belaagvi news :
ರಾಮ ಮಂದಿರದಲ್ಲಿ ಕಾಣಿಕೆ ಕಳ್ಳತನ ನಡೆದಿದೆ ಎಂಬ ಆರೋಪದ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಕ್ರಿಯಿಸಿದ್ದು, ಈ ಘಟನೆ ಭಕ್ತರ ನಂಬಿಕೆ ಮತ್ತು ಭಾವನೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ಮಾಧ್ಯಮ ಒಂದು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಅಯೋಧ್ಯೆ ಮತ್ತು ರಾಮ ಜನ್ಮಭೂಮಿಯನ್ನು ಟೀಕಿಸುವ ಪ್ರತಿಪಕ್ಷಗಳ ನಡೆ ಸರಿಯಲ್ಲ ಎಂದು ಆರೋಪಿಸಿದರು. ರಾಮ ಮಂದಿರವು ಕೋಟ್ಯಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿದ್ದು, ಇಂತಹ ವಿಷಯಗಳು ರಾಜಕೀಯ ಮಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
ಇದೆ ವೇಳೆ ವಿರೋಧ ಪಕ್ಷಗಳ ವಿರುದ್ಧ, ವಿಶೇಷವಾಗಿ ಸಮಾಜವಾದಿ ಪಕ್ಷದ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು. ಸಮಾಜವಾದಿ ಪಕ್ಷವು ಈ ಹಿಂದೆ ಅನುಸರಿಸಿದ್ದ ನಿಲುವುಗಳು ಮತ್ತು ಈಗ ಧಾರ್ಮಿಕ ನಂಬಿಕೆಗಳ ಕುರಿತು ತೋರಿಸುತ್ತಿರುವ ರಾಜಕೀಯ ಧೋರಣೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಮ ಮಂದಿರ ಮತ್ತು ಅಯೋಧ್ಯೆಯ ವಿಚಾರದಲ್ಲಿ ಭಕ್ತರ ಭಾವನೆಗಳಿಗೆ ಗೌರವ ನೀಡಬೇಕು ಎಂದು ಒತ್ತಿ ಹೇಳಿದ ಅವರು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ : ಟ್ರಸ್ಟ್ ಮನವಿ ಮೇರೆಗೆ ಎಸ್ಐಟಿ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಯೋಗಿ
ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ಕಾಣಿಕೆ ಕಳ್ಳತನದ ಘಟನೆ ನಮ್ಮಂತಹ ರಾಮ ಭಕ್ತರ ನಂಬಿಕೆಗೆ ಖಂಡಿತವಾಗಿಯೂ ನೋವು ತಂದಿದೆ. ರಾಮ ಮಂದಿರ ಟ್ರಸ್ಟ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರವು ಅದರ ಆಡಳಿತಾತ್ಮಕ ವ್ಯವಹಾರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿಲ್ಲ. ಟ್ರಸ್ಟ್ ತನಿಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರವು ಎಸ್ಐಟಿ ರಚಿಸಿದೆ" ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ ಅವರು, ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ
ನೀಡಿದ್ದಾರೆ. ಅಲ್ಲದೆ, ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಮಮಂದಿರದಂತಹ ಭಕ್ತಿಯ ಕೇಂದ್ರದಲ್ಲಿ ನಡೆದಿರುವ ಯಾವುದೇ ಅಕ್ರಮವನ್ನು ಸಹಿಸಲಾಗುವುದಿಲ್ಲ. ತನಿಖೆಯ ಮೂಲಕ ಸತ್ಯಾಂಶ ಹೊರಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಮ ಮಂದಿರ ಕಾಣಿಕೆ ಪ್ರಕರಣ : 'ಹಿಂದೂಗಳ ನಂಬಿಕೆಯನ್ನು ಕೆಣಕಬೇಡಿ' ಎಂದ ಯೋಗಿ ಆದಿತ್ಯನಾಥ
ರಾಮ ಮಂದಿರದ ಕಾಣಿಕೆ ಕಳ್ಳತನ ಪ್ರಕರಣದ ಕುರಿತು ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಘಟನೆಯನ್ನು ಬಳಸಿಕೊಂಡು ಅಯೋಧ್ಯೆ, ರಾಮ ಜನ್ಮ ಭೂಮಿ ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಕೆಣಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
"ಪ್ರಕರಣದಲ್ಲಿ ಬಂಧನಗಳ ಜೊತೆಗೆ ನೈತಿಕ ಹೊಣೆಗಾರಿಕೆಯ ಆಧಾರದ ಮೇಲೆ ಟ್ರಸ್ಟ್ನ ಮಾಜಿ ಪ್ರಧಾನಿ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ರಾಜೀನಾಮೆ ನೀಡಿದ್ದಾರೆ. ಆದರೆ,ಈ ಘಟನೆಯನ್ನು ಆಧಾರವಾಗಿರಿಸಿಕೊಂಡು ಅಯೋಧ್ಯೆ, ರಾಮ ಜನ್ಮಭೂಮಿ ಮತ್ತು ಹಿಂದೂಗಳ ನಂಬಿಕೆಗೆ ಧಕ್ಕೆ ತರುವ ಪ್ರಯತ್ನ ಮಾಡುವುದು ಸರಿಯಾದ ಕ್ರಮವಲ್ಲ" ಎಂದು ಯೋಗಿ ಆದಿತ್ಯನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರದ ದೇಣಿಗೆಗಳ ದುರುಪಯೋಗದ ಆರೋಪಗಳು ಜೂನ್ ಮೊದಲ ವಾರದಲ್ಲಿ ಬೆಳಕಿಗೆ ಬಂದಿದ್ದವು. ಬಳಿಕ ಉತ್ತರ ಪ್ರದೇಶ ಸರ್ಕಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿತ್ತು.
ಎಸ್ ಐ ಟಿ ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಜೂನ್ 25ರಂದು ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ ದೇವಾಲಯದ ದೇಣಿಗೆ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ 8 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಇದರ ನಡುವೆ ರಾಮಮಂದಿರದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.