BELAGAVII NEWS :
ಬೆಳಗಾವಿ: ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಯುವ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಖಾಸಿಗೆ ಕಂಪನಿಯಲ್ಲಿ ಬುಧವಾರ ಸಂಜೆ ನಡೆದಿದೆ. ಆತ್ಮಹತ್ಯೆಗೆ ಮುನ್ನ ವಾಟ್ಸಆ್ಯಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ಹಂಚಿಕೊಂಡಿದ್ದ ಮೃತ ಯುವಕ, ತನ್ನ ಸಾವಿಗೆ ಕಂಪನಿ ಹಾಗೂ ಗುತ್ತಿಗೆದಾರರ ಕಿರುಕುಳವೇ ಕಾರಣ ಎಂದು ಆರೋಪಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಮೃತ ಯುವಕನನ್ನು ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಶಂಕರ ತಳವಾರ(24) ಎಂದು ಗುರುತಿಸಲಾಗಿದೆ. ಡೆತ್ ನೋಟ್ ನಲ್ಲಿ ಹಳೆಯ ಕಾರ್ಮಿಕನ್ನು ಕೆಲಸದಿಂದ ತೆಗೆದು ಹೊಸಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು. ಗುತ್ತಿಗೆದಾರ ತನ್ನ ಸಂಬಂಧಿಕರನ್ನೇ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದ್ದಾನೆ. ಅಲ್ಲದೆ, ಕೆಲಸ ಮುಂದುವರಿಸಬೇಕಾದರೆ 5ಲಕ್ಷ ರೂಪಾಯಿ ಹಣ ನೀಡುವಂತೆ ಗುತ್ತಿಗೆದಾರ ಬೇಡಿಕೆ ಇಟ್ಟಿದ್ದಾನೆ ಎಂದು ಶಂಕರ ಉಲ್ಲೇಖಿಸಿದ್ದಾನೆ.
ಶಂಕರ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು ಹಾಗೂ ಮುತ್ಯಾನಟ್ಟಿ ಗ್ರಾಮದ ನೂರಾರು ಜನರು ಕಂಪನಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಂಪನಿ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರನ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಜನರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಶಾಸಕ ಆಸಿಫ್ ಸೇಠ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಸಮಾಧಾನಪಡಿಸಲು ಅಧಿಕಾರಿಗಳು ಪ್ರಯತ್ನಿಸಿದರು.
ಇತ್ತ, ಏಕೈಕ ಮಗನನ್ನು ಕಳೆದುಕೊಂಡ ಶಂಕರನ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದ ದುಃಖ ಕಣ್ಣೀರಿನ ವಾತಾವರಣ ನಿರ್ಮಿಸಿತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು. ಡೆತ್ ನೋಟ್ ನಲ್ಲಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, "ದೂರದೃಷ್ಟವಶಾತ್ ಶಂಕರ ತಳವಾರ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ ವಾಟ್ಸಾಆ್ಯಪ್ ಸ್ಟೇಟಸ್ ನಲ್ಲಿ ಕಂಪನಿ ಮತ್ತು ಗುತ್ತಿಗೆದಾರರಿಂದ ತೊಂದರೆ ಅನುಭವಿಸುತ್ತಿರುವುದಾಗಿ ಉಲ್ಲೇಖಿಸಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ. ಮೃತನ ಇಬ್ಬರು ಸಹೋದರರಿಗೆ ತಕ್ಷಣವೇ ಉದ್ಯೋಗ ನೀಡಲು ಕಾರ್ಯಾದೇಶ ಪತ್ರ ನೀಡಲಾಗಿದೆ" ಎಂದು ತಿಳಿಸಿದರು.
ಅಲ್ಲದೆ, ಮುತ್ಯಾನಟ್ಟಿ, ಯಮನಾಪುರ, ಕಣಬರಗಿ ಸೇರಿದಂತೆ ಸುತ್ತಮುತ್ತಲಿನ ಐದು ಗ್ರಾಮಗಳ ಸ್ಥಳೀಯ ಯುವಕರಿಗೆ ಕಂಪನಿಯಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕರಿಂದ ಹಣ ಪಡೆದವರ ವಿರುದ್ಧ ಕ್ರಮ:
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, "ಕಾರ್ಮಿಕರನ್ನು ಶಾಶ್ವತಗೊಳಿಸುವ ಭರವಸೆ ನೀಡಿ ಕೆಲ ಗುತ್ತಿಗೆದಾರರು ಹಣ ಪಡೆದುಕೊಂಡಿರುವ ಆರೋಪಗಳು ಕೇಳಿ ಬಂದಿವೆ. ಐದು ವರ್ಷ ಕಳೆದರೂ ಕಾರ್ಮಿಕರನ್ನು ಪರ್ಮನೆಂಟ್ ಮಾಡದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಯುವಕನ ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು" ಎಂದು ಹೇಳಿದರು.
ಕಾರ್ಮಿಕರಿಂದ ಹಣ ಪಡೆದು ವಂಚನೆ ನಡೆಸಿರುವುದು ದೃಢ ಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸೂಕ್ತ ಪರಿಹಾರ ನೀಡಲು ಕಂಪನಿಯೊಂದಿಗೆ ಮಾತುಕತೆ:
ಶಾಸಕ ಆಸಿಫ್ ಸೇಠ್ ಮಾತನಾಡಿ, ''ಯುವಕನ ಆತ್ಮಹತ್ಯೆ ಅತ್ಯಂತ ನೋವಿನ ಸಂಗತಿ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಜೊತೆಗೂಡಿ ಕಂಪನಿ ಆಡಳಿತದೊಂದಿಗೆ ಮಾತುಕತೆ ನಡೆಸಿದ್ದೇವೆ. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಂಪನಿಯಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ಈಗಾಗಲೇ ಕುಟುಂಬದ ಸದಸ್ಯರಿಗೆ ಉದ್ಯೋಗ ವ್ಯವಸ್ಥೆ ಮಾಡಲಾಗಿದೆ. ನಾನು ವೈಯಕ್ತಿಕವಾಗಿಯೂ ಕುಟುಂಬಕ್ಕೆ ನೆರವು ನೀಡುತ್ತೇನೆ" ಎಂದು ಹೇಳಿದರು.
ಯುವ ಕಾರ್ಮಿಕನ ಸಾವಿನ ಪ್ರಕರಣ ಬೆಳಗಾವಿಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು. ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Also Read:
" ರಫೇಲ್ ಬಗ್ಗೆ ಸುಳ್ಳು ಆರೋಪಗಳೇ?ರಾಹುಲ್ ವಿರುದ್ಧ ಬಿಜೆಪಿ ವಾಗ್ದಾಳಿ ತೀವ್ರ"