belagavi news :
ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ್ ದರೇಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದು ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ. ಸಾಮಾನ್ಯ ರೈತನ ಪುತ್ರನಾದ ಬಸವರಾಜ್ ಅವರು ತಮ್ಮ ಸತತ ಪರಿಶ್ರಮ, ದೃಢಸಂಕಲ್ಪ ಮತ್ತು ಶ್ರಮದ ಫಲವಾಗಿ ಕೇವಲ ಎರಡನೇ ಪ್ರಯತ್ನದಲ್ಲಿ ದೇಶದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಅವರ ಈ ಅದ್ವಿತೀಯ ಸಾಧನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಈ ಸಾಧನೆಯಿಂದ ಕುಟುಂಬಸ್ಥರು ಹಾಗೂ ಸವದಿ ಗ್ರಾಮಸ್ಥರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಯುವಜನತೆಗೆ ಬಸವರಾಜ ಅವರು ಪ್ರೇರಣೆಯಾಗಿ ಪರಿಣಮಿಸಿದ್ದಾರೆ.
ಸಾಮಾನ್ಯ ರೈತನ ಪುತ್ರನಾಗಿರುವ ಬಸವರಾಜ್ ದರೇಪ್ಪ ಕೆಂಪವಾಡ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಸವದಿ ಗ್ರಾಮದಲ್ಲೇ ಪೂರ್ಣಗೊಳಿಸಿದ್ದರು. ಬಳಿಕ ಅಥಣಿ ಪಟ್ಟಣದಲ್ಲಿ ಮುಂದಿನ ವಿದ್ಯಾಭ್ಯಾಸ ನಡೆಸಿ, ನಂತರ ಶಿರಸಿಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು. ಪದವಿ ನಂತರ ಬೆಂಗಳೂರಿನಲ್ಲಿ ನೆಲೆಸಿ ಯುಪಿಎಸ್ ಸಿ -ಐಎಫ್ಎಸ್ ಪರೀಕ್ಷೆಗೆ ಕಠಿಣ ಪರಿಶ್ರಮದೊಂದಿಗೆ ಸಿದ್ಧತೆ ನಡೆಸಿದರು.ಈ ಅದ್ಭುತ ಸಾಧನೆಯ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಬಸವರಾಜ್ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.
“ನನ್ನ ಸತತ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಲಿತ ನಾನು, ಒರೋ ರೈತನ ಮಗನಾಗಿ ಈ ಹಂತಕ್ಕೆ ತಲುಪಿದ್ದು ನನಗೆ ಅಪಾರ ಹೆಮ್ಮೆ ತಂದಿದೆ,"ಹೇಳಿದರು. ಇದೇ ವೇಳೆ,"ನಾನು ಯಾವುದೇ ವಿಶೇಷ ಕೋರ್ಸ್ ಗಳ ಮೊರೆ ಹೋಗಲಿಲ್ಲ. ಹಿರಿಯರ ಮಾರ್ಗದರ್ಶನ ಹಾಗೂ ನಿಯಮಿತ ಅಧ್ಯಯನದಿಂದ ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದೆ," ಎಂದು ತಿಳಿಸಿದರು.
ಪ್ರಸ್ತುತ ಬೆಂಗಳೂರಿನಲ್ಲಿರುವ ಬಸವರಾಜ್ ಅವರು, ಇನ್ನೆರಡು-ಮೂರು ದಿನಗಳಲ್ಲಿ ತಮ್ಮ ಸ್ವಗ್ರಾಮ ಸವದಿಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ. ಗ್ರಾಮೀಣ ಯುವಕರಿಗೂ ದೊಡ್ಡ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯ ಎಂಬುದಕ್ಕೆ ಬಸವರಾಜ್ ಅವರ ಸಾಧನೆ ಪ್ರೇರಣೆಯಾಗಿದೆ. ಗ್ರಾಮದ ಹೆಮ್ಮೆಯ ಪುತ್ರ ಬಸವರಾಜ್ ದರೇಪ್ಪ ಕೆಂಪವಾಡ ಅವರ ಐತಿಹಾಸಿಕ ಸಾಧನೆಗೆ ಸವದಿ ಗ್ರಾಮವೇ ಸಂಭ್ರಮದಲ್ಲಿ ಮುಳುಗಿದೆ.
ಸಾಮಾನ್ಯ ರೈತನ ಮಗ ದೇಶದ ಮಟ್ಟದಲ್ಲಿ ಐಎಫ್ಎಸ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವುದು ಅಪಾರ ಹೆಮ್ಮೆ ತಂದಿದ್ದು ಎಲ್ಲೆಡೆ ಹರ್ಶೋದ್ಧಾರ ವ್ಯಕ್ತವಾಗುತ್ತಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಬಸವರಾಜ್ ಅವರ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದು, ಊರಿನಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
Also Read: