Belagavi News:
ಇರಾನ್ ಮೇಲೆ 2ನೇ ಸುತ್ತಿನ ದಾಳಿ ನಡೆಸಿದ ಅಮೆರಿಕ: ಕ್ಯಾನ್ಸರ್ ಆಸ್ಪತ್ರೆ ಬಳಿ ಕ್ಷಿಪಣಿ ದಾಳಿ ನಡೆದಿದೆ ಎಂದ ಟೆಹ್ರಾನ್
ಇರಾನ್ ವಿರುದ್ಧ ಅಮೆರಿಕ ತನ್ನ ವಾಯುದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಿರುವುದಾಗಿ ವರದಿಯಾಗಿದೆ. ಇದೇ ವೇಳೆ, ಬಹ್ರೇನ್ ಮತ್ತು ಕುವೈತ್ ಗುರಿಯಾಗಿಸಿಕೊಂಡು ಇರಾನ್ ಪ್ರತಿದಾಳಿ ನಡೆಸಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ. ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟೆಹ್ರಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ವಾಯು ವಾಯುದಾಳಿಗಳು ನಡೆದಿವೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.
ಇರಾನ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವಾಲಯದ ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಹುಸೈನ್ ಕರ್ಮನ್ ಪುರ್ ಅವರ ಪ್ರಕಾರ, ಟೆಹ್ರಾನ್ ನ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಬೋಗ್ಹಾಯಿ ಆಸ್ಪತ್ರೆ - 2 ಸಮೀಪ ಕ್ಷಿಪಣಿ ದಾಳಿ ನಡೆದಿದೆ. ಈ ಘಟನೆಯು ನಾಗರಿಕರ ಸುರಕ್ಷತೆ ಕುರಿತು ಹೊಸ ಆತಂಕಕ್ಕೆ ಕಾರಣವಾಗಿದೆ.
ಇದರ ನಡುವೆ, ಉತ್ತರ ಇರಾನ್ ನ ಹಲವು ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಅಮೆರಿಕ ಸೇನೆ (CENTCOM) ನೀಡಿರುವ ಮಾಹಿತಿಯಂತೆ, ಕುರಾಕಾವ್ ಧ್ವಜ ಹೊಂದಿದ್ದ ಖಾಲಿ ತೈಲ ಟ್ಯಾಂಕರ್ ಎಂ/ಟಿ ಬೆಲ್ಮಾ ಇರಾನ್ ನ ಖಾರ್ಗ್ ದ್ವೀಪದ ಸಮೀಪ ಅಮೇರಿಕದ ದಿಗ್ಬಂಧನವನ್ನು ಉಲ್ಲಂಘಿಸಲು ಪ್ರಯತ್ನಿಸಿದ ಹಿನ್ನೆಲೆ, ಹಲವು ಎಚ್ಚರಿಕೆಗಳ ಬಳಿಕ ಹೆಲ್ ಪೈರ್ ಕ್ಷಿಪಣಿಯಿಂದ ಅವರ ಸ್ಮೋಕ್ ಸ್ಟ್ಯಾಕ್ ಗೆ ಹೊಡೆದು ನಿಷ್ಕ್ರಿಯಗೊಳಿಸಲಾಗಿದೆ.
ಅಮೆರಿಕ ಪಡೆಗಳು ಗ್ರೇಟರ್ ಟಂಬ್ ದ್ವೀಪ ಸೇರಿದಂತೆ ದಕ್ಷಿಣ ಇರಾನ್ ನ ಹಲವು ಪ್ರದೇಶಗಳ ಮೇಲು ದಾಳಿ ನಡೆಸಿವೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್ ತೊಂದರೆ ಉಂಟುಮಾಡುವುದನ್ನು ತಡೆಯುವ ಉದ್ದೇಶದಿಂದ ಈ ಕಾರ್ಯಚರಣೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಬಂದರ್ ಅಬ್ಬಾಸ್, ಕ್ವೆಶ್ಮ್ ದ್ವೀಪ, ಚಾಬಹಾರ್ ಹಾಗೂ ಸಿರಿಕ್ ಬಂದರುಗಳ ಮೇರು ದಾಳಿ ನಡೆದಿರುವುದಾಗಿ ವರದಿಗಳು ಹೇಳಿವೆ.
ಇರಾನ್ ನಿಂದಲೂ ಪ್ರತಿದಾಳಿ; ಬಹ್ರೇನ್, ಕುವೈತ್ ನಲ್ಲಿರುವ ಅಮೆರಿಕ ತಾಣಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ
ಅಮೆರಿಕದ ವಾಯುದಾಳಿಗೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿರುವುದಾಗಿ ವರದಿಯಾಗಿದೆ. ಬಹ್ರೇನ್ ಮತ್ತು ಕುವೈತ್ ನಲ್ಲಿರುವ ಅಮೆರಿಕದ ಸೈನಿಕ ತಾಣಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ದಾಳಿಯ ಹಿನ್ನೆಲೆಯಲ್ಲಿ ಬಹ್ರೇನ್ ನಲ್ಲಿ ಎಚ್ಚರಿಕೆ ಸೈರನ್ ಗಳು ಮೊಳಗಿದ್ದು, ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹಲವು ಡ್ರೋನ್ ಗಳನ್ನು ತಡೆದಿರುವುದಾಗಿ ವರದಿಗಳು ತಿಳಿಸಿವೆ.
ಇರಾನ್ ನ ಇಸ್ಲಾಮಿಕ್ ರೆಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಕ್ತಾರ ಬ್ರಿಗೇಡಿಯರ್ ಜನರಲ್ ಹುಸೈನ್ ಮೊಹಮ್ಮದಿ, ಅಮೆರಿಕದ ಕ್ರಮಗಳಿಗೆ ತಕ್ಕ ಪ್ರತಿಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಅಮೆರಿಕದ ಸೈನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.