Belagavi News :
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (CJP) ಪ್ರಸ್ತಾವಿತ " ಚಲೋ ಸಂಸದ್" ಮೆರವಣಿಗೆಗೂ ಮುನ್ನ, ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರದ ಮುಂದೆ ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ.
ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಮ್ ವಾಂಗ್ಚುಕ್, ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳಿಗೆ ಸರ್ಕಾರ ಹೊಣೆ ಹೊತ್ತು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂಬುದು ತಮ್ಮ ಮೊದಲ ಬೇಡಿಕೆಯನ್ನು ತಿಳಿಸಿದ್ದಾರೆ.
ಎರಡನೇ ಷರತ್ತಾಗಿ, ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಸಮಗ್ರ ಚರ್ಚೆ ನಡೆಸುವುದಾಗಿ ರಾಜಕೀಯ ನಾಯಕರು ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೂರನೇ ಬೇಡಿಕೆಯಲ್ಲಿ, ಆರೋಗ್ಯ ಕಾರಣಗಳಿಂದ ತಾವು ಸಂಸತ್ ವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಪ್ರಮುಖ ರಾಜಕೀಯ ನಾಯಕರು ಸಫ್ದರ್ ಜಂಗ್ ಆಸ್ಪತ್ರೆಗೆ ಬಂದು ತಮ್ಮ ಷರತ್ತುಗಳನ್ನು ಅಂಗೀಕರಿಸಿರುವುದಾಗಿ ಸಾರ್ವಜನಿಕವಾಗಿ ತಿಳಿಯಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಆಸ್ಪತ್ರೆಯಿಂದ ಹಂಚಿಕೊಂಡಿದ್ದ ಸಂದೇಶದಲ್ಲಿ, ವಾಂಗ್ಚುಕ್ ಈ ಹೋರಾಟವನ್ನು " ಭಾರತದ ಎರಡನೇ ಸ್ವಾತಂತ್ರ್ಯ ಚಳುವಳಿ" ಎಂದು ಬಣ್ಣಿಸಿ, " ಅನ್ಯಾಯದಿಂದ ಸ್ವಾತಂತ್ರ್ಯ" ಮತ್ತು " ಭಯದಿಂದ ಸ್ವಾತಂತ್ರ್ಯ"ಕ್ಕಾಗಿ ಜನರು ಒಂದಾಗಬೇಕು ಎಂದು ಕರೆ ನೀಡಿದ್ದರು. ತಮ್ಮ ಬೆಂಬಲಿಗರು ಶಾಂತಿಯುತವಾಗಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದರು.
ಇದೇ ವೇಳೆ, ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಕೂಡ, ಶಿಕ್ಷಣ ವ್ಯವಸ್ಥೆಯ ಹೊಣೆಗಾರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುವ ಭರವಸೆಯನ್ನು ರಾಜಕೀಯ ನಾಯಕರು ಆಸ್ಪತ್ರೆಯಲ್ಲೇ ನೀಡಿದರೆ, ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಿದ್ದಾರೆ ಎಂದು ತಿಳಿಸಿದ್ದರು.
ಸೋನಮ್ ವಾಂಗ್ಚುಕ್ ಅವರ ಆರೋಗ್ಯದಲ್ಲಿ ಏರಿಳಿತ ಕಂಡ ಹಿನ್ನೆಲೆಯಲ್ಲಿ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ತಂಡದಿಂದ 24 ಗಂಟೆಗಳ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯ ವೈದ್ಯರು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದ್ದಾರೆ.