Belagavi News :
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಹಂಚಿಕೆ ಕುರಿತ ಚರ್ಚೆ ಮತ್ತು ಗೊಂದಲದ ನಡುವೆಯೇ ಸಚಿವ ಕೃಷ್ಣ ಬೈರೇಗೌಡ ಮಹತ್ವವಾದ ಪ್ರತಿಕ್ರಿಯೆ ನೀಡಿದ್ದಾರೆ. ಜವಾಬ್ದಾರಿ ಸ್ಪಷ್ಟವಾಗಿದ್ದರೆ ಕೆಲಸ ಮಾಡಲು ಅನುಕೂಲವಾಗುತ್ತದೆ ಮತ್ತು ಸಂಪೂರ್ಣ ಜವಾಬ್ದಾರಿ ಒಬ್ಬರ ಕೈಯಲ್ಲಿದ್ದರೆ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರಾಭಿವೃದ್ಧಿ ಖಾತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಜವಾಬ್ದಾರಿ ಇದ್ದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಸಂಪೂರ್ಣ ಜವಾಬ್ದಾರಿ ಇದ್ದರೆ ಉತ್ತಮ ಫಲಿತಾಂಶ ತರಲು ಸಾಧ್ಯ. ದೆಹಲಿಯಲ್ಲಿ ಮುಖ್ಯಮಂತ್ರಿ ಜೊತೆ ಕೆಲವು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಇಂದು ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿಗಳೊಂದಿಗೆ ಸಭೆ ನಡೆಯುತ್ತಿದೆ" ಎಂದು ಹೇಳಿದರು.
ಅಸಮಾಧಾನ ಇಲ್ಲ, ಸ್ಪಷ್ಟತೆ ಬೇಕಷ್ಟೇ ಕೃಷ್ಣ ಬೈರೇಗೌಡ:
GBA (ಗ್ರೇಟರ್ ಬೆಂಗಳೂರು ಅಥಾರಿಟಿ) ಸಂಬಂಧಿತ ಖಾತೆ ಹಂಚಿಕೆ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
"ಮುಖ್ಯಮಂತ್ರಿ ಮತ್ತು ಪಕ್ಷ ನನ್ನ ಮೇಲೆ ಕಠಿಣ ಹಾಗೂ ಮಹತ್ವವಾದ ಜವಾಬ್ದಾರಿಯನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ದೊಡ್ಡ ಸವಾಲಿನ ಕೆಲಸ. ನಗರದ ಜನರ ನಿರೀಕ್ಷೆಗಳು ಹಾಗೂ ಪಕ್ಷದ ನಿರೀಕ್ಷೆಗಳು ಹೆಚ್ಚಿವೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವಾಗ ಸ್ವಷ್ಟತೆ ಇರಬೇಕು. ಖಾತೆಯೊಂದಿಗೆ ಅಕೌಂಟಬಿಲಿಟಿ ಮತ್ತು ಫಲಿತಾಂಶದ ಜವಾಬ್ದಾರಿಯೋ ಇರಬೇಕು" ಎಂದು ಹೇಳಿದರು.
ಅದೇ ವೇಳೆ, ಜವಾಬ್ದಾರಿ ಹಂಚಿಕೆ ಮತ್ತು ಅಧಿಕಾರ ವ್ಯಾಪ್ತಿಯ ಬಗ್ಗೆ ಸ್ಪಷ್ಟತೆ ಅಗತ್ಯವಿದೆ ಎಂಬುದನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದೇನೆ. ಈ ವಿಚಾರವನ್ನು ಮುಖ್ಯಮಂತ್ರಿ ಶಿಘ್ರದಲ್ಲೇ ಇತ್ಯರ್ಥಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಖಾತೆ ವಹಿಸಿಕೊಳ್ಳುವ ಕುರಿತು ಉತ್ತರಿಸದ ಸಚಿವ:
"ಗೊಂದಲ ನಿವಾರಣೆಯಾಗುವವರೆಗೆ ಖಾತೆ ವಹಿಸಿಕೊಳ್ಳುವುದಿಲ್ಲವೇ?" ಎಂಬ ಪ್ರಶ್ನೆಗೆ ಸಚಿವ ಕೃಷ್ಣ ಬೈರೇಗೌಡ ಯಾವುದೇ ಉತ್ತರ ನೀಡದೆ ತೆರಳಿದರು. ಇದರಿಂದ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗಳು ಆರಂಭವಾಗಿವೆ.
ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ:
ಇದೇ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
"ರಾಮಲಿಂಗಾ ರೆಡ್ಡಿಯವರು ಈಗಾಗಲೇ ಅಧಿಕಾರ ವಹಿತಿಕೊಂಡು ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾ ಸಚಿವರು ತಮ್ಮ ತಮ್ಮ ಖಾತೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ನಾವು ಎಲ್ಲರೂ ಜನ ಸೇವೆ ಮಾಡಲು ಬಂದವರು" ಎಂದು ಖಂಡ್ರೆ ಹೇಳಿದರು.
ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತ ಚರ್ಚೆಗಳು ಮುಂದುವರಿದಿರುವ ನಡುವೆಯೇ, ಮುಖ್ಯಮಂತ್ರಿ ನೀಡಲಿರುವ ಸ್ಪಷ್ಟಿಕರಣದತ್ತ ರಾಜಕೀಯ ವಲಯತ್ತ ಗಮನ ಕೇಂದ್ರೀಕೃತವಾಗಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾವ ಖಾತೆ ನೀಡಿದರು ಅದನ್ನು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುವ ಬದ್ಧತೆ ನಮ್ಮದು. ಅರಣ್ಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಹೊಸ ಜವಾಬ್ದಾರಿಯನ್ನೂ ಅದೇ ಸಮರ್ಥಯಿಂದ ನಿಭಾಯಿಸುತ್ತೇನೆ" ಎಂದು ಹೇಳಿದರು.
ರಸಗೊಬ್ಬರ ಕೊರತೆ ಬಗ್ಗೆ ಕೇಂದ್ರದ ವಿರುದ್ಧ ಅಸಮಾಧಾನ:
ರಾಜ್ಯದಲ್ಲಿ ರಸಗೊಬ್ಬರ ಪುರೈಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
"ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದ ಕೇವಲ ಶೇ. 30ರಷ್ಟು ರಸಗೊಬ್ಬರ ಮಾತ್ರ ಕೇಂದ್ರ ಸರ್ಕಾರ ಪೂರೈಕೆ ಮಾಡಿದೆ. ರಾಜ್ಯಗಳಿಗೆ ಅಗತ್ಯವಿರುವಷ್ಟು ರಸ ಗೊಬ್ಬರ ಒದಗಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಪ್ರಮಾಣದ ರಸ ಗೊಬ್ಬರವನ್ನು ಕೇಂದ್ರವು ತಕ್ಷಣ ಸರಬರಾಜು ಮಾಡಬೇಕು" ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸತ್ಯ ಲಭ್ಯವಿರುವ ರಸಗೊಬ್ಬರದ ಪ್ರಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವುದಾಗಿ ಅವರು ತಿಳಿಸಿದರು.
ಸಿ ಎಲ್ ಪಿ ಸಭೆ ಆತಂಕದಿಂದಲ್ಲ; ಜ್ವಲಂತ ವಿಚಾರಗಳ ಚರ್ಚೆಗೆ ಸಭೆ:
ಸಿ ಎಲ್ ಪಿ (Congress Legislature Party) ಸಭೆಯನ್ನು ಸರ್ಕಾರದ ಆತಂಕದ ಹಿನ್ನೆಲೆಯಲ್ಲಿ ಕರೆಯಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ಯಾವುದೇ ಆತಂಕ ಇಲ್ಲ. ಎಸ್ ಐ ಆರ್ ಸೇರಿದಂತೆ ಹಲವು ಜ್ವಲಂತ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಅದಕ್ಕಾಗಿ ಸಿ ಎಲ್ ಪಿ ಸಭೆ ಕರೆಯಲಾಗಿದೆ" ಎಂದು ಸ್ಪಷ್ಟಪಡಿಸಿದರು.
Also Read:
ಕ್ರಿಕೆಟ್ ಲೋಕದ ಲೆಜೆಂಡ್ ಕೇನ್ ವಿಲಿಯಮ್ಸ್ ನ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