Belagavi News :
ವಿಯೆಟ್ನಾಂ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ಮೃತದೇಹ ಮುಂಬೈಗೆ, ಸ್ವಗ್ರಾಮಗಳಿಗೆ ರವಾನೆ
ಮುಂಬೈ: ವಿಯೆಟ್ನಾಂನ ಫು ಕ್ವಾಕ್ (Phu Quoc) ದ್ವೀಪದ ಸಮೀಪ ಸಂಭವಿಸಿದ ಭೀಕರ ಬೋಟ್ ಅಪಘಾತದಲ್ಲಿ ಮೃತಪಟ್ಟ 15 ಭಾರತೀಯ ಪ್ರವಾಸಿಗರ ಮೃತದೇಹಗಳು ಸೋಮವಾರ (ಜುಲೈ 13) ರಾತ್ರಿ ಮುಂಬೈ ತಲುಪಿವೆ.
ವಿಯೆಟ್ನಾಂ ಏರ್ ಲೈನ್ಸ್ ನ ವಿಶೇಷ ವಿಮಾನ VN 979 ಮೂಲಕ ರಾತ್ರಿ 9:19ರ ವೇಳೆಗೆ ಮೃತ ದೇಹಗಳನ್ನು ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ವಿಮಾನ ನಿಲ್ದಾಣದಲ್ಲಿ ಅಗತ್ಯ ಇಮಿಗ್ರೇಷನ್, ದಾಖಲೆ ಪರಿಶೀಲನೆ ಸೇರಿದಂತೆ ಅಧಿಕೃತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು.
ಮಂಗಳವಾರ ಬೆಳಿಗ್ಗೆ ಮೃತ ದೇಹಗಳನ್ನು ವಿಶೇಷ ಸರಕಾರಿ ವ್ಯವಸ್ಥೆಯಲ್ಲಿ ಅವರವರ ಸ್ವಸ್ಥಳಗಳಿಗೆ ಕಳುಹಿಸಲಾಗಿದೆ. ಮೃತರ ಪಾರ್ಥಿವ ಶರೀರಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿಯೆಟ್ನಾಂನಿಂದ ತರಲಾದ 15 ಮೃತದೇಹಗಳನ್ನು ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ರವಾನಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಪೈಕಿ 10 ಮಂದಿ ತಮಿಳುನಾಡಿನವರು, ಇಬ್ಬರು ಕೇರಳದವರು ಹಾಗೂ ಮೂವರು ಆಂಧ್ರಪ್ರದೇಶದವರು ಎಂದು ತಿಳಿದುಬಂದಿದೆ.
ಫು ಕ್ವಾಕ್ ದ್ವೀಪದ ಸಮೀಪ ನಡೆದ ಈ ಬೋಟ್ ದುರಂತದಲ್ಲಿ ಭಾರತೀಯ ಪ್ರವಾಸಿಗರ ಸಾವಿನಿಂದ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರದ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಕ್ರಮಗಳು ಮುಂದುವರಿದಿವೆ.
ವಿಯೆಟ್ನಾಂ ಬೋಟ್ ದುರಂತ: ಆಂಧ್ರ, ಕೇರಳದ ಮೃತದೇಹಗಳನ್ನು ಸ್ವಗ್ರಾಮಗಳಿಗೆ ರವಾನೆ
ವಿಯೆಟ್ನಾಂ ಬೋಟ್ ದುರಂತದಲಿ ಮೃತಪಟ್ಟ ಭಾರತೀಯ ಪ್ರವಾಸಿಗರ ಪಾರ್ಥಿವ ಶರೀರಗಳನ್ನು ಸ್ವಗ್ರಾಮಗಳಿಗೆ ತಲುಪಿಸುವ ಪ್ರಕ್ರಿಯೆ ಮುಂದುವರೆದಿದೆ. ವಿಯೆಟ್ನಾಂನಿಂದ ವಿಮಾನ ಆಗಮಿಸುವ ಮುನ್ನವೇ ಆಂಧ್ರಪ್ರದೇಶ ಪೊಲೀಸ್ ತಂಡವು ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿತ್ತು.
ಆಂಧ್ರಪ್ರದೇಶಕ್ಕೆ ಸೇರಿದ ಮೂವರು ಮೃತರ ಪಾರ್ಥಿವ ಶರೀರಗಳನ್ನು ಪೊಲೀಸ್ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡು, ಮಂಗಳವಾರ ಬೆಳಿಗ್ಗೆ 5:45 ಏರ್ ಇಂಡಿಯಾ ವಿಮಾನದ ಮೂಲಕ ಹೈದರಾಬಾದ್ ಗೆ ರವಾನಿಸಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಗಳ ಮೂಲಕ ಮೃತದೇಹಗಳನ್ನು ಅವರವರ ಮೂಲ ಗ್ರಾಮಗಳಿಗೆ ಕೊಂಡೊಯ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ಕೇರಳದ ಕೊಟ್ಟರಕ್ಕರ ಮೂಲದ ದಂಪತಿಗಳಾದ ಎ.ಸಿ. ಥಾಮಸ್ (57) ಮತ್ತು ಅವರ ಪತ್ನಿ ಲೋವಿನಿ ಥಾಮಸ್ (56) ಅವರ ಮೃತದೇಹಗಳನ್ನು ಏರ್ ಇಂಡಿಯಾ AI 2650 ವಿಮಾನದ ಮೂಲಕ ಬೆಳಿಗ್ಗೆ 6:30ರ ಸುಮಾರಿಗೆ ತಿರುವನಂತಪುರಂಗೆ ಕಳುಹಿಸಲಾಗಿದೆ.
ತಿರುವನಂತಪುರಂ ವಿಮಾನ ನಿಲ್ದಾಣದಿಂದ ವಿಶೇಷ ಆಂಬ್ಯುಲೆನ್ಸ್ ವ್ಯವಸ್ಥೆ ಮೂಲಕ ಮೃತರ ಪಾರ್ಥಿವ ಶರೀರಗಳನ್ನು ಅವರ ಮೂಲ ಗ್ರಾಮಕ್ಕೆ ಕೊಂಡೊಯ್ದು ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.
ವಿಯೆಟ್ನಾಂ ಬೋಟ್ ದುರಂತ: ತಮಿಳುನಾಡಿನ 10 ಮೃತದೇಹಗಳು ಚೆನ್ನೈ, ಕೊಯಂಬತ್ತೂರಿಗೆ ರವಾನೆ
ವಿಯೆಟ್ನಾಂ ಫು ಕ್ವಾಕ್ ದ್ವೀಪದ ಸಮೀಪ ಜುಲೈ 11ರಂದು ಸಂಭವಿಸಿದ ಬೋಟ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಪ್ರವಾಸಿಗರ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ತರಲು ಭಾರತ ಸರ್ಕಾರ ಮತ್ತು ವಿಯೆಟ್ನಾಂ ನಲ್ಲಿರುವ ಭಾರತೀಯ ದೂತಾವಾಸವು ತ್ವರಿತ ಕ್ರಮ ಕೈಗೊಂಡಿದೆ.
ತಮಿಳುನಾಡಿಗೆ ಸೇರಿದ 10 ಮೃತರ ಪಾರ್ಥಿವ ಶರೀರಗಳನ್ನು ಚೆನ್ನೈ ಮತ್ತು ಕೊಯಂಬತ್ತೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್, ಇಮಿಗ್ರೇಷನ್ ಸೇರಿದಂತೆ ಅಗತ್ಯ ಅಧಿಕೃತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತ ದೇಹಗಳನ್ನು ಸಂಬಂಧಪಟ್ಟ ರಾಜ್ಯಗಳಿಗೆ ರವಾನಿಸಲಾಗಿದೆ.
ದುರಂತದಲ್ಲಿ ಮೃತಪಟ್ಟ ಭಾರತೀಯ ಕುಟುಂಬಗಳಿಗೆ ಪಾರ್ಥಿವ ಶರೀರಗಳನ್ನು ತಲುಪಿಸುವುದು ಹಾಗೂ ಅಂತಿಮ ವಿಧಿವಿಧಾನಗಳಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಯೆಟ್ನಾಂ ಬೋಟ್ ದುರಂತದ ಹಿನ್ನೆಲೆ: 32 ಭಾರತೀಯ ಪ್ರವಾಸಿಗರಿದ್ದ ಸ್ಪೀಡ್ ಬೋಟ್ ಅಪಘಾತ
ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಸಮೀಪ ಜುಲೈ 11ರಂದು ಸಂಭವಿಸಿದ ಭೀಕರ ಸ್ಪೀಡ್ ಬೋಟ್ ಅಪಘಾತದಲ್ಲಿ 32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸ್ಥಳೀಯ ಸಿಬ್ಬಂದಿ ಇದ್ದರು. ಸಮುದ್ರದಲ್ಲಿ ಸಂಭವಿಸಿದ ಈ ದುರಂತದಲ್ಲಿ ಹಲವರು ಮೃತಪಟ್ಟಿದ್ದು, ಕೆಲವರನ್ನು ರಕ್ಷಣಾ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಹೊರತರಲಾಯಿತು.
ಅಪಘಾತದ ಬಳಿಕ 16 ಭಾರತೀಯ ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಅವರಿಗೆ ಸ್ಥಳೀಯವಾಗಿ ವೈದ್ಯಕೀಯ ಚಿಕಿತ್ಸೆ ನೀಡಿದ ನಂತರ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ರಕ್ಷಿಸಲಾದವರ ಪೈಕಿ ಒಬ್ಬರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ತಿಳಿಸಲಾಗಿದೆ.
ಈ ದುರಂತದಿಂದ ಬಾಧಿತರಾದ ಕುಟುಂಬಗಳಿಗೆ ನೆರವಾಗಲು ಲಾವಾ ಇಂಟರ್ನ್ಯಾಷನಲ್ ಕಂಪನಿಯೂ ಪ್ರತಿ ಕುಟುಂಬಕ್ಕೆ ₹25 ಲಕ್ಷ ಆರ್ಥಿಕ ನೆರವು ಘೋಷಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಪೀಡ್ ಬೋಟ್ ಚಾಲಕನನ್ನು ಬಂಧಿಸಲಾಗಿದ್ದು, ಅಪಘಾತದಲ್ಲಿ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ವಿಯೆಟ್ನಾಂ ಅಧಿಕಾರಿಗಳು ಹಾಗೂ ಭಾರತೀಯ ಅಧಿಕಾರಿಗಳು ಪ್ರಕರಣದ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.