belagavi news :
ಬೆಳಗಾವಿಯಲ್ಲಿ ₹165ಕೋಟಿ ವಂಚನೆ ಪ್ರಕರಣ : ಹೆಚ್ಚಿನ ಬಡ್ಡಿ ಆಮಿಷವಡ್ಡಿ ಹೂಡಿಕೆದಾರರಿಗೆ ದೋಖಾ
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಆರ್ಥಿಕ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಸುಮಾರು 165 ಕೋಟಿ ಸಂಗ್ರಹಿಸಿ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣ ನಗರದ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ನಗರ ಪೊಲೀಸ್ ಕಮಿಷನರ್ ಭೂಷನ್ ಬೊರಸೆ ಅವರ ಮಾಹಿತಿ ಪ್ರಕಾರ, ಅಪೆಕ್ಸ್ ಬಿಜ್ ಕಾರ್ಪ್ LLP ಸಂಸ್ಥೆಯ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಹೆಚ್ಚಿನ ಲಾಭದ ಭರವಸೆ ನೀಡಿ ಹೂಡಿಕೆದಾರದಿಂದ ಕೋಟ್ಯಾಂತರ ರೂಪಾಯಿ ಪಡೆದು ವಂಚನೆ ಎಸೆಗಿರುವ ಆರೋಪದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ.
ಈ ಸಂಬಂಧ ಅಶೋಕ್ ಬಿಸಗುಪ್ಪಿ ಎಂಬುವರು ಜುಲೈ 13 ರಂದು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಂಚನೆಯ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಲವರು ತಮ್ಮ ಹಣದ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪೆಕ್ಸ್ ಬಿಜ್ ಕಾರ್ಪ್ LLP ಸಂಸ್ಥೆಯಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರತೀ ತಿಂಗಳು ಶೇ. ನಾಲ್ಕರಷ್ಟು ಬಡ್ಡಿ ನೀಡುವುದಾಗಿ ಆಮೀಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ.
ಹೂಡಿಕೆದಾರರ ವಿಶ್ವಾಸ ಗಳಿಸಲು ಸಂಸ್ಥೆಯು ಹ್ಯಾಂಡ್ ಲೋನ್ ಅಗ್ರಿಮೆಂಟ್ ಹಾಗೂ ಭದ್ರತೆಯಾಗಿ ಚೆಕ್ ಗಳನ್ನು ನೀಡಿತ್ತು ಎನ್ನಲಾಗಿದೆ. ಆದರೆ, ನಿಗದಿತ ಅವಧಿಯ ಬಳಿಕ ಹೂಡಿಕೆದಾರರಿಗೆ ಮೂಲಧನ ಮತ್ತು ಬಡ್ಡಿಯನ್ನು ಹಿಂತಿರುಗಿಸದೆ ಸಂಸ್ಥೆಯ ಪ್ರಮುಖರು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಬೆಳವಣಿಗೆಯಿಂದ ಸಾವಿರಾರು ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಹಣವನ್ನು ಮರಳಿ ಪಡೆಯಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚನೆಯ ಸಂಪೂರ್ಣ ಜಾಲ, ಹಣದ ವಹಿವಾಟು ಹಾಗೂ ಆರೋಪಿಗಳ ಪತ್ತೆಗಾಗಿ ತನಿಕೆಯನ್ನು ತೀವ್ರಗೊಳಿಸಿದ್ದಾರೆ.
ಹೂಡಿಕೆದಾರರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಪೆಕ್ಸ ಬಿಜ್ ಕಾರ್ಪ್ LLP ಸಂಸ್ಥೆಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಕಾಶಿನಾಥ್ ವಾಗ್ಮರೆ ಹಾಗೂ ಗಣೇಶ್ ಬಂಡಾರಿ ದಂಪತಿಗಳ ಪಾತ್ರದ ಬಗ್ಗೆ ಆರೋಪ ಕೇಳಿ ಬಂದಿದೆ.
ಈ ಪ್ರಕರಣದಲ್ಲಿ₹50 ಕೋಟಿಗೂ ಅಧಿಕ ಹಣದ ವಂಚನೆ ನಡೆದಿರುವ ಆರೋಪ ಇರುವುದರಿಂದ, ತನಿಖೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಪ್ರಕರಣವನ್ನು "ಸಿಐಡಿ"ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಸಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಹೂಡಿಕೆದಾರರಿಂದ ಸಂಗ್ರಹಿಸಲಾದ ಹಣದ ವಹಿವಾಟು, ಸಂಸ್ಥೆಯ ಚಟುವಟಿಕೆಗಳು ಹಾಗೂ ವಂಚನೆಯ ಸಂಪೂರ್ಣ ಜಾಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.