Belagavi News:
ಕಠ್ಮಂಡು (ನೇಪಾಳ): ಮೌಂಟ್ ಎವರೆಸ್ಟ್ ಶಿಖರ ಏರಿದ ಇಬ್ಬರು ಭಾರತೀಯ ಪರ್ವತಾರೋಹಿಗಳು ಕೆಳಗಿಳಿಯುರುವ ವೇಳೆ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಮೃತಪಟ್ಟ ಪರ್ವತಾರೋಹಿಗಳು ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಶಿಖರಾರೋಹಣ ಪೂರ್ಣಗೊಳಿಸಿದ ಬಳಿಕ ಇಳಿಯುವಾಗ ಇಬ್ಬರು ತೀವ್ರ ದಣಿವಿಗೆ ಒಳಗಾಗಿದ್ದರು. ಮಾರ್ಗದರ್ಶಕರು ಅವರನ್ನು ರಕ್ಷಿಸಲು ಪ್ರಯತ್ನಿಸಿದರು ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಸಂದೀಪ್ ಅರೆ ಬುಧವಾರ ಮೌಂಟ್ ಎವರೆಸ್ಟ್ ಶಿಖರ ತಲುಪಿದ್ದರೆ, ಅರುಣ್ ಕುಮಾರ್ ತಿವಾರಿ ಗುರುವಾರ ಸಂಜೆ ಸುಮಾರು 5:30ರ ವೇಳೆಗೆ ಶಿಖರಾರೋಹಣ ಯಶಸ್ವಿಗೊಳಿಸಿದ್ದರು. ಆದರೆ ಗುರುವಾರವೇ ಸಂದೀಪ್ ಅರೆ ಮೃತಪಟ್ಟಿದ್ದು, ತಿವಾರಿ ಯಾವಾಗ ಸಾವನ್ನಪ್ಪಿದರೂ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ನೇಪಾಳ ಎಕ್ಸ್ ಪೆಡಿಷನ್ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ತಿಳಿಸಿದ್ದಾರೆ.
ಈ ಘಟನೆ ಪರ್ವತಾರೋಹಣ ವಲಯದಲ್ಲಿ ದುಃಖ ಮತ್ತು ಆತಂಕಕ್ಕೆ ಕಾರಣವಾಗಿದೆ.
ಮೌಂಟ್ ಎವರೆಸ್ಟ್ ಶಿಖರಾರೋಹಣದಲ್ಲಿ ಭಾರತೀಯ ಪರ್ವತಾರೋಹಿಗಳು ಹೊಸ ಸಾಧನೆ ಮಾಡುತ್ತಿದ್ದ ನಡುವೆಯೇ ಇಬ್ಬರು ಭಾರತೀಯರ ಸಾವಿನ ದುರ್ಘಟನೆ ಸಂಭವಿಸಿದೆ.
ಬುಧವಾರ ಸಂದೀಪ್ ಅರೆ ಸೇರಿದಂತೆ ಮೂವರು ಭಾರತೀಯರು 8,848,86 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ್ದರು. ಆ ದಿನ ಒಟ್ಟು 274 ಪರ್ವತಾರೋಹಿಗಳು ಶಿಖರ ತಲುಪಿದ್ದು, ಇಂದು ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಎವರೆಸ್ಟ್ ಏರಿದ ಹೊಸ ದಾಖಲೆಯಾಗಿದೆ.
ತುಳಸಿ ರೆಡ್ಡಿ ಪಾಲ್ಪುನೂರಿ ಮತ್ತು ಅಜಯ್ ಪಾಲ್ ಸಿಂಗ್ ಧಲಿವಲ್ ಶಿಖರ ತಲುಪಿದ ಇತರ ಭಾರತೀಯ ಪರ್ವತಾರೋಹಿಗಳಾಗಿದ್ದಾರೆ. ಮರುದಿನವಾದ ಗುರುವಾರ ಭಾರತದ ಲಕ್ಷ್ಮಿಕಾಂತ್ ಮಂಡಲ ಕೂಡ ವಿಶ್ವದ ಅತಿ ಎತ್ತರದ ಶಿಖರವನ್ನು ಯಶಸ್ವಿಯಾಗಿ ಏರಿದ್ದರು.
ಆದರೆ, ಶಿಖರಾರೋಹಣದ ಬಳಿಕ ಕೆಳಗಿಳಿಯುವ ವೇಳೆ ಸಂದೀಪ್ ಅರೆ ಮತ್ತು ಅರುಣ್ ಕುಮಾರ್ ತಿವಾರಿ ಮೃತ ಪಟ್ಟಿರುವುದು ಪರ್ವತಾರೋಹಣ ವಲಯದಲ್ಲಿ ದುಃಖ ಮೂಡಿಸಿದೆ.
Also Read:
ಜಪಾನ್ ಮಾವಿಗೆ ಟಕ್ಕರ್ ಕೊಟ್ಟ ಬೀದರ್ ರೈತನ ವಿಶೇಷ ಬೆಳೆ