Belagavi news:
ಬ್ರಹ್ಮಾವರ, ಜೂನ್ 11: ತಾಯಿಯ ಮಡಿಲಿಗಿಂತ ಸುರಕ್ಷಿತವಾದ ಸ್ಥಳ ಮತ್ತೊಂದಿಲ್ಲ ಎನ್ನೆಲಾಗುತ್ತದೆ. ಆದರೆ ವಿಧಿಯ ಕ್ರೂರ ಆಟಕ್ಕೆ ತಾಯಿಯ ಮಡಿಲಿಲೇ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ತಾಯಿಯ ಮಡಿಲಲ್ಲಿದ್ದ ಒಂದುವರೆ ವರ್ಷದ ಮಗುವಿನ ತಲೆಯ ಮೇಲೆ ಆಕಸ್ಮಿಕವಾಗಿ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ಚಾಂತಾರು ಹೆರಂಜೆ ಗ್ರಾಮದ ನಿವಾಸಿಗಳಾದ ಪ್ರಶಾಂತ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರ ದಕ್ಷ ( 1.5ವರ್ಷ) ವೃತ್ತ ದುರ್ದೈವಿ. ತನ್ನ ಮುಗ್ಧ ನಗು ಮತ್ತು ತೊದಲು ಮಾತುಗಳಿಂದ ಕುಟುಂಬದವರ ಮನ ಗೆದ್ದಿದ್ದ ಪುಟ್ಟ ಕಂದಮ್ಮನ ಬದುಕು ಕ್ಷಣಾರ್ಧದಲ್ಲಿ ಅಂತ್ಯಗೊಂಡಿದೆ.
ಮನೆಯ ಸಮೀಪ ತಾಯಿ ಸುಚಿತ್ರಾ ಅವರು ಮಗುವನ್ನು ಮಡಿಲಲ್ಲಿ ಕುರಿಸಿಕೊಂಡಿದ್ದ ವೇಳೆ, ಸಮೀಪದ ತೆಂಗಿನ ಮರದಿಂದ ಏಕಾಏಕಿ ಉದುರಿದ ತೆಂಗಿನಕಾಯಿ ನೆರವಾಗಿ ಮಗುವಿನ ತಲೆಗೆ ಬಿದ್ದಿದೆ. ಪರಿಣಾಮ ಮಗು ಗಂಭೀರವಾಗಿ ಗಾಯಕೊಂಡು ಪ್ರಜ್ಞೆ ತಪ್ಪಿದೆ.
ತಕ್ಷಣವೇ ಸ್ಥಳೀಯರ ನೆರವಿನಿಂದ ಮಗುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಮಗುವಿನ ಪ್ರಾಣ ಉಳಿಸಲು ಶ್ರಮ ವಹಿಸಿ ತುರ್ತು ಶಸ್ತ್ರ ಚಿಕಿತ್ಸೆಯನ್ನು ನಡೆಸಿದರು. ಆದರೆ ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು. ಇಡೀ ಗ್ರಾಮದಲ್ಲಿ ಶೋಕ ಸಾಗರದಲ್ಲಿ ಮುಳುಗಿದೆ. ಮಗುವಿನ ಕಿಲಕಿಲ ನಗುವಿನಿಂದ ತುಂಬಿದ್ದ ಮನೆಯಲ್ಲಿ ಈಗ ಮೌನ ಆವರಿಸಿದೆ.
ಘಟನೆಯ ಮಾಹಿತಿ ತಿಳಿದು ನೂರಾರು ಗ್ರಾಮಸ್ಥರು ಮಗುವಿನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Also Read:
ಜನಮನ ಗೆದ್ದ 'ಬೆಳ್ಳೂಡಿ ಕಾಳಿ' ಕಥೆ ಬೆಳ್ಳಿತೆರೆಗೆ ; ಡಾಕ್ಯುಮೆಂಟರಿ ರೂಪದಲ್ಲಿ ಶೀಘ್ರದಲ್ಲೇ ಬಿಡುಗಡೆ