BELAGAVI NEWS :
ತಿರುಮಲ : ಜಗತ್ಪ್ರಸಿದ್ಧ ಹಿಂದೂಗಳ ಪವಿತ್ರ ಯಾತ್ರ ಸ್ಥಳ ಹಾಗೂ 'ಭೂ ವೈಕುಂಠ' ಎಂದೆ ಕರೆಯಲಾಗುವ ತಿರುಪತಿಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಗಂಟಗಟ್ಟಲೆ ಕಾಯುವ ಪರಿಸ್ಥಿತಿ ಇರುವುದರಿಂದ, ಇದನ್ನೇ ದುರುಪಯೋಗಪಡಿಸಿಕೊಂಡು ಕೆಲಸಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಭಕ್ತರಿಗೆ ಎಚ್ಚರಿಕೆ ನೀಡಿದ್ದು, ದೇವರ ದರ್ಶನ, ವಸತಿ, ಅರ್ಜಿತ ಸೇವೆಗಳು ಹಾಗೂ ಇತರ ಟಿಟಿಡಿ ಸೇವೆಗಳನ್ನು ಪಡೆಯಲು ಅಧಿಕೃತ ಟಿಟಿಡಿ ವೆಬ್ಸೈಟ್ ಮೂಲಕ ಮಾತ್ರ ಬುಕಿಂಗ್ ಮಾಡುವಂತೆ ಮನವಿ ಮಾಡಿದೆ.
ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ.ವೆಂಕಯ್ಯ ಚೌದರಿ ಅವರು, ನಕಲಿ ವೆಬ್ಸೈಟ್ಗಳು, ಅನಧಿಕೃತ ಏಜೆಂಟ್ ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಮಾಹಿತಿ ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ನಂಬದಂತೆ ಭಕ್ತರಿಗೆ ಸೂಚಿಸಿದ್ದಾರೆ.
ಭಕ್ತರು ಟಿಕೆಟ್ ಬುಕಿಂಗ್, ವಸತಿ ವ್ಯವಸ್ಥೆ ಅಥವಾ ಇತರೆ ಸೇವೆಗಳನ್ನು ಪಡೆಯುವಾಗ ಅಧಿಕೃತ ಮೂಲಗಳನ್ನು ಮಾತ್ರ ಬಳಸಬೇಕು. ಅನಧಿಕೃತ ವ್ಯಕ್ತಿಗಳಿಗೆ ಹಣ ಪಾವತಿಸುವುದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಟಿಟಿಡಿ ತಿಳಿಸಿದೆ.
ತಿರುಪತಿ ಯಾತ್ರೆಯ ವೇಳೆ ಭಕ್ತರ ಸುರಕ್ಷತೆ ಮತ್ತು ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ ಟಿಟಿಡಿ ಎಚ್ಚರಿಕೆ ಕ್ರಮ ಕೈಗೊಂಡಿದೆ.
ತಿರುಪತಿ ದರ್ಶನಕ್ಕೆ ಅಧಿಕೃತ ವೆಬ್ಸೈಟ್ ಮಾತ್ರ ಬಳಸಿ: ಟಿಟಿಡಿ ಭಕ್ತರಿಗೆ ಸೂಚನೆ
ತಿರುಪತಿ ದರ್ಶನ ಮತ್ತು ಇತರ ಸೇವೆಗಳಿಗಾಗಿ ಭಕ್ತರು ಅಧಿಕೃತ ಟಿಟಿಡಿ ವೆಬ್ಸೈಟ್ ನ್ನೇ ನಂಬುವಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮನವಿ ಮಾಡಿದ್ದಾರೆ. ದರ್ಶನ ಮತ್ತು ವಸತಿ ಬುಕಿಂಗ್ ಗಳ ಸ್ಥಿತಿ, ಟಿಕೆಟ್ ಬಿಡುಗಡೆ ವೇಳಾಪಟ್ಟಿ, ರದ್ದಾದ ಟಿಕೆಟ್ಗಳ ಲಭ್ಯತೆ, ವಿವಿಧ ವರ್ಗಗಳ ದರ್ಶನ ವಿವರಗಳು ಹಾಗೂ ಪ್ರಸ್ತುತ ಕಾಯುವ ಸಮಯದ ಕುರಿತು ನವೀಕರಿಸಿದ ಮಾಹಿತಿಯನ್ನು ಟಿಟಿಡಿಯ ಅಧಿಕೃತ ವೆಬ್ಸೈಟ್ ನಿಯಮಿತವಾಗಿ ಒದಗಿಸುತ್ತದೆ ಎಂದು ಹೆಚ್ಚುವರಿ ಕಾರ್ಯ ನಿರ್ವಾಹಕ ಅಧಿಕಾರಿ ಚ.ವೆಂಕಯ್ಯ ಚೌಧರಿ ತಿಳಿಸಿದ್ದಾರೆ.
