belagavi news :
ಆರ್ಎಸ್ಎಸ್ ನೊಂದಣಿ ವಿಚಾರ ಮತ್ತು ರಾಮ ಮಂದಿರದ ಹುಂಡಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಚರ್ಚೆಗಳ ನಡುವೆ ಬೆಳಗಾವಿಯಲ್ಲಿ ನಿನ್ನೆಯಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಸಭೆ ಆರಂಭವಾಗಿದೆ.
ಶುಕ್ರವಾರ ಇಲ್ಲಿನ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಆಯೋಜಿಸಿರುವ ಈ ಸಭೆಯು, ಸರಾಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ನೇತೃತ್ವದಲ್ಲಿ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸಮ್ಮುಖದಲ್ಲಿ ನಡೆಯುತ್ತಿದೆ. ಜುಲೈ 10, 11 ಮತ್ತು 12ರವರೆಗೆ ಸಭೆ ನಡೆಯಲಿದೆ.
ಸಭೆಯಲ್ಲಿ ಸಹ ಸರಕಾರ್ಯವಾಹಕರಾದ ಡಾ. ಕೃಷ್ಣ ಗೋಪಾಲ, ಸಿ.ಆರ್.ಮುಕುಂದ, ಅರುಣ್ ಕುಮಾರ್, ರಾಮದತ್ತ, ಅಲೋಕ್ ಕುಮಾರ್ ಹಾಗೂ ಅಕುಲ್ ಲಿಮಯೆ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಅಲ್ಲದೆ, ಅಖಿಲ ಭಾರತೀಯ ಕಾರ್ಯ ವಿಭಾಗದ ಪ್ರಮುಖರು ಮತ್ತು ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, 11 ಕ್ಷೇತ್ರಗಳ ಪ್ರತಿನಿಧಿಗಳು, 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು ಹಾಗೂ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ 130ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ.
ಮೂರು ದಿನಗಳ ಈ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯಲ್ಲಿ ಸಂಘದ ಮುಂದಿನ ಎರಡು ವರ್ಷದ ಕಾರ್ಯ ತಂತ್ರಕ್ಕೆ ರೂಪುರೇಷ ಸಿದ್ಧಪಡಿಸುವುದು ಪ್ರಮುಖ ಉದ್ದೇಶವಾಗಿದೆ. ಶಾಖೆಗಳ ವಿಸ್ತರಣೆ, ಸಂಘದ ಶತಮಾನೋತ್ಸವದ ಅಂಗವಾಗಿ ಬಾಕಿ ಉಳಿದಿರುವ ಕಾರ್ಯಕ್ರಮಗಳ ಅನುಷ್ಠಾನ, ಸೇವಾ ಚಟುವಟಿಕೆಗಳ ವಿಸ್ತರಣೆ ಹಾಗೂ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ರಾಷ್ಟ್ರೀಯ ಬೆಳವಣಿಗೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಮಾರ್ಚ್ 2026ರ ಬಳಿಕ ದೇಶಾದ್ಯಂತ ನಡೆದ ಸಂಘ ಶಿಕ್ಷಣ ವರ್ಗಗಳು, ತರಬೇತಿ ಶಿಬಿರಗಳು, ಶಾಖಾ ಚಟುವಟಿಕೆಗಳು ಮತ್ತು ವಿವಿಧ ಹಂತಗಳಲ್ಲಿ ಜಾರಿಗೊಂಡ ಕಾರ್ಯ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಸಭೆಯಲ್ಲಿ ಅವಲೋಕನ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಸಂಘಟನಾ ಬಲವರ್ಧನೆ, ಹೊಸ ಕಾರ್ಯಕರ್ತರ ಸೇರ್ಪಡೆ, ಯುವಜನರನ್ನು ಸಂಘದ ಚಟುವಟಿಕೆಗಳತ್ತ ಸೆಳೆಯುವ ಯೋಜನೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಘದ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನೀರಿಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ .
ಆರ್ಎಸ್ಎಸ್ ನ ಸಂಘಟನಾ ಚಟುವಟಿಕೆಗಳು, ಭವಿಷ್ಯದ ಕಾರ್ಯತಂತ್ರ ಮತ್ತು ಶತಮಾನೋತ್ಸವದ ಸಿದ್ಧತೆಗಳ ದೃಷ್ಟಿಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಸಭೆ ಮಹತ್ವದ್ದಾಗಿದ್ದು, ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಮುಂದಿನ ದಿನಗಳಲ್ಲಿ ಸಂಘದ ಕಾರ್ಯವೈಕರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ವರ್ಷವೂ 2026ರ ಅಕ್ಟೋಬರ್ 20ರಂದು ಸಮಾರೋಪಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಗೆ ವಿಶೇಷ ಮಹತ್ವ ಲಭಿಸಿದೆ. ಶತಮಾನೋತ್ಸವ ಅಂಗವಾಗಿ ಇದುವರೆಗೆ ಪೂರ್ಣಗೊಂಡಿರುವ ಕಾರ್ಯಕ್ರಮಗಳ ಪರಾಮರ್ಶೆ, ಬಾಕಿ ಉಳಿದಿರುವ ಕಾರ್ಯಕ್ರಮಗಳ ಸಿದ್ಧತೆ, ದೇಶಾದ್ಯಂತ ಜನ ಸಂಪರ್ಕ ಅಭಿಯಾನಕ್ಕೆ ವೇಗ ನೀಡುವುದು , ಸಾಮಾಜಿಕ ಸಾಮರಸ್ಯ ಬಲಪಡಿಸುವುದು, ಸೇವಾ ಚಟುವಟಿಕೆಗಳ ವಿಸ್ತರಣೆ ಹಾಗೂ ಸಂಘಟನಾ ಬೆಳವಣಿಗೆಗೆ ಸಂಬಂಧಿಸಿದ ಕಾರ್ಯಯೋಜನೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ.
ಇದರ ಜೊತೆಗೆ ಮುಂಬರುವ ಒಂದು ವರ್ಷದ ಸಂಘಟನಾ ಕಾರ್ಯತಂತ್ರ, ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ದೇಶಭಕ್ತಿ ಪ್ರವಾಸ ಕಾರ್ಯಕ್ರಮ, ವಿವಿಧ ರಾಜ್ಯಗಳಲ್ಲಿನ ಸಂಘಟನಾ ಬೆಳವಣಿಗೆಗಳು, ಶಾಖೆಗಳ ವಿಸ್ತರಣೆ ಹಾಗೂ ಕಾರ್ಯಕರ್ತರ ಸೇರ್ಪಡೆ ಹಾಗೂ ರಾಷ್ಟ್ರದ ಸಮಕಾಲಿನ ಸಾಮಾಜಿಕ ಮತ್ತು ರಾಷ್ಟ್ರೀಯ ವಿಚಾರಗಳ ಕುರಿತು ಸಂಘದ ನಿಲುವು ಮತ್ತು ಮುಂದಿನ ಕಾರ್ಯ ದಿಕ್ಸೂಚಿ ಬಗ್ಗೆ ಸಭೆಯಲ್ಲಿ ವಿಸ್ತೃತ ಚಿಂತನೆ ಮಂಥನ ನಡೆಯುವ ಸಾಧ್ಯತೆ ಇದೆ.
ಆರ್ಎಸ್ಎಸ್ ನ ಅತ್ಯಂತ ಮಹತ್ವದ ಸಂಘಟನಾ ಸಭೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಈ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಶತಮಾನೋತ್ಸವ ವರ್ಷದ ಉಳಿದ ಕಾರ್ಯಕ್ರಮಗಳಿಗೆ ದಿಕ್ಕು ನೀಡಲಿದ್ದು, ದೇಶಾದ್ಯಂತ ಸಂಘದ ಸಂಘಟನಾ ಚಟುವಟಿಕೆಗಳು, ಸೇವ ಕಾರ್ಯಗಳು ಮತ್ತು ಜನ ಸಂಪರ್ಕ ಅಭಿಯಾನಕ್ಕೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಸಂಘದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.