Belagavi News:
ಬೆಂಗಳೂರು (ಮೇ 11): ಪ್ರಧಾನಿ ನರೇಂದ್ರ ಮೋದಿ ಅವರು (PM Narendra Modi) ನಿನ್ನೆ (ಮೇ 10) ನಡೆದ ಕಾರ್ಯಕ್ರಮವೊಂದರಲ್ಲಿ ನಾಗರಿಕರಿಗೆ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಂತೆ ಮನವಿ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿಯ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ, ಅದರ ಹಿಂದಿನ ಕಾರಣ ಏನು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭವಿಸಿವೆ. ಚಿನ್ನ ಖರೀದಿ ಕುರಿತ ಈ ಮನವಿಯ ಉದ್ದೇಶ ಮತ್ತು ಅದರ ಆರ್ಥಿಕ ಹಿನ್ನೆಲೆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಕುರಿತು ಆರ್ಥಿಕ ತಜ್ಞ ರುದ್ರಮೂರ್ತಿ ಪ್ರತಿಕ್ರಿಯೆ ನೀಡಿದ್ದು , ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಲೋಚನೆಯೊಂದಿಗೆ ಈ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ತಪ್ಪು ಹುಡುಕುವ ಬದಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಹಾಗೂ ದೇಶದ ಹಿತಕ್ಕಾಗಿ ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ವಿರೋಧ ಪಕ್ಷಗಳು ಅಥವಾ ಸಾಮಾನ್ಯ ಜನರು ಇದನ್ನು ಟೀಕಿಸುವುದನ್ನು ಬಿಟ್ಟು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ರುದ್ರಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಕಚ್ಚಾ ತೈಲ ನಂತರ ಮತ್ತು ಚಿನ್ನ ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ಮನವಿ ಮಾಡಿದ್ದಾರೆ ಎಂದು ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಾರೆ.
ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವ ಮೂಲಕ ಆರ್ಥಿಕ ಸಮತೋಲನವನ್ನು ಸಾಧಿಸುವುದೇ ಇದರ ಪ್ರಮುಖ ಉದ್ದೇಶವಾಗಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ತೈಲ ಬೆಲೆ ಸದ್ಯದಲ್ಲೇ ಹೆಚ್ಚಾಗುವಂತೆ ಸಾಧ್ಯತೆ ಇದ್ದು, ಅದರಿಂದ ಆರ್ಥಿಕ ಹೊರೆ ಹೆಚ್ಚಬಹುದು ಎಂದು ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಾರೆ. ಇದೇ ವೇಳೆ ಸುಮಾರು 7 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ದೇಶದಿಂದ ರಫ್ತು ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಈ ರೀತಿ ಆಮದು ರಫ್ತು ಅಸಮತೋಲನವನ್ನು ಕಡಿತಗೊಳಿಸುವುದರಿಂದ ರೂಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
Also Read: