Belagavi News:
ನವದೆಹಲಿ/ಕಾಸರಗೋಡು: ಉಕ್ರೇನ್ ನ ಒಡೆಸಾ (Odessa) ಬಂದರಿನಿಂದ ಹೊರಡುತ್ತಿದ್ದ ಎಂವಿ ಗೋಲ್ಡನ್ ಲಿಯೋ (MV Golden Leo) ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ನಾಲ್ವರು ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದು. ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.
ವಿದೇಶಾಂಗ ಸಚಿವಾಲಯ (MEA) ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಜುಲೈ 19ರ ಸಂಜೆ ಒಡೆಸಾ ಬಂದರಿನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು. ಅವರಲ್ಲಿ ಐವರು ಭಾರತೀಯರು ಸೇರಿದ್ದರು. ಲಭ್ಯವಿರುವ ಮಾಹಿತಿಯಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದು. ಒಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಗಾಯಾಳು ಹಾಗೂ ಮೃತರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಸಚಿವಾಲಯ ತಿಳಿಸಿದೆ. ಗಾಯಗೊಂಡ ಭಾರತೀಯರು ಶೀಘ್ರ ಗುಣಮುಖರಾಗಲಿ ಎಂದು ಭಾರತ ಹಾರೈಸಿದೆ.
ಭಾರತದ ತೀವ್ರ ಖಂಡನೆ
ವಾಣಿಜ್ಯ ಸರಕು ಸಾಗಣೆ ಹಡಗು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಹಾಗೂ ಮುಗ್ಧ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟು ಮಾಡುವುದು ಸಂಪೂರ್ಣ ಅಸ್ವಿಕಾರಾರ್ಹ ಎಂದು ಭಾರತ ಸ್ಪಷ್ಟಪಡಿಸಿದೆ. ಇಂತಹ ದಾಳಿಗಳು ಅಂತರರಾಷ್ಟ್ರೀಯ ಸಮುದ್ರ ವಾಣಿಜ್ಯ ಸಂಚಾರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ರಷ್ಯಾ ಸೇನೇ ವಿರುದ್ಧ ಉಕ್ರೇನ್ ಆರೋಪ
ಈ ದಾಳಿಯನ್ನು ರಷ್ಯಾ ಸೇನೆ ನಡೆಸಿದ ಎಂದು ಉಕ್ರೇನ್ ನೌಕಾಪಡೆ ಆರೋಪಿಸಿದೆ. ಉಕ್ರೇನಿಯನ್ ವಾಯುಪಡೆಯ ಮಾಹಿತಿ ಪ್ರಕಾರ, ರಷ್ಯಾ ಮೂರು Kh-59/Kh-69 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದ್ದು. ಅವುಗಳಲ್ಲಿ ಒಂದು MV Golden Leo ಹಡಗಿನ ಸ್ಟಾರ್ ಬೋರ್ಡ್ ಭಾಗಕ್ಕೆ ಬಡಿದಿದೆ.
ಕೆರಳದ ಯುವ ನಾವಿಕ ಬಲಿ
ದಾಳಿಯಲ್ಲಿ ಮೃತಪಟ್ಟವರಲ್ಲಿ ಕೆರಳದ ಕಾಸರಗೋಡು ಜಿಲ್ಲೆಯ 26 ವರ್ಷದ ಅಖಿಲ್ ಜೋಯನ್ ಕೂಡ ಸೇರಿದ್ದಾರೆ. ವೆಲ್ಲರಿಕುಂಡುವಿನ ಎಕೆಜಿ ನಗರದ ನಿವಾಸಿಯಾಗಿದ್ದ ಅಖಿಲ್ ಕಳೆದ ಐದು ವರ್ಷಗಳಿಂದ ವಾಣಿಜ್ಯ ನೌಕೆಯಲ್ಲಿ ನಾವಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಗಿನಿಯಾ - ಬಿಸ್ಸೌ ಧ್ವಜದಡಿ ಸಂಚರಿಸುತ್ತಿದ್ದ ಈ ಹಡಗು ಆಹಾರ ಧಾನ್ಯಗಳನ್ನು ಸಾಗಿಸುತ್ತಿದ್ದು, ಭಾರತೀಯ ಹಾಗೂ ಸಿರಿಯಾದ ಸಿಬ್ಬಂದಿಯನ್ನು ಒಳಗೊಂಡಿತ್ತು.