BELAAGVI NEWS :
64 ರಲ್ಲೂ ಹೊಸತನದ ಹುಡುಕಾಟ : ಶಿವರಾಜ್ ಕುಮಾರ್ ಅವರ ಸಿನಿ ಪಯಣಕ್ಕೆ ಹೊಸ ಅಧ್ಯಾಯ
ಕನ್ನಡದ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮದೇ ಆದ ಚಾಪು ಮೂಡಿಸಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜುಲೈ 12 ತಮ್ಮ 64ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವಯಸ್ಸು ಹೆಚ್ಚಾದರೂ ಉತ್ಸಾಹ, ಶಕ್ತಿ ಮತ್ತು ಸಿನಿಮಾ ಮೇಲಿನ ಪ್ರೀತಿ ಮಾತ್ರ ಇನ್ನಷ್ಟು ಹೆಚ್ಚಾಗುತ್ತಿದೆ. ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಿವಣ್ಣ, ಯುವ ಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
24ರ ಡಿಸೆಂಬರ್ ನಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದ ಬಳಿಕ ಕೆಲಕಾಲ ವಿಶ್ರಾಂತಿ ಪಡೆದಿದ್ದ ಅವರು, ಇದೀಗ ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮನ್ನು ವಿವಿಧ ಪಾತ್ರಗಳಲ್ಲಿ ವೀಕ್ಷಕರ ಮುಂದೆ ತರುವ ಪ್ರಯತ್ನಗಳಿಗೆ ಅವರು ತೆರೆದ ಮನಸ್ಸಿನಿಂದ ಸ್ಪಂದಿಸುತ್ತಿದ್ದಾರೆ.
ತಮ್ಮ ವೃತ್ತಿ ಜೀವನದ ಮುಂದಿನ ಹಂತದ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ಸದಾ ಯುವಕರಂತೆ ಕಾಣಬೇಕೆಂಬ ಭ್ರಮೆಯ ಹಿಂದೆ ಓಡುವುದಕ್ಕಿಂತ ಹೊಸ ಅನುಭವಗಳು ಮತ್ತು ವಿಭಿನ್ನ ಪ್ರಯೋಗಗಳನ್ನು ಅನ್ವಯಿಸುವುದು ಮುಖ್ಯ ಎಂದು ಹೇಳಿದ್ದಾರೆ.
"ಬದಲಾವಣೆ ಎನ್ನುವುದು ನಿರಂತರ ಪ್ರಕ್ರಿಯೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಹೆಚ್ಚು ಪ್ರೀತಿಸುತ್ತಾರೆ. ಕೆಲವೊಮ್ಮೆ ಆ ಪ್ರೀತಿ ನಮ್ಮಲ್ಲಿ ನಾವು ಸದಾ ಯುವಕರಾಗಿದ್ದೇವೆ ಎಂಬ ಭಾವನೆ ಮೂಡಿಸುತ್ತದೆ. ಆದರೆ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಬದಲಾಗಬೇಕು," ಎಂಬ ಅರ್ಥದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಮ್ಮ ವಯಸ್ಸನ್ನು ಮರೆಮಾಚುವ ಪ್ರಯತ್ನಕ್ಕಿಂತ, ಅದನ್ನು ಒಪ್ಪಿಕೊಂಡು ಹೊಸ ಪಾತ್ರಗಳು ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸುವುದೇ ತಮ್ಮ ಗುರಿ ಎಂದು ಶಿವಣ್ಣ ಹೇಳಿದ್ದಾರೆ. ಇದೇ ಅವರ ಸಿನಿ ಪಯಣದ ವಿಶೇಷತೆ - ಕಾಲ ಬದಲಾದರೂ ಕಲಾವಿದನ ಉತ್ಸಾಹ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ.
ಸ್ಟಾರ್ ಡಮ್ ಶಾಶ್ವತವಲ್ಲ, ಬದಲಾವಣೆಯೇ ಮುಖ್ಯ: ಶಿವಣ್ಣ
ಸ್ಟಾರ್ ಡಮ್ ಎನ್ನುವುದು ಶಾಶ್ವತವಲ್ಲ ಎಂಬ ವಾಸ್ತವದ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ಪ್ರೇಕ್ಷಕರ ಪ್ರೀತಿ ಮತ್ತು ಸ್ವೀಕಾರವೇ ಒಬ್ಬ ಕಲಾವಿದನ ಸ್ಥಾನವನ್ನು ನಿರ್ಧರಿಸುತ್ತದೆ ಎಂದು ಹೇಳಿರುವ ಅವರು, "ಇಷ್ಟಪಟ್ಟರೆ ಪ್ರೇಕ್ಷಕರು ಉನ್ನತ ಸ್ಥಾನದಲ್ಲಿ ರಿಸುತ್ತಾರೆ,
ಇಷ್ಟವಾಗದಿದ್ದರೆ ದೂರ ತಳ್ಳುತ್ತಾರೆ. ಆದರೆ ಪ್ರಾಮಾಣಿಕವಾಗಿ ಮುಂದುವರೆಯುವುದು ನಮ್ಮ ಕೆಲಸ,"ಎಂದಿದ್ದಾರೆ.
ವಯಸ್ಸಿಗೆ ತಕ್ಕಂತೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತಿರುವ ಶಿವಣ್ಣ, ತಮ್ಮ ಸಿನಿಮಾ ಪಯಣದಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಇತ್ತೀಚಿನ 'ಪೆದ್ದಿ' ಸಿನಿಮಾದಲ್ಲಿ ನಾಯಕನ ಪಾತ್ರವಲ್ಲದೆ ಪ್ರಮುಖ ಪಾತ್ರವನ್ನು ಸ್ವೀಕರಿಸಿರುವುದು ಇದಕ್ಕೆ ಉದಾಹರಣೆಯಾಗಿದೆ.
ರಾಮ್ ಚರಣ್ ನೇತೃತ್ವದ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಗೌರ್ ನಾಯ್ಡು ಪಾತ್ರ ಕಥೆಯಲ್ಲಿ ನಿರ್ಣಾಯಕ ಸ್ಥಾನ ಪಡೆದಿದೆ. ಬದಲಾವಣೆಯನ್ನು ಸ್ವೀಕರಿಸುವ ಮನೋಭಾವ ಮತ್ತು ವಿಭಿನ್ನ ಪಾತ್ರಗಳ ಹುಡುಕಾಟ ಅವರ ಇತ್ತೀಚಿನ ಸಿನಿಮಾ ಆಯ್ಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಶಿವಣ್ಣ ಮಾತು: ಬದಲಾವಣೆಯನ್ನು ಸ್ವೀಕರಿಸುವುದೇ ಜೀವನದ ಸತ್ಯ
ಜೀವನದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಮುಖ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ವಯಸ್ಸು, ಸಾಮರ್ಥ್ಯ ಮತ್ತು ಪರಿಸ್ಥಿತಿಗಳ ಬದಲಾವಣೆಯನ್ನು ಸ್ವಾಭಾವಿಕವಾಗಿ ಸ್ವೀಕರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಿದೆ. ಸಾವು ಕೂಡ ಹುಟ್ಟಿನಷ್ಟೇ ವಾಸ್ತವ. ಉದಾಹರಣೆಗೆ ಅಪ್ಪು ತಮ್ಮ 46ನೇ ವಯಸ್ಸಿನಲ್ಲಿ ಅಗಲಿದರು. ಅದು ಅವರು ಹೋಗಬೇಕಾದ ವಯಸ್ಸೇ? ಖಂಡಿತವಾಗಿಯೂ ಅಲ್ಲ. ಆದರೆ ಜೀವನದ ಸತ್ಯವೇ ಅದು. ಯಾವುದೇ ಭ್ರಮೆ ಅಥವಾ ನಿರಾಕರಣೆಯಲ್ಲಿ ಬದುಕಲು ಸಾಧ್ಯವಿಲ್ಲ. ವಯಸ್ಸಾದಾಗ, ದುರ್ಬಲರಾದಾಗ ಅಥವಾ ಕೆಲವು ಕೆಲಸಗಳನ್ನು ಮಾಡಲು ಸಾಧ್ಯವಾಗದಾಗ ವಿಷಾದಿಸುವ ಬದಲು ಬದಲಾವಣೆಯನ್ನು ಸ್ವೀಕರಿಸಬೇಕು," ಎಂದು ಶಿವಣ್ಣ ಹೇಳಿದ್ದಾರೆ.
ಸಿನಿಮಾ ಕ್ಷೇತ್ರದಲ್ಲೂ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿರುವ ಶಿವರಾಜ್ ಕುಮಾರ್, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸದ್ಯ '666 ಆಪರೇಷನ್ ಬೇಲ್', ' ಬೇಲ್', ' ಎ ಫಾರ್ ಆನಂದ್' ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿದೆ.
ಇತ್ತೀಚಿಗೆ ಪೆದ್ದಿ ಸಿನಿಮಾದಲ್ಲಿ ಗುರು ಗೌರ್ ನಾಯ್ಡು ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಲುಕ್ ಮತ್ತು ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಪಾತ್ರದ ಮೂಲಕ ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.