ್ರಶ್ನಿಸಿದ ಅಶೋಕ್,ಕಾಂಗ್ರೆಸ್ ನಾಯಕರಿಗೆ ನೇರ ಸವಾಲು ಹಾಕಿದರು."ಆಗ ನಮ್ಮ ಜೊತೆ ಕಾಂಗ್ರೆಸ್ ಶಾಸಕರು ಬಂದಿದ್ದರು.ಆಗ ಡಿಕೆಶಿ ಮಂತ್ರಿ ಆಗಿದ್ದರು.ಈ ಚಾಣಕ್ಯ ಆಗ ಎಲ್ಲಿದ್ದರು?"ಎಂದು ಕಿಡಿ ಕಾರಿದರು.
ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ:'ಕುದುರೆ ವ್ಯಾಪಾರ,ಹಣದ ಹೊಳೆ ಹರಿಸಿದ್ದಾರೆ'
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು,ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.ಪಕ್ಷದೊಳಗೆ ದ್ರೋಹ ಮತ್ತು ವಂಚನೆ ನಡೆದಿರುವುದು ನಿಜ ಎಂದು ಒಪ್ಪಿಕೊಂಡ ಅವರು,ಚುನಾವಣೆಯಲ್ಲಿ ಅಡ್ಡ ಮತದಾನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
"ಯಾವ ಶಾಸಕ ದ್ರೋಹ ಮಾಡಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸುತ್ತೇವೆ.ಜೊತೆಗೆ,ನಮ್ಮ ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದು,ಪರಿಷತ್ ಚುನಾವಣೆಯಲ್ಲಿ ನಡೆದ ಬೆಳವಣಿಗೆಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ"ಎಂದು ಅಶೋಕ್ ತಿಳಿಸಿದರು.
ಇದೇ ವೇಳೆ,ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು,"ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ ನಡೆಸಿದ್ದು,ಹಣದ ಹೊಳೆಯನ್ನೇ ಹರಿಸಿದೆ.ಇಂತಹ ರಾಜಕೀಯ ಸಂಸ್ಕೃತಿ ಕಾಂಗ್ರೆಸ್ ಗೆ ಒಳ್ಳೆಯದಲ್ಲ.ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ"ಎಂದು ಆರೋಪಿಸಿದರು.
ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ಯುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಆರ್ ಅಶೋಕ್,"ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನಗೆ ಕರೆ ಮಾಡಿದ್ದರು.ನಾಳೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ.ವಿಜೇಂದ್ರ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು"ಎಂದು ಹೇಳಿದರು.
ಪರಿಷತ್ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ಬೆಳವಣಿಗೆಗಳು ಹೊಸ ತಿರುಗು ಪಡೆದುಕೊಂಡಿದ್ದು,ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಅಡ್ಡ ಮತದಾನ ಮಾಡಿದವರಿಗೆ ಆರ್. ಅಶೋಕ್ ಖಡಕ್ ಎಚ್ಚರಿಕೆ :'ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ'
ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ವಿಚಾರವಾಗಿ ಬಿಜೆಪಿ ನಾಯಕರು ಗಂಭೀರ ಚರ್ಚೆ ನಡೆಸುತ್ತಿದ್ದು,ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
"ಅಡ್ಡ ಮತದಾನದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ.ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿ,ಅವರಿಗೆ ತಕ್ಕ ಪಾಠ ಕಲಿಸುತ್ತೇವೆ"ಎಂದು ಅಶೋಕ್ ಹೇಳಿದ್ದಾರೆ.
ಈ ವಿಚಾರವನ್ನು ಕೇಂದ್ರ ನಾಯಕರ ಗಮನಕ್ಕೂ ತಂದು,ಗಂಭೀರವಾಗಿ ಚರ್ಚಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದ ಅವರು,ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
"ಅಡ್ಡ ಮತದಾನ ಮಾಡಿದವರು ಮತ್ತೆ ಚುನಾವಣೆಗೆ ನಿಲ್ಲದಂತಹ ಕ್ರಮ ಕೈಗೊಳ್ಳುತ್ತೇವೆ"ಎಂದು ಅಶೋಕ್ ಖಡಕ್ ಎಚ್ಚರಿಕೆ ನೀಡಿದ್ದು,ಪರಿಷತ್ ಚುನಾವಣೆಯ ಬೆಳವಣಿಗೆ ಇದೀಗ ಬಿಜೆಪಿ ಆಂತರಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
ಅಡ್ಡ ಮತದಾನದ ಆರೋಪ,ಪಕ್ಷದೊಳಗಿನ ಅಸಮಾಧಾನ ಮತ್ತು ಮುಂದಿನ ಕ್ರಮಗಳ ಬಗ್ಗೆ ಬಿಜೆಪಿ ನಾಯಕತ್ವದ ನಿರ್ಧಾರ ಕುತೂಹಲ ಮೂಡಿಸಿದೆ.
Also Read:
ಪ್ರತಿದಿನ ರಾಗಿ ರೊಟ್ಟಿ ಸೇವಿಸಿದರೆ ಏನಾಗುತ್ತೆ? ಆರೋಗ್ಯದ ಮೇಲೆ ಬೀರುವ ಪರಿಣಾಮ ಏನು? ನೋಡಿಸಿ