ಭಕ್ತರು ತಿರುಮಲ ಯಾತ್ರೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯುವಾಗ ಅನಧಿಕೃತ ವೆಬ್ಸೈಟ್ಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯನ್ನು ಅವಲಂಬಿಸಬಾರದು ಎಂದು ಟಿಟಿಡಿ ಸೂಚಿಸಿದೆ.
ಇದಲ್ಲದೆ, ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಮೂಲಕ ದರ್ಶನ, ಸೇವೆಗಳು ಹಾಗೂ ಇತರ ಪ್ರಮುಖ ಮಾಹಿತಿಗಳನ್ನು ಭಕ್ತರು ಪಡೆಯಬಹುದು ಎಂದು ಹೆಚ್ಚುವರಿ ಇಒ ತಿಳಿಸಿದ್ದಾರೆ.
ನಕಲಿ ಬುಕಿಂಗ್ ಗಳು ಮತ್ತು ವಂಚನೆ ಪ್ರಕರಣಗಳನ್ನು ತಡೆಯಲು ಭಕ್ತರು ಅಧಿಕೃತ ಮೂಲಗಳ ಮೂಲಕವೇ ಟಿಕೆಟ್ ಹಾಗೂ ಸೇವೆಗಳನ್ನು ಪಡೆಯುವಂತೆ ಟಿಟಿಡಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ತಿರುಪತಿ ಸೇವೆಗಳಿಗೆ ಮಧ್ಯವರ್ತಿಗಳನ್ನು ನಂಬಬೇಡಿ : ಟಿಟಿಡಿ ಎಚ್ಚರಿಕೆ, ಸಹಾಯಕ್ಕಾಗಿ ಈ ನಂಬರ್ ಸಂಪರ್ಕಿಸಿ
ತಿರುಪತಿ ದರ್ಶನ, ಟಿಕೆಟ್ ಹಾಗೂ ವಸತಿ ಸೇವೆಗಳಿಗೆ ಸಂಬಂಧಿಸಿದ ಯಾವುದೇ ಅನುಮಾನ ಅಥವಾ ಪ್ರಶ್ನೆಗಳಿದ್ದರೆ ಭಕ್ತರು ಟಿಟಿಡಿ ಕಾಲ್ ಸೆಂಟರ್ ಸಂಖ್ಯೆ 155257 ಅನ್ನು ಸಂಪರ್ಕಿಸಬಹುದು ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತಿಳಿಸಿದೆ.
ದರ್ಶನ್ ಅಥವಾ ವಸತಿ ವ್ಯವಸ್ಥೆ ಮಾಡಿ ಕೊಡುವುದಾಗಿ ಹೇಳುವ ಮಧ್ಯವರ್ತಿಗಳು ಹಾಗೂ ಅನಧಿಕೃತ ವ್ಯಕ್ತಿಗಳನ್ನು ನಂಬದಂತೆ ಟಿಟಿಡಿ ಭಕ್ತರಿಗೆ ಎಚ್ಚರಿಕೆ ನೀಡಿದೆ. ಕೆಲವರು ನಕಲಿ ವೆಬ್ಸೈಟ್ ಗಳನ್ನು ಸೃಷ್ಟಿಸಿ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ.ವೆಂಕಯ್ಯ ಚೌದರಿ ತಿಳಿಸಿದ್ದಾರೆ.
ಭಕ್ತರನ್ನು ದಾರಿ ತಪ್ಪಿಸುವಂತಹ ನಕಲಿ ವೆಬ್ಸೈಟ್ಗಳು, ಅನಧಿಕೃತ ಬುಕಿಂಗ್ ಗಳು ಅಥವಾ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಟಿಟಿಡಿ ಜಾಗೃತ ಇಲಾಖೆಗೆ 9866898630 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ತಿರುಮಲದಲ್ಲಿ ದರ್ಶನ ಸೇರಿದಂತೆ ಎಲ್ಲಾ ಸೇವೆಗಳಲ್ಲಿ ಪಾರದರ್ಶಕತೆ ಕಾಪಾಡುವುದು ಮತ್ತು ಯಾತ್ರಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಟಿಟಿಡಿ ಯ ಪ್ರಮುಖ ಆದ್ಯತೆಯಾಗಿದೆ ಎಂದು ಹೆಚ್ಚುವರಿ ಇಒ ಹೇಳಿದ್ದಾರೆ. ಭಕ್ತರು ಟಿಟಿಡಿ ಯ ಅಧಿಕೃತ ಮಾರ್ಗಗಳ ಮೂಲಕ ಮಾತ್ರ ಟಿಕೆಟ್, ವಸತಿ ಹಾಗೂ ಇತರ ಸೇವೆಗಳನ್ನು ಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.