belagavi news :
ರಾಮನಗರ: ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ 'ಬಿಡದಿ ಸಮಗ್ರ ಟೌನ್ ಶಿಪ್ - AI ಸಿಟಿ'ಯೋಜನೆಗಾಗಿ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಬಿಡದಿ ಭಾಗದ ರೈತರು ಬೃಹತ್ ಪತ್ರ ಚಳವಳಿ ಆರಂಭಿಸಿದ್ದಾರೆ.
ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು ಮಧ್ಯ ಪ್ರವೇಶಕ್ಕೆ ಮನವಿ ಮಾಡಿದ್ದರೆ ಬೆನ್ನಲ್ಲೇ, ರೈತರು ಇದೇ ಹಾದಿ ಅನುಸರಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಿಡದಿ ಸೀಮೆಯ 100ಕ್ಕೂ ಹೆಚ್ಚು ಜನರು ಇಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು ಭೂಸ್ವಾಧೀನ ಪ್ರಕ್ರಿಯೆಗೆ ತಕ್ಷಣವೇ ತಡೆ ನೀಡುವಂತೆ ಆಗ್ರಹಿಸಿದ್ದಾರೆ. ಈ ಬೆಳವಣಿಗೆ ಯೋಜನೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.
ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಸಂಪೂರ್ಣ ಯೋಜನೆಯನ್ನು ಕೈ ಬಿಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬಿಡದಿ ಭಾಗದಲ್ಲಿ ಸುಮಾರು 9 ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಟೌನ್ ಶಿಪ್ ಯೋಜನೆಗಾಗಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ತೀವ್ರ ಖಂಡನೀಯ ಎಂದು ರೈತರು ಹೇಳಿದ್ದಾರೆ. ಬೆಂಗಳೂರು ಸುತ್ತಮುತ್ತ ಈಗಾಗಲೇ ಅನೇಕ ಅಪಾರ್ಟ್ ಮೆಂಟ್ ಗಳು, ಲೇಔಟ್ ಗಳು ಹಾಗೂ ವಸಂತಿ ಯೋಜನೆಗಳು ಖಾಲಿ ಉಳಿದಿರುವ ಸಂದರ್ಭದಲ್ಲಿ ಮತ್ತಷ್ಟು ಕೃಷಿ ಭೂಮಿಯನ್ನು ನಗರೀಕರಣದ ಹೆಸರಿನಲ್ಲಿ ಸ್ವಾದಿನ ಪಡಿಸಿಕೊಳ್ಳುವುದು ಸಮರ್ಥನೀಯವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆಯೂ ಇದೆ ಯೋಜನೆಗೆ ರೈತರು ಮತ್ತು ಸ್ಥಳೀಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಕೈ ಬಿಡಲಾಗಿತ್ತು ಎಂದು ಉಲ್ಲೇಖಿಸಿರುವ ರೈತ ಸಂಘದ ಸ್ಥಳೀಯ ಮುಖಂಡ ಚಂದ್ರಶೇಖರ್, ಈಗ ಮತ್ತೆ ಅದೇ ಯೋಜನೆಯನ್ನು ಮುಂದಿಟ್ಟಿರುವುದು ರೈತರ ಭಾವನೆಗಳಿಗೆ ವಿರುದ್ಧವಾದ ಕ್ರಮ ಎಂದು ಪತ್ರ ಚಳವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ಪ್ರಮುಖ ಆರೋಪಗಳು: ರೈತರ ಪ್ರತಿಭಟನೆಗೆ ಜೆಡಿಎಸ್ ಸಹ ಕೈಜೋಡಿಸಿದ್ದು, ಸರ್ಕಾರದ ನಿಲುವನ್ನು ವಿರೋಧಿಸಿದೆ. ಯೋಜನೆಯನ್ನು ಕೈ ಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದೆ. ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಸರಕಾರದ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾರೆ. ಅವುಗಳನ್ನು ಈ ಕೆಳಗಿನಂತಿವೆ.
ಕಾಯ್ದೆ ಉಲ್ಲಂಘನೆ ಆರೋಪ: 2013ರ ಭೂಸ್ವಾಧೀನ ಕಾಯ್ದೆಯ ನಿಯಮಾವಳಿಗಳನ್ನು ಉಲ್ಲಂಘಿಸಿ, ಯಾವುದೇ ಸಾರ್ವಜನಿಕ ಸಭೆ ಅಥವಾ ಸಮಾಲೋಚನೆ ನಡೆಸದೆ ಬಲವಂತವಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಡ ರೈತರಿಗೆ ಅನ್ಯಾಯ: ಈ ಭೂ ಸ್ವಾದೀನ ಪ್ರಕ್ರಿಯೆಯಿಂದ ಬಾಧಿತರಾಗುತ್ತಿರುವವರಲ್ಲಿ ಶೇ. 82 ಕ್ಕೂ ಹೆಚ್ಚು ಮಂದಿ ಸಣ್ಣ ಹಿಡುವಳಿದಾರರು, ದಲಿತರು ಹಾಗೂ ಹಿಂದುಳಿದ ವರ್ಗದ ವರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಇದರಿಂದ ಬಡ ರೈತರ ಜೀವನೊಪಾಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.
ರಿಯಲ್ ಎಸ್ಟೇಟ್ ದಂಧೆ ಆರೋಪ: ಹಣಕಾಸು ಇಲಾಖೆಯ ತೀವ್ರ ವಿರೋಧದ ನಡುವೆಯೂ ಹುಡ್ಕೋ (HUDCO) ಮೂಲಕ ಭಾರಿ ಸಾಲ ಪಡೆದು, ರೈತರ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಲಾಭಕ್ಕಾಗಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನಲೆ ರೈತರ ಪತ್ರ ಚಳವಳಿ ಮತ್ತಷ್ಟು ತೀವ್ರಗೊಂಡಿದ್ದು , ಸರ್ಕಾರ ಕೂಡಲೇ ಅಧಿಸೂಚನೆ ಹಿಂಪಡೆಯದಿದ್ದರೆ ಜೂನ್ 21ರಂದು ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಹಾಗೂ ರೈತರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
Also Read: